ಬೆಂಗಳೂರು
ಕೊರೊನಾದಿಂದ ಮೃತಪಟ್ಟವರ ಅಂತ್ಯ ಸಂಸ್ಕಾರಕ್ಕೆ ಸ್ಪಷ್ಟ ಕಾನೂನು ಜಾರಿಗೆ ತರಲಾಗುವುದು. ಶವ ಎಂದ ಕೂಡಲೇ ಅದನ್ನು ಅಮಾನವೀಯವಾಗಿ ನೋಡುವುದು ಮನುಷ್ಯತ್ವ ಅಲ್ಲ. ಇಂತಹ ಘಟನೆಯನ್ನು ಸರ್ಕಾರ ಖಂಡಿಸುತ್ತದೆ. ಮತ್ತೆ ಇಂತಹ ಘಟನೆಗೆ ಸರ್ಕಾರ ಆಸ್ಪದ ನೀಡುವುದಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾದಿಂದ ಮೃತ ಪಟ್ಟವರ ಅಂತ್ಯ ಸಂಸ್ಕಾರ ಅಮಾನವೀಯವಾಗಿ ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಇಂತಹ ಅಮಾನವೀಯವಾಗಿ ಅಂತ್ಯ ಸಂಸ್ಕಾರ ಮಾಡಿದ ಬಗ್ಗೆ ಎರಡು ಮೂರು ಕಡೆಯಿಂದ ದೂರ ಬಂದಿವೆ. ಬಳ್ಳಾರಿಯ ಘಟನೆಗೆ ತಕ್ಷಣ ಕ್ರಮ ವಹಿಸಲಾಗಿದೆ. ಅದೊಂದು ಅಮಾನವೀಯ ಘಟನೆ. ಅಲ್ಲಿನ ಜಿಲ್ಲಾಧಿಕಾರಿ ಕೂಡ ಕ್ಷಮೆಯಾಚಿಸಿದ್ದಾರೆ. ಪ್ರಕರಣದ ಸಂಬಂಧ 6 ಜನರನ್ನು ಅಮಾನತು ಮಾಡಲಾಗಿದೆ. ಇನ್ನು ಮುಂದೆ ಇಂತಹ ಅಚಾತುರ್ಯ ನಡೆಯದ ರೀತಿ ನೋಡಿಕೊಳ್ಳುತ್ತೇವೆ.
ಶೀಘ್ರವೇ ಇದಕ್ಕಾಗಿ ವಿಶೇಷ ಕಾನೂನು ಜಾರಿಗೆ ತರಲಾಗುವುದು ಎಂದು ಸಚಿವರು ಭರವಸೆ ನೀಡಿದರು.ನಿನ್ನೆ ತಜ್ಞರ ಜೊತೆ ಚರ್ಚೆ ನಡೆಸಲಾಗಿದೆ. ರೋಗದ ಲಕ್ಷಣ ಇರುವವರು ಮತ್ತು ಲಕ್ಷಣ ಇಲ್ಲದವರಿಗೂ ಪಾಸಿಟಿವ್ ಇರುತ್ತದೆ. ಅವರಿಗೆ ಯಾವುದೇ ರೋಗ ಲಕ್ಷಣ ಇರುವುದಿಲ್ಲ. ಅಂತಹವರನ್ನು ಎ ಕ್ಯಾಟಗರಿ ಎಂದು ಪರಿಗಣಿಸಲು ತೀರ್ಮಾನಿಸಲಾಗಿದೆ. ಮೈಲ್ಡ್ ಮತ್ತು ಎ ಸಿಂಟಂಮ್ಸ್ ಇರುವವರಿಗೆ ಮನೆಯಲ್ಲಿ ಚಿಕಿತ್ಸೆ ಕೊಡುವ ಬಗ್ಗೆ ತಜ್ಞರು ಸಲಹೆ ನೀಡಿದ್ದಾರೆ ಎಂದರು.
ವಿಶ್ವದಲ್ಲಿ ಅನೇಕ ಕಡೆ ಹೀಗೆ ಮಾಡಲಾಗುತ್ತಿದೆ. ಇಲ್ಲಿಯೂ ಅದೇ ಮಾದರಿ ಅನುಸರಿಸಲು ಸಲಹೆ ನೀಡಿದ್ದಾರೆ. ಮೇಲೆ ನಿಗಾ ಇಡುವ ಕೆಲಸ ಮಾಡುತ್ತೇವೆ. ರೋಗದ ಲಕ್ಷಣ ತೀವ್ರ ಇದ್ದರೆ ಅವರನ್ನು ತಕ್ಷಣ ಆಸ್ಪತ್ರೆಗೆ ಸೇರಿಸುವ ಕೆಲಸ ಮಾಡಲು ನಿರ್ಧರಿಸಲಾಗಿದೆ ಎಂದರು.
ಕೊರೊನಾ ಕೇರ್ ಸೆಂಟರ್ ನಿರ್ಮಾಣ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕೇರ್ ಸೆಂಟರ್ ಎನ್ನುವುದು ಡೈನಮಿಕ್ ನಂಬರ್ಸ್. ಸೊಂಕಿತರ ಸಂಖ್ಯೆ ಹಚ್ಚಾದ ಹಾಗೆ ಕೇರ್ ಸೆಂಟರ್ ಹೆಚ್ಚಳ ಮಾಡಬೇಕು.
ಮಾರ್ಗಸೂಚಿಗಳನ್ನು ನಾವು ಬದಲಾವಣೆ ಮಾಡುತ್ತಿದ್ದೇವೆ. ನಿನ್ನೆ ಪರಿಣಿತರ ಜೊತೆ ಚರ್ಚೆ ಮಾಡಿದ ಮೇಲೆ ಕೆಲವು ಸಲಹೆ ಕೊಟ್ಟಿದ್ದಾರೆ. ಅದರ ಸಾಧಕ – ಬಾಧಕ ಚರ್ಚೆ ಮಾಡಲಾಗುತ್ತಿದೆ. ಇಂದು ಕೂಡ ಅಧಿಕಾರಿಗಳ ಸಭೆ ಮಾಡುತ್ತೇವೆ. ಈ ಸಭೆಯ ಬಳಿಕ ಮುಖ್ಯಮಂತ್ರಿ ಹಾಗೂ ಟಾಸ್ಕ್ ಫೋರ್ಸ್ ಜೊತೆ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳಲಾಗುವುದು. ಅಂತಿಮ ರೂಪುರೇಷೆ ಇಂದು ಸಂಜೆ ಅಥವಾ ನಾಳೆಯೊಳಗೆ ಬಿಡುಗಡೆ ಮಾಡುತ್ತೇವೆ ಎಂದು ಸುಧಾಕರ್ ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/04/drsudha.gif)