ಶಿರಾದಲ್ಲಿ ನಡೆದ ಸಾಮೂಹಿಕ ಸತ್ಯನಾರಾಯಣಸ್ವಾಮಿ ಪೂಜೆ

ಶಿರಾ:

       ನಮ್ಮ ದೇಶದ ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಸಾಂಸ್ಕøತಿಕ ಪರಂಪರೆಗಳನ್ನು ವಿದೇಶಗಳು ಕೂಡಾ ಕೊಂಡಾಡುವಂತಾಗಿದ್ದು ನಮ್ಮ ಧಾರ್ಮಿಕ ಚಿಂತನೆಗಳನ್ನು ನಾನಾ ದೇಶಗಳು ಅನುಕರಿಸುವಂತಾಗಲು ಈ ಮಣ್ಣಿನ ಗಟ್ಟಿತನವೇ ಕಾರಣ ಎಂದು ಶ್ರೀ ಸಿದ್ಧರಬೆಟ್ಟ ಕ್ಷೇತ್ರದ ಶ್ರೀ ವೀರಭದ್ರ ಶಿವಾಚಾರ್ಯಸ್ವಾಮೀಜಿ ತಿಳಿಸಿದರು.

         ಶಿರಾ ನಗರದ ಸ್ವಾಮಿ ವಿವೇಕಾನಂದ ಕ್ರೀಡಾಂಗಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ನಡೆದ ಸಾಮೂಹಿಕ ಸತ್ಯನಾರಾಯಣಸ್ವಾಮಿ ಪೂಜಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಅವರು ಮಾತನಾಡುತ್ತಿದ್ದರು.

         ಆರ್ಥಿಕ ಸಂಕಷ್ಟದಿಂದ ಬಡತನದ ಬೇಗೆಯಲ್ಲಿ ನೊಂದಿರುವ ಅದೆಷ್ಟೋ ಜನತೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಾನಾ ರೂಪದಲ್ಲಿ ಆರ್ಥಿಕ ಸದೃಡತೆಯನ್ನು ತಂದು ಕೊಡುತ್ತಿದೆ. ಮಹಿಳಾ ಸಂಘಗಳನ್ನು ಅಸ್ತಿತ್ವಕ್ಕೆ ತಂದು ಸಾಲ ರೂಪದಲ್ಲಿ ಹಣವನ್ನು ನೀಡುವ ಮೂಲಕ ಅದೆಷ್ಟೋ ಕುಟುಂಬಗಳು ತಮ್ಮ ಅಸ್ತಿತ್ವ ರೂಪಿಸಿಕೊಳ್ಳಲು ಸಾದ್ಯವಾಗುತ್ತಿದೆ ಎಂದರು

          ವೀರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳದ ಜವಾಬ್ದಾರಿ ಹೊರುವ ಜೊತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೂಡಾ ಮಾಡದಷ್ಟು ಮಹತ್ವದ ಸೇವಾ ಕೈಂಕರ್ಯಗಳನ್ನು ಕೈಗೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ. ಮನುಷ್ಯನಿಗೆ ಕೇವಲ ಹಣ, ಅಧಿಕಾರವಿದ್ದರಷ್ಟೇ ಸಾಲದು. ಆತನ ಮನಸ್ಸಿಗೆ ಶಾಂತಿ, ನೆಮ್ಮದಿಯ ಅಗತ್ಯವೂ ಇದೆ ಅನ್ನುವುದನ್ನು ಮನಗಂಡ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಧಾರ್ಮಿಕ ಚಿಂತನೆಗಳನ್ನು ನೀಡುತ್ತಿದೆ ಎಂದು ಶ್ರೀ ವೀರಭದ್ರ ಶಿಚಾವಾರ್ಯಸ್ವಾಮೀಜಿ ಶ್ಲಾಘಿಸಿದರು.
ಮಾಜಿ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ ಇಂದಿನ ಯುವ ಪೀಳಿಗೆಯಲ್ಲಿ ದೈತ್ವದ ಚಿಂತನೆಗಳೇ ಮಾಯವಾಗುತ್ತಿರುವ ಸಂಗತಿ ಕಳವಳಕಾರಿಯಾಗಿದೆ. ದೇವರನ್ನು ನಂಬದೆ ಮಾಡುವ ಕಾಯಕಗಳು ನಿಜಕ್ಕೂ ಪೂರ್ಣಗೊಳ್ಳುವುದೇ ಇಲ್ಲ. ದೇಶದ ಸಾಂಸ್ಕøತಿಕ ಪರಂಪರೆಯಲ್ಲಿ ದೈವತ್ವಕ್ಕೆ ಮಹತ್ವವಿದೆ ಎಂದರು.

           ಬೆಂಗಳೂರಿನ ಕನ್ಸ್‍ಲ್‍ಟೆಂಟ್ ರೇಡಿಯಾಲಜಿಸ್ಟ್ ಡಾ.ರಾಜೇಶ್‍ಗೌಡ ಮಾತನಾಡಿ ಭಕ್ತಿ ಮತ್ತು ಆಧ್ಯಾತ್ಮಗಳು ಸಕಾರಾತ್ಮಕ ಶಕ್ತಿಗಳಾಗಿದ್ದು ದೇಶದ ಎರಡು ಕಣ್ಣುಗಳಂತಿರುವ ಈ ಶಕ್ತಿಗಳು ಎಲ್ಲರಲ್ಲೂ ಮೇಳೈಸಬೇಕು. ರಾಜ್ಯದ ನಾನಾ ಭಾಗಗಳಲ್ಲಿನ ಮಹಿಳಾ ಸಂಘಗಳಿಗೆ ಧರ್ಮಸ್ಥಳದ ಯೋಜನೆಗಳು ದುಡಿಯುವ ಶಕ್ತಿ ತುಂಬುತ್ತಿವೆ ಎಂದರು.

           ಕಾಳಿದಾಸ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಬಿ.ಕೆ.ಮಂಜುನಾಥ್ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯ ಸಂಘಗಳಿಂದ ತಾಲ್ಲೂಕಿನ ಮಹಿಳೆಯರಲ್ಲಿ ಸಂಘಟನೆಯ ಶಕ್ತಿ ಮೂಡಿದೆ. ಸ್ವತಂತ್ರವಾಗಿ ಸ್ವಯಂ ಉದ್ಯೋಗ ಸೃಷ್ಠಿಸಿಕೊಳ್ಳುವ ಶಕ್ತಿಯೂ ಮೂಡಿದೆ. ಇದರೊಟ್ಟಿಗೆ ಧಾರ್ಮಿಕ ಶಕ್ತಿಯನ್ನೂ ತುಂಬುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಈ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುವುದು ಅಗತ್ಯ ಎಂದರು.

           ನಗರಸಭಾ ಸದಸ್ಯ ಆರ್.ಉಗ್ರೇಶ್ ಮಾತನಾಡಿ ಕಳೆದ ಹಲವು ವರ್ಷಗಳಿಂದಲೂ ಧರ್ಮಸ್ಥಳ ಯೋಜನಾ ಸಂಘವು ಸಾಮೂಹಿಕ ಸತ್ಯನಾರಾಯಣಸ್ವಾಮಿ ಪೂಜಾ ಕಾರ್ಯಗಳನ್ನು ಕೈಗೊಳ್ಳುತ್ತಿದ್ದು ಈ ಭಾಗದಲ್ಲಿ ಕಳೆದು ಹೋಗಲಿದ್ದ ಧಾರ್ಮಿಕ ಭಾವನೆಗಳನ್ನು ಜೀವಂತವಾಗುಳಿಸುವ ಕ್ರಿಯಾಶೀಲ ಯತ್ನ ಮಾಡುತ್ತಿದೆ ಎಂದರು.

           ಪೂಜಾ ಸಮಿತಿಯ ಅಧ್ಯಕ್ಷ ಬಿ.ಆರ್.ನಾಗಭೂಷಣ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಗರಸಭೆಯ ಅಧ್ಯಕ್ಷ ಅಮಾನುಲ್ಲಾಖಾನ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಆರ್.ಮಂಜುನಾಥ್, ಕುಂಚಿಟಿಗರ ಸಂಘದ ಅಧ್ಯಕ್ಷ ಆರ್.ನಾಗರಾಜು, ಆರ್.ರಾಮು, ಡಾ.ರಾಮಕೃಷ್ಣ, ತಾವರೇಕೆರೆ ದೇವರಾಜು, ಶ್ರೀಮತಿ ಗೀತಾ ವಾಣಿ, ಪಿ.ಹೆಚ್.ಮಹೇಂದ್ರಪ್ಪ, ಎಸ್.ಮಹಾಲಿಂಗಪ್ಪ, ಜಿಲ್ಲಾ ಯೋಜನಾ ನಿದೇರ್ಶಕ ದಿನೇಶ್‍ಪೂಜಾರಿ, ತಾ.ಯೋಜನಾ ನಿರ್ದೇಶಕಿ ಶ್ರೀಮತಿ ಉಮಾ ಸೇರಿದಂತೆ ಪ್ರಗತಿ ಬಂಧು ಹಾಗೂ ಸಪ್ತಗಿರಿ ಸ್ವ-ಸಹಾಯ ಸಂಘಗಳ ಒಕ್ಕೂಟ ಸೇರಿದಂತೆ ವಿವಿಧ ಸಂಘಗಳ ಮಹಿಳಾ ಸದಸ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು. ಸಮಾರಂಭದಲ್ಲಿ ನೂರಾರು ಮಂದಿ ದಂಪತಿಗಳು ಸಾಮೂಹಿಕ ಸತ್ಯನಾರಾಯಣಸ್ವಾಮಿ ಪೂಜೆಯಲ್ಲಿ ಪಾಲ್ಗೊಂಡರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link