ಬೆಂಗಳೂರು:
ಚಾಕು ತೋರಿಸಿ ಬೆದರಿಸಿ ಪ್ರತಿರೋಧ ತೋರಿದವರಿಗೆ ಇರಿದು ದುಷ್ಕರ್ಮಿಗಳು ಪರಾರಿಯಾಗುತ್ತಿರುವ ಕೃತ್ಯಗಳು ನಗರದ ಹೊರವಲಯದಲ್ಲಿ ಹೆಚ್ಚುತ್ತಿದ್ದು ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ ನಾಲ್ವರು ಕಾರ್ಮಿಕರಿಗೆ ಚಾಕುವಿನಿಂದ ಇರಿದು ಮೊಬೈಲ್ ಹಾಗೂ ಹಣ ದೋಚಿ ಪರಾರಿಯಾಗಿದ್ದಾರೆ.
ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದ ಬಿಲ್ ಪೋರ್ಜ್ ಕಂಪನಿಯ ಕಾರ್ಮಿಕರಾದ ಆಂಧ್ರ ಮೂಲದ ಮಹಾನಂದ, ಉತ್ತರ ಭಾರತ ಮೂಲದ ಪೂರ್ಣಚಂದ್ರ ಹಾಗೂ ಇಬ್ಬರು ಕಾರ್ಮಿಕರ ಮೇಲೆ ಡಿಯೋ ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಶುಕ್ರವಾರ ಚಾಕುವಿನಿಂದ ಇರಿದು ನಗದು,ಮೊಬೈಲ್ ದೋಚಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಮಹಾನಂದ ಹಾಗೂ ಪೂರ್ಣ ಚಂದ್ರ ಅವರು ಸ್ಥಳೀಯ ಆಸ್ಪತ್ರೆಯ ತೀವ್ರ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನಿಬ್ಬರು ಕಾರ್ಮಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಚಿಕಿತ್ಸೆ ಪಡೆದು ತೆರಳಿದ್ದಾರೆ.ಈ ಸಂಬಂಧ ಹೆಬ್ಬಗೋಡಿ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಗಳಿಗಾಗಿ ಶೋಧ ನಡೆಸಿದ್ದಾರೆ.
ಡಿಯೋ ಸ್ಕೂಟರ್ನಲ್ಲಿ ಬಂದ ಗ್ಯಾಂಗ್ ಕಳೆದ ಮೂರು ದಿನಗಳಲ್ಲಿ ಇದೇ ಕೈಗಾರಿಕಾ ಪ್ರದೇಶದಲ್ಲಿ ಸುಮಾರು 13 ಜನರಿಗೆ ಚಾಕುವಿನಿಂದ ಇರಿದು ದರೋಡೆ ಮಾಡಿವೆ. ಕೈಗಾರಿಕಾ ಪ್ರದೇಶದಲ್ಲಿನ ರಸ್ತೆಗಳಲ್ಲಿ ಸರಿಯಾದ ಬೀದಿ ದೀಪಗಳು ಹಾಗೂ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿಲ್ಲದಿರುವುದೇ ಈ ಘಟನೆಗಳಿಗೆ ಪ್ರಮುಖ ಕಾರಣ ಎಂದು ಕಾರ್ಮಿಕರು ಆರೋಪಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
