ಹರಪನಹಳ್ಳಿ:
ಮೈಸೂರು ಹುಲಿ ಟಿಪ್ಪು ಸುಲ್ತಾನ ತುಳಿತಕ್ಕೆ ಒಳಗಾದವರ ಪರ ನಿಂತು ಹೋರಾಟ ನಡೆಸಿದ್ದ ಮಹಾನ್ ವ್ಯಕ್ತಿ ಎಂದು ಪುರಸಭೆ ಅಧ್ಯಕ್ಷ ಎಚ್.ಕೆ.ಹಾಲೇಶ್ ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ತಾಲ್ಲೂಕು ಆಡಳಿತ ವತಿಯಿಂದ ಆಯೋಜಿಸಲಾಗಿದ್ದ ಟಿಪ್ಪು ಸುಲ್ತಾನ್ ಜಯಂತ್ಯುತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬ್ರಿಟಿಷ್ ವಿರುದ್ಧ ಹೋರಾಡಿ ಭಾರತಾಂಬೆ ರಕ್ಷಣೆಗೆ ಮುಂದಾಗಿದ್ದರು. ತನ್ನ ಆಡಳಿತಾವಧಿಯಲ್ಲಿ ಮೈಸೂರು ಸಂಸ್ಥಾನದ ಏಳ್ಗೆಗೆ ಶ್ರಮಿಸಿದ್ದರು. ಅವರಲ್ಲಿದ್ದ ಉತ್ತಮ ಗುಣಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಹಶೀಲ್ದಾರ ಡಾ.ಎನ್.ಮಧು, ಇಲಿಯಂತೆ ನೂರು ದಿನ ಬದುಕುವ ಬದಲು ಹುಲಿಯಂತೆ ಮೂರು ದಿನ ಬದುಕು ಸಾಗಿಸಬೇಕು ಎನ್ನುವ ಮಾತು ಟಿಪ್ಪು ಅವರದ್ದಾಗಿತ್ತು. ಈ ಮಾತಿನಲ್ಲಿರುವ ಪ್ರೇರಣೆ, ವಿಶೇಷತೆ, ಧೈರ್ಯ, ಭಾವಾರ್ಥ ಅರಿತುಕೊಳ್ಳಬೇಕು. ಯುದ್ಧದಲ್ಲಿ ಪ್ರೆಂಚ್ ಮಾದರಿಯ ರಾಕೆಟ್ ಬಳಕೆ ಮಾಡಿದ್ದ ದೇಶದ ಮೊದಲ ರಾಜ ಎಂಬ ಹೆಗ್ಗಳಿಕೆ ಟಿಪ್ಪು ಸುಲ್ತಾನ್ ಅವರಿಗಿದೆ ಎಂದರು.
ಉಪನ್ಯಾಸ ನೀಡಿದ ಹಂಪಿ ಕನ್ನಡ ವಿವಿಯ .ಸಿ.ಆರ್. ಗೋವಿಂದರಾಜು ಮಾತನಾಡಿ, ಟಿಪ್ಪು ಬಗ್ಗೆ ಮಾತನಾಡದಂತಹ ಬಯದ ವಾತಾವರಣ ನಿರ್ಮಾಣವಾಗಿದೆ. ನಿಜಾಮರು ಹಾಗೂ ಮುಸ್ಲಿಂ ಅರಸ ಮನೆಯತನದಿಂದ ಬಾರದ ಟಿಪ್ಪುವಿನ ಬಗ್ಗೆ ಅಂದು ಮುಸ್ಲಿಂ ರಾಜರಲ್ಲಿ ಅಸಮಾಧಾನವಿತ್ತು. ಹಿಂದೂ, ಮುಸ್ಲಿಮರು ಯಾರು ಟಿಪ್ಪುನನ್ನು ಯಾರು ಅಪ್ಪಿಕೊಳ್ಳಲಿಲ್ಲ. ಜಾತಿ, ಧರ್ಮದ ಲೇಪನ ಮಾಡಿದ್ದಕ್ಕೆ ಟಿಪ್ಪುಗೀಗ ಎಲ್ಲಿಲ್ಲದ ಬೇಡಿಕೆ ಬಂದಿದೆ ಎಂದರು.
ಇತಿಹಾಸಕಾರರು ತಮಗೆ ಹೇಗೆ ಬೇಕು ಹಾಗೇ ಟಿಪ್ಪು ಚರಿತ್ರೆ ತಯಾರಿಸಿ ಅವರನ್ನು ತೇಜೋವಧೆ ಮಾಡುತ್ತಿದ್ದಾರೆ. ಸಂಶೋಧಕರ ಹೀಗೆ ಹೇಳಲು ಸಾಧ್ಯವೇ ಎಂಬ ವಿಶ್ಲೇಸಿಸುವ ಗುಣ ನಮ್ಮಲ್ಲಿ ಬರಬೇಕಿದೆ. ಮೊದಲು ಜನರನ್ನು ಜಾಗೃತ ಮಾಡಬೇಕಿದೆ. ಇತಿಹಾಸದ ಬಗ್ಗೆ ಎಲ್ಲರೂ ಮಾತನಾಡಲು ಸಾಧ್ಯವಿಲ್ಲ. ಯಾರೂ ಏನೋ ಹೇಳಿದರಂದು ನಾವು ಉದ್ವೇಗ, ಭಾವಾವೇಶಕ್ಕೆ ಒಳಗಾಗಬೇಕಿಲ್ಲ ಎಂದರು.
ಜಿಲ್ಲಾ ಪಂಚಾಯ್ತಿ ಸದಸ್ಯ ಎಚ್.ಬಿ.ಪರಶುರಾಮಪ್ಪ, ಪುರಸಭೆ ಮುಖ್ಯಾಧಿಕಾರಿ ನಾಗರಾಜ ನಾಯ್ಕ, ಪ್ರಭಾರಿ ಇಒ ಎಲ್.ತಿಮ್ಮಾನಾಯ್ಕ, ಸಿಪಿಐ ದುರುಗಪ್ಪ, ಮುಖಂಡರಾದ ಮಾಬೂಸಾಬ್, ದಾದಾಪೀರ್, ಎಂ.ಮಜೀದ್, ಮೆಹಬೂಬ್ ಸಾಬ್, ಪಿ.ಮೆಹಬೂಬ್, ನಿಚ್ಚವನಹಳ್ಳಿ ಭೀಮಪ್ಪ ಇತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
