ದಾವಣಗೆರೆ:
ಜಮೀನಿನ ವರದಿ ಸಲ್ಲಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಲಂಚ ಪಡೆಯುತ್ತಿದ್ದ ತಾಲೂಕಿನ ಮಾಯಕೊಂಡ ನಾಡ ಕಚೇರಿಯ ಕಂದಾಯ ನಿರೀಕ್ಷಕರೊಬ್ಬರು ಎಸಿಬಿ ಬಲೆಗೆ ಬಿದ್ದಿದ್ದಾರೆ.
ಮಾಯಕೊಂಡ ನಾಡ ಕಚೇರಿಯ ಕಂದಾಯ ನಿರೀಕ್ಷಕ ಚಂದ್ರಪ್ಪ ಎಂಬುವರೇ ಎಸಿಬಿ ಬಲೆಗೆ ಬಿದ್ದಿರುವ ಭ್ರಷ್ಟ ಅಧಿಕಾರಿಯಾಗಿದ್ದಾರೆ.
ಅಣಬೇರು ಗ್ರಾಮದ ರೈತ ರವಿಕುಮಾರ ಎಂಬುವರು ತಮ್ಮ ಜಮೀನಿನ ಅಳತೆ ವಿಚಾರವಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಮನವಿ ಸಲ್ಲಿಸಿದ್ದರು. ಈ ಸಂಬಂಧ ವರದಿ ಸಲ್ಲಿಸಲು ಹಾಗೂ ಕಡತ ಮೂವ್ ಮಾಡಲು ಕಂದಾಯ ನಿರೀಕ್ಷಕ ಚಂದ್ರಪ್ಪ 50 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಆದರೆ, ರೈತ ತಾನು ಬಡವನೆಂದು ಬೇಡಿಕೊಂಡಾಗ 10 ಸಾವಿರ ನೀಡಬೇಕು. ಇಲ್ಲದಿದ್ದರೆ, ಕೆಲಸ ಮಾಡಿಕೊಡುವುದಿಲ್ಲ ಎಂದು ಘಂಟಾಘೋಷವಾಗಿ ಹೇಳಿ, ನೀನು ಮಾಯಕೊಂಡ ಗ್ರಾಮದ ಚಂದ್ರಪ್ಪ ಎಂಬ ವ್ಯಕ್ತಿಯೊಂದಿಗೆ ಮಾತನಾಡಿ ಬರುವಂತೆ ರೈತ ರವಿಕುಮಾರ್ಗೆ ಸೂಚಿಸಿದ್ದರು.
ಹೀಗಾಗಿ ಅರ್ಜಿದಾರ ರವಿಕುಮಾರ ಮಾಯಕೊಂಡದ ಚಂದ್ರಪ್ಪ ಎಂಬುವವನ ಮಧ್ಯಸ್ತಿಕೆಯಲ್ಲಿ 6 ಸಾವಿರ ಲಂಚಕ್ಕೆ ಇಬ್ಬರನ್ನೂ ಒಪ್ಪಿಸಿ ಫೆಬ್ರವರಿ 25ರಂದು ಒಂದು ಸಾವಿರ ಮುಂಗಡ ನೀಡಿ ಮತ್ತು 27 ನೇ ಒಂದು ಸಾವಿರ ನೀಡಿ ಕೆಲಸ ಮಾಡಿಕೊಡಲು ಹೇಳಿದ್ದರು. ಆದರೆ, ಬಾಕಿ ಹಣ ಕೊಡುವ ವರೆಗೂ ಕೆಲಸ ಮಾಡಿಕೊಡಲಾಗುವುದಿಲ್ಲ ಎಂದು ರೈತ ರವಿಕುಮಾರ್ನನ್ನು ದಬಾಯಿಸಿ ಕಳೆಸಿದ್ದರು.
ಇದರಿಂದ ಬೇಸರಗೊಂಡ ರವಿಕುಮಾರ್ ಗುರುವಾರ ಬೆಳಿಗ್ಗೆ ದಾವಣಗೆರೆ ಎಸಿಬಿ ಕಛೇರಿಗೆ ತೆರಳಿ ಈ ಸಂಬಂಧ ದೂರು ನೀಡಿದ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಎಸಿಬಿ ಡಿವೈಎಸ್ಪಿ ಹೆಚ್.ಎಸ್. ಪರಮೇಶ್ವರಪ್ಪ ಅವರ ಮಾರ್ಗದರ್ಶನದಲ್ಲಿ ಕಂದಾಯ ನಿರೀಕ್ಷಕ ಚಂದ್ರಪ್ಪ ರೈತನಿಂದ ಇನ್ನುಳಿದ 4 ಸಾವಿರ ರೂ ಲಂಚ ಪಡೆಯುತ್ತಿದ್ದ ವೇಳೆಯಲ್ಲಿ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಕಂದಾಯ ನಿರೀಕ್ಷ ಚಂದ್ರಪ್ಪ ಹಾಗೂ ಲಂಚ ಪಡೆಯುತ್ತಿದ್ದ ನಾಲ್ಕು ಸಾವಿರ ರೂ.ಗಳನ್ನು ವಶಕ್ಕೆ ಪಡೆದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ