ಕಾಲ್ಪನಿಕ ವೇತನ, ನಿಶ್ಚಿತ ಪಿಂಚಣಿಗಾಗಿ ಒತ್ತಾಯ

ದಾವಣಗೆರೆ:

     ಅನುದಾನಿತ ಶಾಲಾ-ಕಾಲೇಜುಗಳ ನೌಕರರಿಗೆ ಕಾಲ್ಪನಿಕ ವೇತನ ಮತ್ತು ನಿಶ್ಚಿತ ಪಿಂಚಣಿ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿ, ಕರ್ನಾಟಕ ರಾಜ್ಯ ಅನುದಾನಿತ ಶಾಲಾ-ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ನೇತೃತ್ವದಲ್ಲಿ ನೌಕರರು ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

    ನಗರದ ಸರ್ಕಾರಿ ಪ್ರೌಢಶಾಲಾ ಮೈದಾನದಿಂದ ಮೆರವಣಿಗೆ ಹೊರಟ ಪಿಂಚಣಿ ವಂಚಿತ ನೌಕರರು, ತಮ್ಮ ಬೇಡಿಕೆಗೆ ಸ್ಪಂದಿಸದ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಆಕ್ರೋಶ ವ್ಯಕ್ತಪಡಿಸುತ್ತಾ, ಜಿಲ್ಲಾಡಳಿತ ಭವನಕ್ಕೆ ತೆರಳಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಮಂತ್ರೋಡಿ, ಅನುದಾನಿತ ಶಾಲಾ-ಕಾಲೇಜು ನೌಕರರಿಗೆ ಹಳೇಯ ನಿಶ್ಚಿತ ಪಿಂಚಣಿಯೂ ಇಲ್ಲ ಹಾಗೂ 2006ರಿಂದ ಈಚೆಗೆ ಜಾರಿಯಾದ ವಂತಿಗೆ ಆಧಾರಿತ ಹೊಸ ಪಿಂಚಣಿ ಸೌಲಭ್ಯ ಸಹ ಇಲ್ಲವಾಗಿದೆ. ಆದ್ದರಿಂದ ನಿವೃತ್ತಿಯ ನಂತರ ಜೀವನ ಭದ್ರತೆಯ ಸಮಸ್ಯೆ ಕಾಡುತ್ತಿದೆ. ನಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಈಗಾಗಲೇ ಹಲವು ಬಾರಿ ಹೋರಾಟ ನಡೆಸುವ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಆದರೂ, ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.

       ಕಾಲ್ಪನಿಕ ವೇತನ ಹಾಗೂ ನಿಶ್ಚಿತ ಪಿಂಚಣಿ ಯೋಜನೆಗಾಗಿ ಅಕ್ಟೋಬರ್ 11ರಿಂದ 21ರ ವರೆಗೆ ಬೆಂಗಳೂರಿನಲ್ಲಿ ಅನಿರ್ಧಿಷ್ಠಾವಧಿ ಧರಣಿ ಕೈಗೊಂಡು ಹೋರಾಟ ತೀವ್ರಗೊಳಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನಮ್ಮ ಸಂಘದ ಪ್ರತಿನಿಧಿಗಳನ್ನು ಕರೆದು ಚರ್ಚಿಸಿ, ಬೇಡಿಕೆ ಈಡೇರಿಸಲು ಎಷ್ಟು ಹಣ ಬೇಕಾಗುವುದು ಎಂಬುದರ ಬಗ್ಗೆ ಹಣಕಾಸು ಇಲಾಖೆಯಿಂದ ಮಾಹಿತಿ ಪಡೆದು, ಉಪ ಚುನಾವಣೆ ನಡೆದ ಬಳಿಕ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ್ದರು. ಆದಾದ ಮೇಲೆ ಹಬ್ಬ ಮುಗಿಯಲಿ ಎಂದಿದ್ದರು. ಈಗ ಚುನಾವಣೆ, ಹಬ್ಬ ಸಹ ಮುಗಿದಿವೆ. ಆದರೆ, ಈ ಬಗ್ಗೆ ಮುಖ್ಯಮಂತ್ರಿಗಳು ಚಕಾರ ಎತ್ತುತ್ತಿಲ್ಲ ಎಂದು ಆರೋಪಿಸಿದರು.

     ಮುಖ್ಯಮಂತ್ರಿಗಳು ಕೊಟ್ಟ ಮಾತಿನಂತೆ ನಡೆದು ಕೊಂಡು, ಅನುದಾನಿತ ಶಾಲಾ-ಕಾಲೇಜು ನೌಕರರು ಸೇವೆಗೆ ಸೇರಿದ ದಿನವನ್ನು ಪರಿಗಣಿಸಿ ಕಾಲ್ಪನಿಕ ವೇತನ ಹಾಗೂ ಹಳೇಯ ನಿಶ್ಚಿತ ಪಿಂಚಣಿ ಯೋಜನೆ ಸೌಲಭ್ಯವನ್ನು ಕಲ್ಪಿಸದಿದ್ದರೆ, ಬೆಳಗಾವಿಯಲ್ಲಿ ನಡೆಯುವ ಚಳಿಗಾಲ ಅಧಿವೇಶನದ ಸಂದರ್ಭದಲ್ಲಿ ಅನುದಾನಿತ ನೌಕರರು ಅನಿರ್ಧಿಷ್ಠಾವಧಿ ಅಹೋರಾತ್ರಿ ಉಪವಾಸ ಸತ್ಯಗ್ರಹ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

      ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಶುರಾಮರೆಡ್ಡಿ, ಬಸವಲಿಂಗಪ್ಪ ಹುಗ್ಗಿ, ಶಾಂತಲಾದೇವಿ, ಧನ್ಯಕುಮಾರ್, ಅಂಜಿನಪ್ಪ ಮತ್ತಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap