ಬೆಂಗಳೂರು
ಉಪ್ಪಿನಕಾಯಿ ತುಂಬಿಕೊಂಡು ವೇಗವಾಗಿ ಹೋಗುತ್ತಿದ್ದ ಲಾರಿ ಉರುಳಿಬಿದ್ದು, ಓರ್ವ ಮೃತಪಟ್ಟು ಚಾಲಕ ಗಾಯಗೊಂಡಿರುವ ದುರ್ಘಟನೆ ಕುಮಾರಸ್ವಾಮಿ ಲೇಔಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ನೈಸ್ ರಸ್ತೆಯಲ್ಲಿ ನಡೆದಿದೆ.
ಮೃತಪಟ್ಟವರನ್ನು ಕುಂಬಳಗೋಡುವಿನ ದಿವಾಕರ್ ಯಾದವ್ (20)ಎಂದು ಗುರುತಿಸಲಾಗಿದೆ.ಗಾಯಗೊಂಡಿರುವ ಲಾರಿ ಚಾಲಕ ರವಿ ಅಲಿಯಾಸ್ ಚೇತನ್ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಚೆನ್ನೈನಿಂದ ಉಪ್ಪಿನಕಾಯಿಯನ್ನು ತೆಗೆದುಕೊಂಡು ಶನಿವಾರ ನಾಯಂಡಹಳ್ಳಿಗೆ ಕನಕಪುರ, ಹೊಸಕೆರೆಹಳ್ಳಿ ಮಾರ್ಗವಾಗಿ ಬರುತ್ತಿದ್ದ ಲಾರಿ ಮಾರ್ಗಮಧ್ಯೆ ಮೈಸೂರು ರಸ್ತೆಯ ಸೋಂಪುರ ಗೇಟ್ ಬಳಿ ರಾತ್ರಿ 9.20ರ ವೇಳೆ ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದಿದೆ.
ಚಾಲಕನ ಪಕ್ಕ ಕುಳಿತಿದ್ದ ದಿವಾಕರ್ ಯಾದವ್ ಅವರು ಲಾರಿಯಡಿ ಸಿಕ್ಕಿ ಸ್ಥಳದಲ್ಲೇ ಮೃತಪಟ್ಟರೆ, ಚಾಲಕ ಚೇತನ್ ದೂರಹಾರಿ ಗಾಯಗೊಂಡಿದ್ದಾರೆ. ಪ್ರಕರಣ ದಾಖಲಿಸಿರುವ ಕುಮಾರಸ್ವಾಮಿ ಲೇಔಟ್ ಸಂಚಾರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ