ಬೆಂಗಳೂರು
ವಿವಿಧ ಖಾಸಗಿ ಸಂಸ್ಥೆಗಳು, ಸೊಸೈಟಿಗಳು, ಸಂಘ, ಸಂಸ್ಥೆಗಳಿಗೆ ಸರ್ಕಾರ ನೀಡಿರುವ ಜಮೀನು, ಜಾಗದ ಗುತ್ತಿಗೆಯನ್ನು ಶಾಶ್ವತವಾಗಿ ಅದೇ ಸಂಸ್ಥೆಗಳಿಗೆ ಬಿಟ್ಟು ಕೊಡುವ ಮಹತ್ವದ ತೀರ್ಮಾನವನ್ನು ರಾಜ್ಯ ಸಂಪುಟ ಸಭೆ ಕೈಗೊಂಡಿದೆ.ಸಂಪುಟ ಸಭೆ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಕಾನೂನು ಸಚಿವ ಜೆ.ಸಿ.ಮಾಧಸ್ವಾಮಿ, ಅದೇ ಸಂಸ್ಥೆಗೆ ಭೂಮಿ ಬಿಟ್ಟುಕೊಡುವ ಪ್ರಸ್ತಾವನೆಗೆ ಅನುಮತಿ ನೀಡಲಾಗಿದೆ. ಭೂಮಿಯನ್ನು ನೀಡಿರುವ ಉದ್ದೇಶಕ್ಕಾಗಿ ಮಾತ್ರ ಬಳಸಿರಬೇಕು. ಒಂದು ವೇಳೆ ಭೂಮಿಯನ್ನು ಬಳಕೆ ಮಾಡಿಲ್ಲದಿದ್ದರೆ ಅದನ್ನು ವಾಪಸು ಪಡೆಯಬಹುದು ಎಂದರು.
ಕೋವಿಡ್ 19 ಸೋಂಕಿಗೆ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳಿಗೆ ಅನುಮತಿ ನೀಡಿದ್ದು, ಇದಕ್ಕಾಗಿ ಚಿಕಿತ್ಸಾ ದರ ನಿಗದಿ ಮಾಡಲಾಗಿದೆ. ಇದಕ್ಕೆ ಸಂಪುಟ ಸಭೆ ಅನುಮತಿ ನೀಡಿದ್ದು, ಖಾಸಗಿ ಆಸ್ಪತ್ರೆಗಳ ದರಗಳ ಬಗ್ಗೆ ತಮ್ಮ ಆಕ್ಷೇಪ ವ್ಯಕ್ತಪಡಿಸಿವೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅವರು ಇಂದು ಅವರ ಜೊತೆ ಸಭೆ ನಡೆಸಲಿದ್ದು, ದರದಲ್ಲಿ ಪರಿಷ್ಕರಣೆಯಾಗುವ ಸಾಧ್ಯತೆ ಇದೆ ಎಂದು ಮಾಧುಸ್ವಾಮಿ ತಿಳಿಸಿದರು.
ಕರ್ನಾಟಕ ಕೈಗಾರಿಕೆ ಸೌಲಭ್ಯ ತಿದ್ದುಪಡಿ ವಿದೇಯಕಕ್ಕೆ ಅಸ್ತು:
ಭಾರೀ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಮಾತನಾಡಿ, ರಾಜ್ಯದ ಕೈಗಾರಿಕೆ ವ್ಯವಸ್ಥೆಯಲ್ಲಿ ಬದಲಾವಣೆ ತರರುವ ಉದ್ದೇಶದಿಂದ ಕರ್ನಾಟಕ ಕೈಗಾರಿಕೆ ಸೌಲಭ್ಯ ತಿದ್ದುಪಡಿ ವಿಧೇಯಕಕ್ಕೆ ಸಂಪುಟ ಅನುಮೋದನೆ ನೀಡಿದೆ ಎಂದರು. ಈ ತಿದ್ದುಪಡಿಯಿಂದ ಕೈಗಾರಿಕಾ ವ್ಯವಸ್ಥೆಯಲ್ಲಿ ಬದಲಾವಣೆಯಾಗಲಿದ್ದು, ಈ ತಿದ್ದುಪಡಿ ಕಾನೂನಿಂದ ಉನ್ನತ ಮಟ್ಟದ ಸಮಿತಿ ಮತ್ತು ಜಿಲ್ಲಾ ಮಟ್ಟದ ಸಮಿತಿ ಅನುಮೋದನೆ ನೀಡಿದರೆ, ಕೈಗಾರಿಕೆಯನ್ನು ಅದೇ ಭೂಮಿಯಲ್ಲಿ ತಕ್ಷಣ ಪ್ರಾರಂಭಿಸಲು ಅವಕಾಶ ದೊರೆಯಲಿದೆ. ಗುಜರಾತ್ ಮತ್ತು ರಾಜಸ್ತಾನದಲ್ಲಿ ಇದೇ ರೀತಿಯ ಕಾನೂನಿದೆ. ರಾಜ್ಯದಲ್ಲಿ ಎಲ್ಲಾ ಕೈಗಾರಿಕೆಗಳಿಗೂ ಈ ಕಾನೂನು ಅನ್ವಯವಾಗಲಿದೆ ಎಂದರು.
ತಕ್ಷಣವೇ ಕೈಗಾರಿಕೆಗಳಿಗೆ ಏಕಗವಾಕ್ಷಿ ವ್ಯವಸ್ಥೆಯಡಿ ಎಲ್ಲಾ ಅನುಮತಿ ಸಿಗಲಿದೆ. ಜಿಲ್ಲಾ ಮಟ್ಟದ ಸಮಿತಿ ಸಭೆಯಲ್ಲಿ ಅನುಮತಿ ದೊರೆತ ತಕ್ಷಣವೇ ಸಿವಿಲ್ ಕಾಮಗಾರಿ ಆರಂಭವಾಗಲಿದೆ. ಎಲ್ಲಾ ಕಾಮಗಾರಿಗಳ ಅನುಮತಿಗಾಗಿ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. 15 ಕೋಟಿ ರೂ. ಒಳಗೆ ಬಂಡವಾಳ ಹೂಡಿರುವ ಕೈಗಾರಿಕೆಗಳು ಜಿಲ್ಲಾ ಸಮಿತಿ ವ್ಯಾಪ್ತಿಗೆ ಬರಲಿದ್ದರೆ, ಈ ಮೊತ್ತಕ್ಕಿಂತ ಮೇಲ್ಪಟ್ಟ ಕೈಗಾರಿಕೆಗಳು ರಾಜ್ಯಮಟ್ಟದ ಸಮಿತಿ ಸುಪರ್ದಿಗೆ ಒಳಪಡಲಿದೆ. ಇದರ ಜೊತೆಗೆ ವಿದ್ಯುತ್ ವಾಹನ ತಯಾರಿಕಾ ಕೈಗಾರಿಕೆಗಳಿಗೆ ಕಂದಾಯ ಇಲಾಖೆ ಮುದ್ರಾಂಕ ಶುಲ್ಕದಿಂದ ವಿನಾಯಿತಿ ನೀಡಲು ನಿರ್ಧರಿಸಿದೆ ಎಂದರು.
ಸಂಪುಟ ಸಭೆಯ ಪ್ರಮುಖ ತೀರ್ಮಾನ:
1) 2021 ನೇ ಸಾಲಿನ ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿಗೆ ಹೆಸರುಗಳನ್ನು ಶಿಫಾರಸ್ಸು ಮಾಡಲು ಸಂಪುಟ ಉಪ ಸಮಿತಿ ರಚನೆ
2) ಕರ್ನಾಟಕ ಶಾಸಕರು, ಜನಪ್ರತಿನಿಧಿಗಳ ವೇತನ ,ಪಿಂಚಣಿ, ಭತ್ಯೆ ಇತರೆ (ತಿದ್ದುಪಡಿ) 2020ರ ವಿಧೇಯಕಕ್ಕೆ ಅನುಮೋದನೆ. ಸಚಿವ, ಶಾಸಕರ ವೇತನದಲ್ಲಿ ಶೇ.30 ಕಡಿತಕ್ಕೆ ಅಸ್ತು.
3) ವಿವಿಧ ಯೋಜನೆಗಳಲ್ಲಿನ ವಿವಿಧ ಹಂತದಲ್ಲಿರುವ 9.74 ಲಕ್ಷ ವಸತಿ ಕಾಮಗಾರಿಗಳಿಗೆ 10,194.4 ಕೋಟಿ ರೂ ಬಿಡುಗಡೆ ಮಾಡಲು ಅನುಮೋದನೆ
4) ಜೀವ ರಕ್ಷಕ ಸಾಧನಗಳನ್ನು ಒಳಗೊಂಡ 120 ಆ?ಯಂಬುಲೆನ್ಸ್ ಗಳನ್ನು 32.04 ಕೋಟಿ ರೂ ವೆಚ್ಚದಲ್ಲಿ ಖರೀದಿಗೆ ಅನುಮೋದನೆ.
ತಿರುಪತಿ ತಿರುಮಲದಲ್ಲಿ ಕರ್ನಾಟಕ ಹೊಂದಿರುವ 7.5 ಎಕರೆ ಭೂಮಿಯಲ್ಲಿ 200 ಕೋಟಿ ರೂ. ಮೊತ್ತದಲ್ಲಿ ಕಲ್ಯಾಣ ಮಂಟಪ, ಯಾತ್ರಿ ನಿವಾಸ, ಕಲ್ಯಾಣಿ, ಇತರೆ ಸೌಲಭ್ಯ ಕಲ್ಪಿಸುವ ಯೋಜನೆಗೆ ಅನುಮೋದನೆ. ತಿರುಮಲ ತಿರುಪತಿ ದೇವಸ್ಥಾನ ಆಡಳಿತ ಮಂಡಳಿ ಯೋಜನೆ ಕಾರ್ಯಗತಗೊಳಿಸಲು ಸೂಚಿಸಲಾಗಿದೆ.
5) 406.41 ಕೋಟಿ ರೂ ರೈಲ್ವೆ ಲೈನ್ ಡಬ್ಲಿಂಗ್ ಕಾಮಗಾರಿಗೆ ಅನುಮೋದನೆ. ಬೈಯಪ್ಪನಹಳ್ಳಿ- ಹೊಸೂರು -48 ಕಿ.ಮೀ,ಯಶವಂತಪುರ-ಚನ್ನಸಂದ್ರ 21.70 ಕಿ.ಮೀಗೆ ಕಾಮಗಾರಿಗೆ ಅಸ್ತು.
6) ಪಿಪಿಪಿ ಮಾದರಿಯಲ್ಲಿ ಉಪನಗರ ರೈಲು ಯೋಜನೆ ಅನುದಾನ ಕಡಿತಗೊಳಿಸಿ 15,767 ಕೋಟಿ ರೂ ಪರಿಷ್ಕೃತ ಪ್ರಸ್ತಾವನೆಗೆ ತಾತ್ವಿಕ ಅನುಮೋದನೆ.
7) ಕಾವೇರಿ ನೀರಾವರಿ ನಿಗಮಕ್ಕೆ ಶೇ 40% ಬಂಡವಾಳ ಮತ್ತು ರಾಜಸ್ವ ವೆಚ್ಚ ನೀಡಲು ಅನುಮೋದನೆ
8) ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನು 40 ವರ್ಷ ಅವಧಿಗೆ ನಿರಾಣಿ ಶುಗರ್ಸ್ ಸಂಸ್ಥೆಗೆ 400 ಕೋಟಿ ರೂ.ಗೆ ಗುತ್ತಿಗೆ ನೀಡಲು ಅನುನೋದನೆ
9) ಕೋವಿಡ್ ಅವಧಿ ಮುಗಿಯುವ ವರೆಗೆ ಬೆಂಗಳೂರಿನಲ್ಲಿರುವ ಎಲ್ಲಾ 35 ಪಿಎಚ್ ಸಿ, 14 ಎಚ್ ಸಿಎಚ್ ಗಳನ್ನು ಬಿಬಿಎಂಪಿ ವ್ಯಾಪ್ತಿಗೆ ನೀಡಲು ನಿರ್ಧಾರ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








