ಮಳೆ ಮಾಯ; ಚಿತ್ರದುರ್ಗದ ರೈತರಲ್ಲಿ ದಿಗಿಲು ಹುಟ್ಟಿಸಿದೆ ಬಿಸಿಲು

ಚಿತ್ರದುರ್ಗ

    ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬಾರದ ಹಿನ್ನೆಲೆಯಲ್ಲಿ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಬೆಳೆಗಳು ಬಾಡುತ್ತಿದ್ದು, ಸಾವಿರಾರು ರೈತರು ಆತಂಕದಲ್ಲಿದ್ದಾರೆ.ಕಳೆದ ಒಂದು ವಾರದಿಂದ ಬಿಸಿಲು ಜೋರಾಗಿದೆ. ರಾಗಿ, ಶೇಂಗಾ, ಮೆಕ್ಕೆಜೋಳ, ಈರುಳ್ಳಿ, ತೊಗರಿ ಇತರೆ ಬೆಳೆಗಳು ಫಸಲಿಗೆ ಬಂದು ನಿಂತಿದ್ದು, ಕಳೆದ ಎರಡು ಮೂರು ವಾರಗಳಿಂದ ಮಳೆ ಬಾರದ ಕಾರಣ ಬೆಳೆಗಳು ಒಣಗುತ್ತಿವೆ. ಕೈಗೆ ಬಂದ ತುತ್ತು ಬಾಯಿಗೆ ಬರದಂಥ ಪರಿಸ್ಥಿತಿ ಎದುರಾಗಿದೆ. ಜಿಲ್ಲೆಯಲ್ಲಿ ಕಳೆದ ತಿಂಗಳು ಮುಂಗಾರು ಮಳೆ ಅಬ್ಬರಿಸಿದ್ದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿತ್ತು. ಅದರಂತೆ ರೈತರು ಉತ್ಸಾಹದಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದರು. ಆದರೆ ಇದೀಗ ಮಳೆ ನಿಂತು, ಬಿಸಿಲು ಹೆಚ್ಚಾಗಿರುವುದು ಮತ್ತೆ ರೈತರನ್ನು ಆತಂಕಕ್ಕೆ ದೂಡಿದೆ.

ಶೇಂಗಾ, ಮೆಕ್ಕೆ ಜೋಳಕ್ಕೆ ಮಳೆ ಅಗತ್ಯ

     ಈ ಬಾರಿ ಚೆನ್ನಾಗಿ ಮಳೆಯಾಗಿದ್ದರಿಂದ ಸಾಲ ಸೂಲ ಮಾಡಿಕೊಂಡು ಶೇಂಗಾ ಬೀಜ, ಗೊಬ್ಬರ, ರಾಸಾಯನಿಕ ಸಿಂಪಡಣೆ ಖರೀದಿ ಮಾಡಿ ರೈತರು ಬೀಜ ಬಿತ್ತನೆ ಮಾಡಿದ್ದಾರೆ. ಶೇಂಗಾ, ಮೆಕ್ಕೆಜೋಳಕ್ಕೆ ಎಡೆಕುಂಟೆ ಹೊಡೆದು ಗೊಬ್ಬರ ಹಾಕಿದ್ದಾರೆ. ಇದೀಗ ಶೇಂಗಾ ಹೂಡು ಹಿಡಿಯುವ ಹಾಗೂ ಮೆಕ್ಕೆಜೋಳ ತೆನೆ ಹೊಡೆಯುವ ಸಮಯವಾಗಿದ್ದು, ಈ ಸಮಯಕ್ಕೆ ಮಳೆ ಬೇಕಾಗಿದೆ.

ಸೊರಗುತ್ತಿರುವ ಈರುಳ್ಳಿ ಬೆಳೆ

    ಆದರೆ ಇದೀಗ ಮಳೆ ಕೈ ಕೊಟ್ಟಿದೆ. ಇದಲ್ಲದೆ ಈರುಳ್ಳಿ ಬೆಳೆಗೂ ಮಳೆ ಅವಶ್ಯಕವಾಗಿದೆ. ಹಿರಿಯೂರು, ಚಿತ್ರದುರ್ಗ, ಚಳ್ಳಕೆರೆ, ಹೊಸದುರ್ಗ, ಮೊಳಕಾಲ್ಮೂರು, ಹೊಳಲ್ಕೆರೆ ತಾಲ್ಲೂಕಿನಲ್ಲಿ ಸಹ ಮಳೆ ಬಾರದೇ ಇರುವುದು ನೋಡಿ ರೈತರು ಬೆಳೆ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.

ಜಿಲ್ಲೆಯ 43,819 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ

    ಜಿಲ್ಲೆಯ ಹಿರಿಯೂರು ತಾಲ್ಲೂಕಿನಲ್ಲಿ ಗುರುವಾರದವರೆಗೆ 43,819 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ರಾಗಿ, ಮೆಕ್ಕೆಜೋಳ, ಸೂರ್ಯಕಾಂತಿ, ನವಣೆ, ಇತರೆ ಬೆಳೆಗಳನ್ನು ಬಿತ್ತನೆ ಮಾಡಲಾಗಿದೆ (ಈರುಳ್ಳಿ ಬೆಳೆ ಹೊರತುಪಡಿಸಿ). ಸಾವಿರಾರು ರೂಪಾಯಿ ಖರ್ಚು ಮಾಡಿ ಬೀಜ, ಗೊಬ್ಬರ ಖರೀದಿಸಿ ಬಿತ್ತನೆ ಮಾಡಿದ್ದಾರೆ. ಆದರೆ ಮಳೆ ಕೈಕೊಟ್ಟಿದ್ದು, ನಷ್ಟ ಎದುರಾಗುವ ಭೀತಿ ತುಂಬಿದೆ.

ಕಳೆದ ತಿಂಗಳು ಅಬ್ಬರಿಸಿದ್ದ ವರುಣ

    ಚಿತ್ರದುರ್ಗ ಜಿಲ್ಲೆಯಲ್ಲಿ ಕಳೆದ ತಿಂಗಳು ವರುಣ ಅಬ್ಬರಿಸಿದ್ದರಿಂದ ಜಿಲ್ಲೆಯಾದ್ಯಂತ ಕೆರೆ ಕಟ್ಟೆಗಳು ತುಂಬಿ ಹರಿದಿದ್ದವು. ಚಿತ್ರದುರ್ಗ ತಾಲೂಕಿನ ಮಲ್ಲಾಪುರ ಕೆರೆ ತುಂಬಿ ಕೋಡಿ ಬಿದ್ದ ಪರಿಣಾಮವಾಗಿ ಗ್ರಾಮದ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಹೊಸದುರ್ಗ, ಮೊಳಕಾಲ್ಮೂರು, ಚಳ್ಳಕೆರೆ, ಹಿರಿಯೂರು ತಾಲ್ಲೂಕಿನಲ್ಲಿ ಕೆರೆ ಕಟ್ಟೆ ತುಂಬಿ ಹರಿದಿದ್ದವು. ಆದರೆ ಇದೀಗ ಪರಿಸ್ಥಿತಿ ತದ್ವಿರುದ್ಧವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link