ಬಲ್ಲಿಯಾ
ವಿವಾದಿತ ಹೇಳಿಕೆಗಳಿಗೆ ಕುಪ್ರಸಿದ್ಧರಾಗಿರುವ ಬಿಜೆಪಿ ಶಾಸಕ ಸುರೇಂದ್ರ ಸಿಂಗ್, ರಾಹುಲ್ ಗಾಂಧಿ ರಾವಣ, ಆತನ ಸಹೋದರಿ ಪ್ರಿಯಾಂಕಾ ಗಾಂಧಿ ಶೂರ್ಪನಖಿ ಎಂದು ಲೇವಡಿ ಮಾಡಿದ್ದಾರೆ.
‘ರಾಮನ ವಿರುದ್ಧ ರಾವಣನು ಯುದ್ಧ ಹೂಡುವ ಮೊದಲು ತನ್ನ ತಂಗಿ ಶೂರ್ಪನಖಿಯನ್ನು ಕಳುಹಿಸಿದ; ಅದೇ ರೀತಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಎಂಬ ರಾವಣನು, ರಾಮನೆಂಬ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹೋರಾಡುವ ಮುನ್ನ ಶೂರ್ಪನಖಿ ಎಂಬ ತನ್ನ ಸಹೋದರಿ ಪ್ರಿಯಾಂಕಾ ಗಾಂಧಿಯನ್ನು ಕಳುಹಿಸಿದ್ದಾರೆ’ ಎಂದು ಸುರೇಂದ್ರ ಸಿಂಗ್ ಹೇಳಿರುವ ಮಾತುಗಳು ಈಗ ತೀವ್ರ ವಿವಾದಕ್ಕೆ ಕಾರಣವಾಗಿದೆ.
ಉತ್ತರ ಪ್ರದೇಶದ ಬಲ್ಲಿಯಾ ಕ್ಷೇತ್ರದ ಶಾಸಕರಾಗಿರುವ ಸುರೇಂದ್ರ ಸಿಂಗ್, ‘ಕಾಂಗ್ರೆಸ್ ಒಂದು ಮುಳುಗುತ್ತಿರುವ ಹಡಗು; ಈಚೆಗೆ ರಾಜಸ್ಥಾನ ಮತ್ತು ಮಧ್ಯ ಪ್ರದೇಶದಲ್ಲಿ ಬಿಜೆಪಿ ಸೋಲಲು ಎಸ್ಸಿ/ಎಸ್ಟಿ ಕಾಯ್ದೆ ಕಾರಣ. ‘ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ರಾಜಕೀಯ ಘನತೆ ಇಲ್ಲ; ಅದು ದೇಶದಲ್ಲಿ ಬೇರೆಲ್ಲೂ ಇನ್ನು ವಿಜಯ ಗಳಿಸದು’ ಎಂದು ಭವಿಷ್ಯ ನುಡಿದಿದ್ದಾರೆ.
ಶಾಸಕ ಸುರೇಂದ್ರ ಸಿಂಗ್ ಇತ್ತೀಚೆಗೆ ತನ್ನ ಸಹೋದ್ಯೋಗಿ, ಶಾಸಕಿ ಸಾಧನಾ ಸಿಂಗ್, ‘ಬಿಎಸ್ಪಿ ಅಧಿನಾಯಕಿ ಮಾಯಾವತಿ ತೃತೀಯ ಲಿಂಗಿಗಳಿಗಿಂತಲೂ ಕೆಟ್ಟವರು’ ಎಂದು ನೀಡಿದ್ದ ವಿವಾದಾತ್ಮಕ ಹೇಳಿಕೆಯನ್ನು ಬೆಂಬಲಿಸಿ, ಸಮಾಜವಾದಿ ಪಕ್ಷದ ಜತೆಗಿನ ಮೈತ್ರಿ ಆಕೆಗೆ ಆತ್ಮಗೌರವ ಇಲ್ಲ ಎಂಬುದನ್ನು ಸಾಬೀತುಪಡಿಸುತ್ತದೆ ಎಂದಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
