ಶಿರಾ:
ಪ್ರಸ್ತುತ ದಿನಮಾನಗಳಲ್ಲಿ ಮಹಿಳೆಯರೂ ಕೂಡಾ ಸಾಧನೆಯ ಹಾದಿಯತ್ತ ನಡೆದಿರುವ ಅನೇಕ ಪ್ರಸಂಗಗಳು ಕಾಣಬರುತ್ತಿದ್ದರೂ ಅದೇಕೋ ತಿಳಿಯದು ಹುಟ್ಟಿದ ಹೆಣ್ಣು ಮಗುವನ್ನು ತಿರಸ್ಕರಿಸುವ ಪ್ರಕರಣಗಳು ಮಾತ್ರಾ ಇಂದಿಗೂ ಕಣ್ಮರೆಯಾಗಿಯೇ ಇಲ್ಲ.
ಹುಟ್ಟಿದ ಯಾವುದೇ ಹಸುಗೂಸು ತಾನು ಕಣ್ಣು ಬಿಟ್ಟು ಪ್ರಪಂಚವನ್ನು ನೋಡುವ ಮೊದಲೇ ತಾನು ಅನಾಥ ಅನ್ನುವ ಹಣೆಪಟ್ಟಿ ಕಟ್ಟಿಕೊಳ್ಳುವ ಪರಿಪಾಠವಿದೆಯಲ್ಲ…ಇದು ನಿಜಕ್ಕೂ ಯಾವ ಮಗುವಿಗೂ ಬರಬಾರದು. ಆಗ ತಾನೆ ಹುಟ್ಟಿದ ಅದರಲ್ಲೂ ತಾಯಿಯು ತಾನೇ 9 ತಿಂಗಳು ಹೆತ್ತು, ಹೊತ್ತು ಸಲಹಿದ ಮಗುವನ್ನು ಬೀದಿಗೆ ಎಸೆದು ನಾಪತ್ತೆಯಾಗುವ ಘಟನೆಗಳು ನಿಜಕ್ಕೂ ಎಂದೂ ನಡೆಯಬಾರದು ಅಂದುಕೊಳ್ಳುವ ಮನಸ್ಸುಗಳಿದ್ದರೂ ಅಂತಹ ಘಟನೆಗಳು ನಿರಾತಂಕವಾಗಿ ನಡೆಯುತ್ತಲೇ ಇವೆ.
ಅಂತಹುದೊಂದು ಪ್ರಕರಣ ಶಿರಾ ನಗರಕ್ಕೆ ಸಮೀಪದ ನಾಗಜ್ಜಿ ಗುಡಿಸಲು ಬಡಾವಣೆಯಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ. ಬೆಳಿಗ್ಗೆ 6 ಗಂಟೆಯ ಸಮಯದಲ್ಲಿ ಇದೇ ನಾಗಜ್ಜಿ ಗುಡಿಸಲು ಸಮೀಪದ ಕೆರೆಯೊಂದರ ಜಾಲಿ ಗಿಡದ ಪೊದೆಯಲ್ಲಿ ಮಣ್ಣಿನಲ್ಲಿ ತಲೆಯನ್ನು ಹೊರಗೆ ಬಿಟ್ಟು ಮುಚ್ಚಿದ ಹಸುಗೂಸೊಂದು ಕಾಣಿಸಿದೆ. ಗಂಗಮ್ಮ ಎಂಬಾಕೆ ಮಗುವನ್ನು ಕಂಡು ಜೋಪಾನವಾಗಿ ಗ್ರಾಮದೊಳಕ್ಕೆ ತಂದು ಮಗುವಿಗೆ ಸ್ನಾನ ಮಾಡಿಸಿ ಪ್ರಥಮ ಚಿಕಿತ್ಸೆ ನೀಡಿದ್ದಾಳೆ.
ಸ್ಥಳಕ್ಕೆ ದಾವಿಸಿದ ಸಾಂತ್ವನ ಕೇಂದ್ರದ ಸತ್ಯನಾರಾಯಣ್, ಪುಟ್ಟರಾಜು, ಸಿ.ಡಿ.ಪಿ.ಓ. ಬಸವರಾಜು, ಸ್ಥಳೀಯ ಮುಖಂಡ ಮುರುಳೀಧರ್ ಮುಂತಾದವರು ಮಗುವನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿಸಿ ಜಿಲ್ಲಾ ಮಕ್ಕಳ ಸಂರಕ್ಷಣಾ ಸಮಿತಿಯ ವಶಕ್ಕೆ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
