ತುಮಕೂರು
ಕೊರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಜನಜಾಗೃತಿ ಮೂಡಿಸುವ ಸಲುವಾಗಿ ತುಮಕೂರು ನಗರದಲ್ಲಿ ಬುಧವಾರ ಸಂಜೆ ಸಶಸ್ತ್ರ ಪೊಲೀಸರ ಬೃಹತ್ ಪಥಸಂಚಲನ ನಡೆದಿದ್ದು, ಇದು ನಗರದಾದ್ಯಂತ ಸಾರ್ವಜನಿಕರಲ್ಲಿ ತೀವ್ರ ಸಂಚಲನ ಉಂಟುಮಾಡಿದೆ.
ಬುಧವಾರ ಸಂಜೆ 4-30 ರಿಂದ ರಾತ್ರಿ 7 ಗಂಟೆಯವರೆಗೆ ಒಟ್ಟು ಸುಮಾರು 6 ಕಿ.ಮೀ.ಗಳಷ್ಟು ದೂರ ಈ ಪಥಸಂಚಲನ ನಡೆದು, ಜನರ ಗಮನ ಸೆಳೆಯಿತು. 100 ಜನ ಸಶಸ್ತ್ರ ಪೊಲೀಸರ ಪಥಸಂಚಲನವು ಪರಿಣಾಮಕಾರಿಯಾಗಿತ್ತು.ನಗರದ ಬಿ.ಜಿ.ಎಸ್. ವೃತ್ತ (ಟೌನ್ ಹಾಲ್ ವೃತ್ತ)ದಲ್ಲಿ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಡಾ. ಕೋನಾ ವಂಶಿಕೃಷ್ಣ ಅವರು ಈ ಪಥಸಂಚಲನಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ತುಮಕೂರು ಉಪವಿಭಾಗಾಧಿಕಾರಿ ಅಜಯ್, ತಹಸೀಲ್ದಾರ್ ಮೋಹನ್ಕುಮಾರ್, ನಗರ ಡಿವೈಎಸ್ಪಿ ತಿಪ್ಪೇಸ್ವಾಮಿ, ಪಾಲಿಕೆಯ ಆರೋಗ್ಯಾಧಿಕಾರಿ ಡಾ. ನಾಗೇಶ್ ಕುಮಾರ್, ನಗರ ಸರ್ಕಲ್ಇನ್ಸ್ಪೆಕ್ಟರ್ ನವೀನ್, ತಿಲಕ್ ಪಾರ್ಕ್ ಸರ್ಕಲ್ ಇನ್ಸ್ಪೆಕ್ಟರ್ ಪಾರ್ವತಮ್ಮ, ಜಿಲ್ಲಾ ಸಶಸ್ತ್ರ ಪೊಲೀಸ್ ಮೀಸಲು ಪಡೆಯ ಇನ್ಸ್ಪೆಕ್ಟರ್ ರಾಮಕೃಷ್ಣಯ್ಯ, ತಿಲಕ್ಪಾರ್ಕ್ ಠಾಣೆ ಸಬ್ಇನ್ಸ್ಪೆಕ್ಟರ್ಗಳಾದ ನವೀನ್ ಮತ್ತು ಭಾಗ್ಯಲಕ್ಷ್ಮೀ (ಕ್ರೈಂ ವಿಭಾಗ), ಜಯನಗರ ಠಾಣೆ ಸಬ್ಇನ್ಸ್ಪೆಕ್ಟರ್ ಶೇಷಾದ್ರಿ, ತುಮಕೂರು ನಗರ ಠಾಣೆ ಸಬ್ಇನ್ಸ್ಪೆಕ್ಟರ್ ವಿಜಯಲಕ್ಷ್ಮೀ, ಎನ್.ಇ.ಪಿ.ಎಸ್. ಸಬ್ಇನ್ಸ್ಪೆಕ್ಟರ್ ಮಂಜುಳಾ ಮತ್ತು ಸಿಬ್ಬಂದಿಗಳು ಹಾಜರಿದ್ದರು.
ಶಾಸಕರು, ಮೇಯರ್ ಭಾಗಿ
ಪಥಸಂಚಲನದ ಮಾರ್ಗ ಮಧ್ಯೆ ತುಮಕೂರು ನಗರದ ಶಾಸಕ ಜಿ.ಬಿ.ಜ್ಯೋತಿಗಣೇಶ್ ಮತ್ತು ಮಹಾನಗರ ಪಾಲಿಕೆ ಮೇಯರ್ ಫರೀದಾಬೇಗಂ ಸಹ ಪಥಸಂಚಲನದಲ್ಲಿ ಹೆಜ್ಜೆ ಹಾಕಿದರು.
100 ಸಶಸ್ತ್ರ ಪೊಲೀಸರು
ತುಮಕೂರು ಜಿಲ್ಲಾ ಸಶಸ್ತ್ರ ಪೊಲೀಸ್ ಪಡೆ (ಡಿ.ಎ.ಆರ್.)ಯ ಒಂದು ಟಾಸ್ಕ್ ಫೋರ್ಸ್ ತಂಡ ಹಾಗೂ ಡಿ.ಎ.ಆರ್. ಸಿಬ್ಬಂದಿ ಸೇರಿ ಒಟ್ಟು 100 ಜನ ಪೊಲೀಸರು ಈ ಪಥಸಂಚಲನದಲ್ಲಿದ್ದರು. ಇವರೊಡನೆ 25 ಜನ ಕಂದಾಯ ಇಲಾಖೆ ಸಿಬ್ಬಂದಿ, 10 ಜನ ಆಶಾ ಕಾರ್ಯಕರ್ತೆಯರು ಸಹ ಹೆಜ್ಜೆಹಾಕಿದರು. ಈ ಸಂದರ್ಭದಲ್ಲಿ ಕೊರೊನಾ ಸೋಂಕಿನ ತಡೆಗೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ, ಅನಾವಶ್ಯಕವಾಗಿ ಮನೆಯಿಂದ ಹೊರಬರಬಾರದೆಂಬ ಬಗ್ಗೆ ಧ್ವನಿವರ್ಧಕದ ಮೂಲಕ ಹಾಗೂ ಕರಪತ್ರಗಳ ಮೂಲಕ ಜನರಿಗೆ ಜಾಗೃತಿ ಮೂಡಿಸಲಾಯಿತು.
ನಗರದ ಬಿ.ಜಿ.ಎಸ್. ವೃತ್ತದಿಂದ ಹೊರಟ ಪಥಸಂಚಲನವು ಬಿ.ಎಚ್.ರಸ್ತೆ, ಲಕ್ಕಪ್ಪ ವೃತ್ತದ ಮೂಲಕ ಜೆ.ಸಿ. ರಸ್ತೆ ಪ್ರವೇಶಿಸಿತು. ಬಳಿಕ ಮಂಡಿಪೇಟೆ ಮುಖ್ಯರಸ್ತೆಯ ಮೂಲಕ ಹಾದು, ಪೂರ್ ಹೌಸ್ ಕಾಲೋನಿ, ನಜರಾಬಾದ್, ಮೆಳೆಕೋಟೆ ರಸ್ತೆ ಮೂಲಕ ಮರಳೂರು ದಿಣ್ಣೆ ತಲುಪಿ ಮುಕ್ತಾಯಗೊಂಡಿತು. ಸೇನಾ ಸಮವಸ್ತ್ರದಲ್ಲಿದ್ದ ಸಶಸ್ತ್ರ ಪೊಲೀಸರ ಪಥಸಂಚಲನವು ಆ ಎಲ್ಲ ಪ್ರದೇಶದ ಜನರ ಮೇಲೆ ವಿಶೇಷ ಪರಿಣಾಮ ಬೀರಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
