ಅಭ್ಯರ್ಥಿ ಆಯ್ಕೆಗೆ ತಂತ್ರಗಾರಿಕೆಯ ಗಾಳ ಹಾಕುವ ಹುನ್ನಾರ
ಶಿರಾ
ವಿಶೇಷ ವರದಿ: ಬರಗೂರು ವಿರೂಪಾಕ್ಷ
ಶಿರಾ ವಿಧಾನಸಭಾ ಕ್ಷೇತ್ರದ ಯಾವುದೇ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಪಕ್ಷಗಳದ್ದೇ ಸದಾ ಕಾರುಬಾರು. ಈವರೆಗೆ ನಡೆದಿರುವ ಚುನಾವಣೆಗಳ ಇತಿಹಾಸದ ಒಳ ಹೊಕ್ಕು ನೋಡಿದರೆ ಈ ಕ್ಷೇತ್ರ ಯಾವತ್ತೂ ಕೂಡ ಬಿಜೆಪಿಗೆ ವರದಾನವಾಗಿಯೆ ಇಲ್ಲ.
ಕೇಂದ್ರ ಹಾಗೂ ರಾಜ್ಯದಲ್ಲಿ ತನ್ನದೇ ಆದ ಹಿಡಿತವಿಟ್ಟುಕೊಂಡು ರಾಜ್ಯವನ್ನು ಕೇಸರಿಮಯ ಮಾಡಲು ಹೊರಟ ಬಿ.ಜೆ.ಪಿ. ಪಕ್ಷ ಆಪರೇಷನ್ ಕಮಲದ ಮೂಲಕ ವಿವಿಧ ಪಕ್ಷಗಳ ಶಾಸಕರನ್ನು ಬರಸೆಳೆದು ಅಪ್ಪಿಕೊಳ್ಳುವ ಮೂಲಕ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾರಣವಾಯಿತು.
ಜನತಾ ಪ್ರಭುವಿನ ಸ್ಪಷ್ಟ ತೀರ್ಮಾನದ ಬಲವಿಲ್ಲದೆಯೂ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಬಿ.ಜೆ.ಪಿ.ಯ ಸಾರಥಿಯಾದ ಯಡಿಯೂರಪ್ಪನವರು ಗದ್ದುಗೆಯ ಮೇಲೆ ಕೂತಾಗಿನಿಂದಲೂ ನೆಮ್ಮದಿಯಾಗಿರಲು ಸಾಧ್ಯವೇ ಆಗಿಲ್ಲ. ಕಳೆದ ವರ್ಷ ರಾಜ್ಯದಲ್ಲಿ ಸಂಭವಿಸಿದ ಅತಿವೃಷ್ಟಿ, ಕೊರೋನಾ ಮಹಾಮಾರಿಯ ಆತಂಕವಷ್ಟೇ ಅಲ್ಲದೆ ಪ್ರಸಕ್ತ ವರ್ಷವೂ ರಾಜ್ಯದಲ್ಲಿ ತಲೆದೋರಿದ ವರುಣಾರ್ಭಟದಿಂದ ರಾಜ್ಯ ಸರ್ಕಾರ ನೊಂದು ನಲುಗಿ ಹೋಗಿದೆ.
ಕಳೆದ ಎರಡು ವರ್ಷಗಳ ಹಿಂದಿನಿಂದಲೂ ರಾಜ್ಯದ ಅಭಿವೃದ್ಧಿಗೆ ಮೀಸಲಿಟ್ಟ ಅನುದಾನವನ್ನು ಮಂಜೂರು ಮಾಡಿದ ಖಜಾನೆಯ ಹಣವನ್ನು ಖರ್ಚು ಮಾಡಲು ಕೂಡ ಸಾಧ್ಯವಾಗದಂತಹ ಪರಿಸ್ಥಿತಿ ರಾಜ್ಯ ಸರ್ಕಾರಕ್ಕಿದ್ದು, ಮಹಾಮಾರಿ ಕೊರೋನಾ ಹೆಸರಲ್ಲಿ ಸರ್ಕಾರದ ಹಣ ನುಂಗುವವರ ಪಾಲಾಗಿರುವುದು ಈಗ ಗುಟ್ಟಾಗಿಯೇನೂ ಉಳಿದಿಲ್ಲ.
ಇಂತಹ ಸಂಕಷ್ಟದ ಸಮಯದಲ್ಲೂ ಶಿರಾ, ಆರ್.ಆರ್.ನಗರದ ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆಯ ದಿನಾಂಕವೂ ಪ್ರಕಟಗೊಂಡು ಕೊರೋನಾ ಅಬ್ಬರದಲ್ಲೂ ಮತದಾನ ನಡೆಸುವುದು ಸರ್ಕಾರಕ್ಕೆ ಅನಿವಾರ್ಯವೂ ಆಗಿದೆ. ಶಿರಾ ಕ್ಷೇತ್ರದ ಜೆ.ಡಿ.ಎಸ್. ಶಾಸಕ ಬಿ.ಸತ್ಯನಾರಾಯಣ್ ಅವರ ಅಕಾಲಿಕ ಮರಣ, ಆರ್.ಆರ್.ನಗರದ ಕಾಂಗ್ರೆಸ್ ಶಾಸಕ ಆಪರೇಷನ್ ಕಮಲಕ್ಕೆ ಒಳಗಾಗಿ ರಾಜೀನಾಮೆ ನೀಡಿದ ಹಿನ್ನೆಲೆ ಜೊತೆಗೆ ಇದೇ ಆರ್.ಆರ್.ನಗರದಲ್ಲಿನ ನಕಲಿ ಗುರುತಿನ ಪತ್ರಗಳ ಹಾವಳಿಯ ಹಿನ್ನೆಲೆಯಲ್ಲಿ ನ್ಯಾಯಾಲಯದ ಮೆಟ್ಟಿಲೇರಿದ್ದ ಪ್ರಸಂಗವೂ ಮುಕ್ತಾಯಗೊಂಡು ಈ ಎರಡೂ ಕ್ಷೇತ್ರಗಳ ಚುನಾವಣೆಯನ್ನು ಮಾತ್ರಾ ಚುನಾವಣಾ ಆಯೋಗ ಪ್ರಕಟಿಸಿದೆ.
ರಾಜ್ಯದಲ್ಲಿ ಉಪ ಚುನಾವಣೆಗಳನ್ನು ಕೈಗೊಳ್ಳುವ ನೆಪದಲ್ಲೂ ಕೂಡಾ ಬಿ.ಜೆ.ಪಿ. ಸರ್ಕಾರ ತನ್ನದೇ ಆದ ತಂತ್ರಗಾರಿಕೆ ಮೆರೆಯುತ್ತಿರುವುದು ಈಗ ಗುಟ್ಟಾಗಿಯೇನೂ ಉಳಿದಿಲ್ಲ. ಇತ್ತೀಚೆಗಷ್ಟೇ ಕೋವಿಡ್ ಹಿನ್ನೆಲೆಯಲ್ಲಿ ಮೃತಪಟ್ಟ ಬಸವ ಕಲ್ಯಾಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ನಾರಾಯಣರಾವ್ ಅವರ ಸ್ಥಾನಕ್ಕೂ ಸದರಿ ಕ್ಷೇತ್ರದಲ್ಲೂ ಉಪ ಚುನಾವಣೆ ಅನಿವಾರ್ಯವಾಗಿದೆ.
ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲೂ ಕೂಡಾ ಉಪ ಚುನಾವಣೆ ನಡೆಯಬೇಕಿದೆ ಕಾರಣ 2018 ರಲ್ಲಿ ಈ ಕ್ಷೇತ್ರದಲ್ಲಿ ಆಯ್ಕೆಗೊಂಡಿದ್ದ ಪ್ರತಾಪ್ಗೌಡ ಪಾಟೀಲ್ ಅವರ ವಿರುದ್ಧ ಪರಾಜಯಗೊಂಡ ಅಭ್ಯರ್ಥಿ ಶಾಸಕರ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಗೆಲುವನ್ನು ಅಸಿಂಧು ಮಾಡುವಂತೆ ನ್ಯಾಯಾಲಯದ ಮೊರೆ ಹೊಕ್ಕಿದ್ದು ಸೆ:27 ರಂದು ಈ ಪ್ರಕರಣವೂ ಇತ್ಯರ್ಥಗೊಂಡು ಉಪ ಚುನಾವಣೆ ಇಲ್ಲೂ ಕೂಡಾ ಅನಿವಾರ್ಯವಾಗಿದೆ. ಬೆಳಗಾವಿ ಸಂಸದ ಸುರೇಶ್ ಅಂಗಡಿ ಕೂಡಾ ಕೋವಿಡ್ನಿಂದ ಮೃತಪಟ್ಟಿದ್ದು ಇಲ್ಲೂ ಕೂಡಾ ಉಪ ಚುನಾವಣೆ ನಡೆಸುವುದು ಅನಿವಾರ್ಯವಾಗಿದೆ.
ಇಲ್ಲಿ ರಾಜ್ಯ ಬಿ.ಜೆ.ಪಿ. ಸರ್ಕಾರ ತಂತ್ರಗಾರಿಕೆಯ ಚುನಾವಣೆ ನಡೆಸುತ್ತಿರುವುದು ಎಂತಹ ಅಮಾಯಕರಿಗೂ ಕೂಡಾ ಅರ್ಥವಾಗುವಂತಿದೆ. ಕೆಲ ದಿನಗಳನ್ನು ಬಿಟ್ಟು ಬಾಕಿ ಇರುವ ಎಲ್ಲಾ ಕ್ಷೇತ್ರಗಳಲ್ಲೂ ಚುನಾವಣೆ ನಡೆಸಬಹುದಿತ್ತಾದರೂ ಈಗ ನಡೆಯುತ್ತಿರುವುದು ಕೇವಲ ಶಿರಾ ಹಾಗೂ ಆರ್.ಆರ್.ನಗರ ಕ್ಷೇತ್ರಗಳಿಗೆ ಮಾತ್ರಾ. ಮೊದಲು ಈ ಎರಡೂ ಕ್ಷೇತ್ರಗಳಿಗೆ ಗಾಳ ಹಾಕಿ ನಂತರ ಉಳಿದ ಉಪ ಚುನಾವಣೆಗಳಲ್ಲೂ ಕ್ಷೇತ್ರಗಳನ್ನು ಕೇಸರಿಮಯ ಮಾಡಿಕೊಳ್ಳುವ ಬಿ.ಜೆ.ಪಿ. ತಂತ್ರ ಎಷ್ಟರ ಮಟ್ಟಿಗೆ ಫಲಿಸುವುದೋ ಕಾದು ನೋಡಬೇಕಿದೆ.
ಸದರಿ ಎರಡೂ ಕ್ಷೇತ್ರದ ಚುನಾವಣೆಗಳಲ್ಲಿ ಬಿ.ಜೆ.ಪಿ.ಗೆ ಅತಿ ಮುಖ್ಯವಾಗಿ ಶಿರಾ ಕ್ಷೇತ್ರದ ಮೇಲೆ ಕಣ್ಣು ನೆಟ್ಟಿ ಬಿಟ್ಟಿದೆ. ತಳವೇ ಊರದ ಈ ಕ್ಷೇತ್ರದಲ್ಲಿ ಚಾಪೆ ಹಾಸಿಕೊಂಡು ಕೂರಲು ಬಿ.ಜೆ.ಪಿ. ತಯಾರಿ ನಡೆಸಿದೆ. ಚುನಾವಣೆ ದಿನಾಂಕ ಪ್ರಕಟಗೊಳ್ಳುವ ಮುನ್ನವೇ ಬೂತ್ಮಟ್ಟದ ಸಭೆಯನ್ನು ವ್ಯಾಪಕವಾಗಿ ನಡೆಸಿದ ಮಾಜಿ ಶಾಸಕ ಸುರೇಶ್ಗೌಡರೇ ಈ ಕ್ಷೇತ್ರದ ಅಭ್ಯರ್ಥಿ ಎಂದು ಬಿಂಬಿಸಿದರೂ ಪಟ್ಟು ಬಿಡದ ಈ ಕ್ಷೇತ್ರದ ಹಿಂದಿನ ಪರಾಜಿತ ಅಭ್ಯರ್ಥಿಗಳಾದ ಬಿ.ಕೆ.ಮಂಜುನಾಥ್ ಹಾಗೂ ಎಸ್.ಆರ್.ಗೌಡ ಪಟ್ಟು ಬಿಡದೆ ಟಿಕೇಟ್ಗಾಗಿ ಹಪಹಪಿಸಿದ್ದಾರೆ.
2008 ರ ಚುನಾವಣೆಯಲ್ಲಿ ಹಿಂದುಳಿದ ಕುರುಬ ಸಮುದಾಯದ ಬಿ.ಕೆ.ಮಂಜುನಾಥ್ 24,025 ಮತ ಪಡೆದು ಪರಾಜಯಗೊಂಡಿದ್ದರೆ ಇದೇ ಮಂಜುನಾಥ್ 2013 ಚುನಾವಣೆಯಲ್ಲಿ 18,884 ಮತಗಳನ್ನು ಪಡೆದು ಮತ್ತೆ ಪರಾಜಯಗೊಂಡರು. 2018ರ ಚುನಾವಣೆಯಲ್ಲಿ ವರಸೆಯನ್ನು ಬದಲಾಯಿಸಿದ ಬಿ.ಜೆ.ಪಿ. ಕುಂಚಿಟಿಗರ ಪ್ರಭಲ ಕ್ಷೇತ್ರವಾದ ಇಲ್ಲಿ ಇದೇ ಸಮುದಾಯದ ಮುಖಂಡರಿಗೆ ಟಿಕೇಟ್ ನೀಡಿದರೆ ಗೆಲುವು ಸಾದ್ಯವೆಂದು ಜಿಲ್ಲಾ ಹಾಲು ಒಕ್ಕೂಟದ ನಿದೇರ್ಶಕ ಎಸ್.ಆರ್.ಗೌಡ ಅವರಿಗೆ ಈ ಪಕ್ಷದಿಂದ ಟಿಕೇಟ್ ನೀಡಲಾಗಿತ್ತು ಆದರೆ ಅವರಿಗೆ ಜಾತಿ ಬೆಂಬಲವೂ ಲಭ್ಯವಾಗದೆ 16,959 ಮತಗಳನ್ನು ಪಡೆದು ಬಿ.ಸತ್ಯನಾರಾಯಣ್ ವಿರುದ್ಧ ಪರಾಜಯಗೊಂಡಿದ್ದರು.
ಈ ಎಲ್ಲಾ ಏಳುಬೀಳುಗಳನ್ನು ಕಂಡ ಬಿ.ಜೆ.ಪಿ. ಪಕ್ಷದ ವರಿಷ್ಠರು ಉಪ ಚುನಾವಣೆಯಲ್ಲಿ ಪ್ರಭಲ ಅಭ್ಯರ್ಥಿಯನ್ನು ಈ ಭಾರಿ ಕಣಕ್ಕಿಳಿಸುವ ಎಲ್ಲಾ ತಯಾರಿ ನಡೆಸಿದೆ. ಅಳೆದು ತೂಗಿ ಯಾರಿಗೆ ಟಿಕೇಟ್ ನೀಡಬೇಕೆಂಬ ಅಚಲ ವಿಶ್ವಾಸಕ್ಕೂ ಬರಲಾಗದೆ ಜಿಲ್ಲಾ ಬಿ.ಜೆ.ಪಿ. ಮುಖಂಡರು ಅಡಿಕೆಗೆ ಸಿಕ್ಕಿದ ಕತ್ತರಿಯಂತಾಗಿದ್ದಾರೆ.
ಶಿರಾ ಶಾಸಕರು ನಿಧನದ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಅವರ ಕುಟುಂಬಕ್ಕೆ ಜೆ.ಡಿ.ಎಸ್. ಟಿಕೇಟ್ ಲಭ್ಯವಾದರೆ ಅನುಕಂಪ ಕೆಲಸ ಮಾಡುತ್ತಾ, ಕಾಂಗ್ರೆಸ್ನ ಟಿ.ಬಿ.ಜಯಚಂದ್ರ ಅವರನ್ನು ಮಣಿಸಲು ಯಾವ ಅಭ್ಯರ್ಥಿ ಸೂಕ್ತ ಎಂಬ ಕಾಗುಣಿತದ ಲೆಕ್ಕಗಳು ಕೂಡಾ ಬಿ.ಜೆ.ಪಿ.ಗೆ ಸಂಕಟ ತಂದಿದೆ. ಎಸ್.ಆರ್.ಗೌಡ ಹಾಗೂ ಬಿ.ಕೆ.ಮಂಜುನಾಥ್ಗೆ ಟಿಕೇಟ್ ನೀಡಿದರೆ ಪುನಃ ಎಲ್ಲಿ ಕ್ಷೇತ್ರವನ್ನು ಕಳೆದುಕೊಳ್ಳುತ್ತೇವೆಯೋ ಎಂಬ ಆತಂಕವೂ ಈ ಪಕ್ಷಕ್ಕೆ ಇದ್ದು ಒಳಗೊಳಗೆ ಕಟ್ಟುಮಸ್ತಾದ ಅಭ್ಯರ್ಥಿ ತಂದು ಹಾಕಲು ಒಳ ಸಂಚು ನಡೆದಿದೆ.
ಕಳೆದ ಹಲವು ವರ್ಷಗಳಿಂದ ಸಮಾಜಸೇವೆ ಮಾಡುತ್ತಿರುವ ಡಾ.ಸಿ.ಎಂ.ರಾಜೇಶ್ಗೌಡ ಯಾವ ಪಕ್ಷದಲ್ಲೂ ಗುರ್ತಿಸಿಕೊಂಡಿಲ್ಲ ವಾದ್ದರಿಂದ ಅವರಿಗೇ ಟಿಕೇಟ್ ನೀಡಿ ಕ್ಷೇತ್ರದಲ್ಲಿ ಕೇಸರಿ ದ್ವಜ ಹಾರಿಸಲು ವರಿಷ್ಠರು ತಯಾರಿ ನಡೆಸಿದ್ದಾರೆ ಎನ್ನಲಾಗಿದ್ದು ರಾಜೇಶ್ಗೌಡಗೆ ಟಿಕೇಟ್ ನೀಡಿದರೆ ಬಿ.ಕೆ.ಮಂಜುನಾಥ್ ಮತ್ತು ಎಸ್.ಆರ್.ಗೌಡ ಅವರು ರಾಜೇಶ್ಗೌಡ ಅವರ ಬೆನ್ನಿಗೆ ನಿಂತು ಚುನಾವಣೆ ಮಾಡುತ್ತಾರಾ? ಎಂಬ ಅನುಮಾನವೂ ಆ ಪಕ್ಷದ ಮುಖಂಡರಲ್ಲಿದೆ.
ಸಮಾಜ ಸೇವಕ ಡಾ.ಸಿ.ಎಂ.ರಾಜೇಶ್ಗೌಡರಿಗೆ ಬಿ.ಜೆ.ಪಿ. ಟಿಕೇಟ್ ನೀಡಿದರೆ ಮೂರೂ ಪಕ್ಷಗಳಲ್ಲಿ ಹಣಾ ಹಣಿ ನಡೆಯಲಿದ್ದು ಜಯಚಂದ್ರಗೆ ಹಿನ್ನಡೆಯಾದರೂ ಅಚ್ಚರಿ ಇಲ್ಲ ಎಂಬಂತಹ ವಾತಾವರಣವಿದೆ. ಕಳೆದ ಎರಡು ದಿನಗಳ ರಾಜ್ಯ ರಾಜಕಾರಣದ ಬೆಳವಣಿಗೆಗಳನ್ನು ಅವಲೋಕಿಸಿದರೆ ಶಿರಾ ಉಪ ಚುನಾವಣೆಯಲ್ಲಿ ಬಿ.ಜೆ.ಪಿ. ಹಾಗೂ ಜೆ.ಡಿ.ಎಸ್. ವರಿಷ್ಠರು ಕೂತುಕೊಂಡು ಕಾಂಗ್ರೆಸ್ ಪಕ್ಷದ ಜಯಚಂದ್ರ ಅವರನ್ನು ಮಣಿಸಲು ತಂತ್ರ ಹೂಡಿದೆ ಎನ್ನಲಾಗುತ್ತಿದೆ.
ಇದಕ್ಕೆ ವ್ಯತಿರಿಕ್ತವಾಗಿ ನಿನ್ನೆಯಷ್ಟೇ ಶಿರಾದಲ್ಲಿ ನಡೆದ ಜೆ.ಡಿ.ಎಸ್. ಕಾರ್ಯಕರ್ತರ ಸಭೆಯಲ್ಲಿ ಶಾಸಕ ಗೌರಿಶಂಕರ್ ಹೇಳಿರುವ ಹೇಳಿಕೆ ಕೆಲ ಮುಖಂಡರನ್ನು ದಂಗು ಬಡಿಸಿದೆ. ಜಯಚಂದ್ರ ಅವರನ್ನು ಗೆಲ್ಲಿಸಲು ಬಿ.ಜೆ.ಪಿ. ಶಿರಾ ಕ್ಷೇತ್ರದಲ್ಲಿ ಡಮ್ಮಿ ಕ್ಯಾಡಿಡೇಟ್ ಹಾಕಲು ತಯಾರಿ ನಡೆಸಿದೆ ಎಂಬ ಮಾತು ಇದೀಗ ತುಂಬಾ ವೈರಲ್ ಆಗಿದೆ. ಇದೇ ಕಾರ್ಯಕರ್ತರ ಸಭೆಯಲ್ಲಿ ಸಭೆ ಉದ್ಘಾಟಿಸಿ ಹೆಚ್.ಡಿ.ಕುಮಾರಸ್ವಾಮಿ ಹೇಳಿರುವ ಜೆ.ಡಿ.ಎಸ್. ಪಕ್ಷ ಬಿ.ಜೆ.ಪಿ. ಪಕ್ಷದ ಬಿ ಟೀಂ ಅಲ್ಲಾ ಎಂಬ ಮಾತೂ ಕೂಡಾ ಮಹತ್ವ ಪಡೆದಿದೆ.ಒಟ್ಟಾರೆ ಹೇಳುವುದಾದರೆ ಸ್ಥಳೀಯ ಬಿ.ಜೆ.ಪಿ. ಪಕ್ಷದಲ್ಲಿ ಬರುವ ಉಪ ಚುನಾವಣೆಯಲ್ಲಿ ಗೆದ್ದುಬೀಗುವ ಮುಖದ ಅಭ್ಯರ್ಥಿಗಾಗಿ ಇನ್ನೂ ಕೂಡಾ ಹುಡುಕಾಟ ನಡೆಸಿದಂತೆ ಕಾಣಬರುತ್ತಿದ್ದು ಇನ್ನು ಎರಡು ದಿನಗಳಲ್ಲಿ ಸೂಕ್ತ ಅಭ್ಯರ್ಥಿಯ ಆಯ್ಕೆ ಆಗಬಲ್ಲ ಎಲ್ಲಾ ಸಾದ್ಯತೆಗಳೂ ಇವೆ.
ಕಳೆದ ಎರಡು ದಿನಗಳ ರಾಜ್ಯ ರಾಜಕಾರಣದ ಬೆಳವಣಿಗೆಗಳನ್ನು ಅವಲೋಕಿಸಿದರೆ ಶಿರಾ ಉಪ ಚುನಾವಣೆಯಲ್ಲಿ ಬಿ.ಜೆ.ಪಿ. ಹಾಗೂ ಜೆ.ಡಿ.ಎಸ್. ವರಿಷ್ಠರು ಕೂತುಕೊಂಡು ಕಾಂಗ್ರೆಸ್ ಪಕ್ಷದ ಜಯಚಂದ್ರ ಅವರನ್ನು ಮಣಿಸಲು ತಂತ್ರ ಹೂಡಿದೆ ಎನ್ನಲಾಗುತ್ತಿದೆ. ಇದಕ್ಕೆ ವ್ಯತಿರಿಕ್ತವಾಗಿ ನಿನ್ನೆಯಷ್ಟೇ ಶಿರಾದಲ್ಲಿ ನಡೆದ ಜೆ.ಡಿ.ಎಸ್. ಕಾರ್ಯಕರ್ತರ ಸಭೆಯಲ್ಲಿ ಶಾಸಕ ಗೌರಿಶಂಕರ್ ಹೇಳಿರುವ ಹೇಳಿಕೆ ಕೆಲ ಮುಖಂಡರನ್ನು ದಂಗು ಬಡಿಸಿದೆ. ಜಯಚಂದ್ರ ಅವರನ್ನು ಗೆಲ್ಲಿಸಲು ಬಿ.ಜೆ.ಪಿ. ಶಿರಾ ಕ್ಷೇತ್ರದಲ್ಲಿ ಡಮ್ಮಿ ಕ್ಯಾಡಿಡೇಟ್ ಹಾಕಲು ತಯಾರಿ ನಡೆಸಿದೆ ಎಂಬ ಮಾತು ಇದೀಗ ತುಂಬಾ ವೈರಲ್ ಆಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
