ಹುಳಿಯಾರು
ಕೊರೊನಾ ಎಂಬ ಮಹಾಮಾರಿ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದ್ದು ಕೃಷಿ ಕಾರ್ಮಿಕರ ಉದ್ಯೋಗ ಕಿತ್ತುಕೊಂಡು ಸಂಕಷ್ಟಕ್ಕೆ ದೂಡಿದೆ. ಸಂಸಾರ ನಿರ್ವಹಣೆಗೆ ಪರದಾಡುತ್ತಿರುವ ಜನರು ನೆರವಿಗಾಗಿ ಎದುರು ನೋಡುತ್ತಿದ್ದಾರೆ. ಸರ್ಕಾರ ಕೂಡ ಕೈ ಚೆಲ್ಲಿ ಕೂತಿರುವ ಈ ಸಂದರ್ಭದಲ್ಲಿ ಕೃಷಿ ರೈತನ ಕೈ ಹಿಡಿದಿದೆ.
ಹೌದು, ಮಳೆಯಾಶ್ರಿತ ಪ್ರದೇಶವಾದ ಚಿಕ್ಕನಾಯನಕನಹಳ್ಳಿ ತಾಲ್ಲೂಕಿನಲ್ಲಿ ಮುಂಗಾರಿನಲ್ಲಿ ಹೆಸರು, ಅಲಸಂದೆ, ಹಿಂಗಾರಿನಲ್ಲಿ ಹುರುಳಿ, ತೊಗರಿ ವಾಣಿಜ್ಯ ಬೆಳೆಯಾಗಿವೆ. ಆದರೆ ಕಳೆದ ಏಳೆಂಟು ವರ್ಷಗಳಿಂದ ಉತ್ತಮ ಮಳೆಯಾಗದೆ ಯಾವ ಬೆಳೆಯೂ ರೈತನ ಕೈ ಹಿಡಿಯಲಿಲ್ಲ. ಪರಿಣಾಮ ಹೈನುಗಾರಿಕೆ, ಕುರಿಕೋಳಿ ಸಾಕಾಣಿಕೆ, ಚಿಲ್ಲರೆ ವ್ಯಾಪಾರ, ದಿನಗೂಲಿ ಸೇರಿದಂತೆ ಇತರೆ ಕಸುಬಿನತ್ತ ರೈತರು ಮುಖ ಮಾಡಿದ್ದರು. ಆದರೆ ಕೊರೊನಾದಿಂದಾಗಿ ಈ ಕಸುಬುಗಳ ಆದಾಯಕ್ಕೂ ಸಂಚಕಾರ ಬಂದೊದಗಿತ್ತು. ಇಂತಹ ಸಂಕಷ್ಟದ ಕಾಲದಲ್ಲಿ ಭೂಮಿ ನಂಬಿದವರನ್ನು ಎಂದಿಗೂ ಕೈ ಬಿಡುವುದಿಲ್ಲ ಎನ್ನುವಂತೆ ಹೆಸರು ಮತ್ತು ಅಲಸಂದೆ ಬಂಪರ್ ಬೆಳೆ ಬಂದಿದೆ.
ತಾಲ್ಲೂಕಿನ ಹಂದನಕೆರೆ ಹೋಬಳಿಯಲ್ಲಿ ಈಗಾಗಲೇ ಕೊಯ್ಲು ಕಾರ್ಯ ಮುಗಿಸಿ ರೈತರು ಮಾರುಕಟ್ಟೆಗೆ ಹೆಸರುಕಾಳು ತರುತ್ತಿದ್ದಾರೆ. ನಿತ್ಯ ನೂರಾರು ರೈತರು ಮಾರುಕಟ್ಟೆಗೆ ಹೆಸರು, ಅಲಸಂದೆ ಜೊತೆ ಲಗ್ಗೆ ಇಡುತ್ತಿದ್ದು, ಕೊರೊನಾದಿಂದ ಕಳೆಗುಂದಿದ್ದ ಮಾರುಕಟ್ಟೆಗೆ ಈಗ ಜೀವಕಳೆ ಬಂದಿದೆ. ಮಾರುಕಟ್ಟೆಯಲ್ಲಿ ಎತ್ತ ಕಣ್ಣಾಯಿಸಿದರೂ ಹೆಸರು, ಅಲಸಂದೆ ರಾಶಿ ಹಾಗೂ ಚೀಲಗಳೆ ಕಾಣಸಿಗುತ್ತಿದ್ದು, ನಿತ್ಯ ಲಕ್ಷಾಂತರ ರೂ. ವಹಿವಾಟು ನಡೆಯುತ್ತಿದೆ. ಈ ಮೂಲಕ ರೈತರಿಗೂ ಕಷ್ಟದಲ್ಲಿ ನಾಲ್ಕು ಕಾಸು ಸಿಗುವ ಜೊತೆಗೆ ಮಾರುಕಟ್ಟೆ ವ್ಯವಹಾರ ನಂಬಿದ್ದ ವರ್ತಕರು, ಹಮಾಲರು, ವಾಹನದವರಿಗೂ ಶುಕ್ರದೆಸೆ ಆರಂಭವಾಗಿದೆ.
ಕಳೆದ ವಾರದಿಂದಲೂ ಉತ್ತಮ ಮಳೆಯಾಗುತ್ತಿರುವುದರಿಂದ ಹುಳಿಯಾರು, ಕಂದಿಕೆರೆ, ಚಿ.ನಾ.ಹಳ್ಳಿ ಕಸಬಾ ಹೋಬಳಿಯಲ್ಲೂ ಹದಿನೈದಿಪ್ಪತ್ತು ದಿನಗಳ ನಂತರ ಹೆಸರು ಮತ್ತು ಅಲಸಂದೆ ಉತ್ತಮ ಇಳುವರಿ ಬಂದು ಕಟಾವಿಗೆ ಬರುವ ನಿರೀಕ್ಷೆಯಿದೆ. ಅಲ್ಲದೆ ಅರಸೀಕೆರೆ ಮತ್ತು ಹೊಸದುರ್ಗ ತಾಲ್ಲೂಕಿನಲ್ಲೂ ಉತ್ತಮ ಇಳುವರಿಯಾಗುವುದಿದ್ದು, ಕೈಯಲ್ಲಿ ಕಾಸಿಲ್ಲದೆ ಪರದಾಡುತ್ತಿದ್ದ ರೈತರಿಗೆ ವರದಾನವಾಗಲಿದೆ. ಜೊತೆಗೆ ಪ್ರಮುಖ ಆಹಾರಧ್ಯಾನವಾಗಿ ಬಳಕೆ ಮಾಡುವ ತಮಿಳುನಾಡು, ಆಂಧ್ರ, ಮಹಾರಾಷ್ಟ್ರ, ಗುಜರಾತ್ ರಾಜ್ಯಗಳೂ ಸಹ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಪಟ್ಟಣದ ಮಾರುಕಟ್ಟೆಯಲ್ಲಿ ಖರೀದಿಯಾಗುವ ಹೆಸರುಕಾಳು ರಾಜ್ಯ ಸೇರಿದಂತೆ ನೆರೆ ರಾಜ್ಯಗಳಿಗೂ ರವಾನೆಯಾಗುತ್ತಿದ್ದು, ಪ್ರತಿನಿತ್ಯ ಮೂರ್ನಾಲ್ಕು ಲಾರಿ ಲೋಡ್ ರವಾನೆಯಾಗುತ್ತಿದೆ. ಕಳೆದ ತಿಂಗಳು ವ್ಯಾಪಾರವಿಲ್ಲದೆ ಬಿಕೋ ಎನ್ನುತ್ತಿದ್ದ ಎಪಿಎಂಸಿಯ ಅಂಗಡಿಗಳು ಇದೀಗ ರೈತರಿಂದ ತುಂಬಿದ್ದು ಅಂಗಡಿಯ ತುಂಬೆಲ್ಲಾ ಹೆಸರುಕಾಳಿನದ್ದೆ ಸದ್ದಾಗಿದೆ. ಕಳೆದ ವರ್ಷಕ್ಕೆ ಓಲಿಸಿದರೆ ಬೆಲೆಯೂ ಸಹ ಉತ್ತಮವಾಗಿದ್ದು ಕ್ವಿಂಟಾಲ್ ಹೆಸರಿಗೆ 5800 ರೂ, ಮಿಂಚುಕಾಳು 7500 ರೂ. ಅಲಸಂದೆ 4300 ರೂ. ದರವಿದೆ. ಒಟ್ಟಾರೆ ಕೊರೊನಾ ಸಂಕಷ್ಟದಲ್ಲೂ ಗ್ರಾಮೀಣ ಪ್ರದೇಶದ ಜನರಲ್ಲಿ ಸಂಭ್ರಮದ ವಾತಾವರಣ ಸೃಷ್ಟಿಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
