ತುರುವೇಕೆರೆ:
ರಾಜ್ಯದಲ್ಲಿ ಬಿಜೆಪಿಯವರು ಎರಡಂಕಿಯನ್ನೂ ತುಲುಪಲ್ಲ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಭವಿಷ್ಯ ನುಡಿದರು.
ಪಟ್ಟಣದ ಕಾಂಗ್ರೆಸ್ ಕಛೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಈ ಬಾರಿ ಜಿಲ್ಲೆಯಲ್ಲಿ ಹಿಂದೆಂದಿಗಿಂತಲೂ ಅತಿ ಹೆಚ್ಚು ಮತದಾನವಾಗಿದೆ. ಮತಚಲಾವಣೆಯಾಗಿರುವ ಪೈಕಿ ಶೇಕಡಾ 80 ಕ್ಕೂ ಹೆಚ್ಚು ಕಾಂಗ್ರೆಸ್ ಹಾಗೂ ಜೆಡಿಎಸ್ ನ ಮೈತ್ರಿ ಅಭ್ಯರ್ಥಿಯಾಗಿರುವ ಹೆಚ್.ಡಿ.ದೇವೇಗೌಡರಿಗೆ ಮತ ಲಭಿಸಿದ್ದು ಹೆಚ್ಚು ಮತಗಳ ಅಂತರದಿಂದ ದೇವೇಗೌಡರು ಗೆಲ್ಲುತ್ತಾರೆ ಎಂದರು.
ಬಿಜೆಪಿಯ ಕೆಲವು ಮುಖಂಡರುಗಳು ಮೇ 23 ರ ನಂತರ ಮೈತ್ರಿ ಸರ್ಕಾರ ಬಿದ್ದು ಹೋಗುತ್ತೆ, ಬಿಜೆಪಿ ಸರ್ಕಾರ ಬರುತ್ತೆ ಅಂತ ಹಗಲುಗನಸು ಕಾಣುತ್ತಿದ್ದಾರೆ. ಅದು ಅವರ ಕನಸಷ್ಠೆ. ನಮ್ಮ ಮೈತ್ರಿ ಸರ್ಕಾರ ಸುಭದ್ರವಾಗಿರುತ್ತೆ. ಚುನಾವಣೆ ನಂತರ ಇನ್ನೂ ಬಲಿಷ್ಠವಾಗಿ ಇರುತ್ತೆ. ಅದರಲ್ಲಿ ಯಾವುದೇ ಅನುಮಾನ ಬೇಡ. ಬಿಜೆಪಿಯ ಬಿಎಸ್.ಯಡಿಯೂರಪ್ಪ ಬಹುಮತ ಸಾಬೀತು ಪಡಿಸುತ್ತೇನೆ ಅಂತ ಹೇಳಿ 18 ಗಂಟೆ ಮುಖ್ಯಮಂತ್ರಿ ಆಗಿರಲಿಲ್ಲವೇ? ಅವರು ಅಂದುಕೊಂಡಂತೆ ಆಯಿತಾ ಇಲ್ಲ. ಇದೂ ಹಾಗೇ. 23 ರ ನಂತರ ಏನೂ ಆಗಲ್ಲ. ಮೈತ್ರಿ ಸರ್ಕಾರ ಮುಂದುವರೆಯುತ್ತೆ. ಬಿಜೆಪಿಯವರು ಕನಸು ಕಾಣುತ್ತಲೇ ಇರಲಿ ಎಂದು ವ್ಯಂಗ್ಯವಾಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಮಕೃಷ್ಣಯ್ಯ, ಹಿರಿಯ ಕಾಂಗ್ರೆಸ್ ಮುಖಂಡ ಚೌದ್ರಿ ಟಿ ರಂಗಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಕೆ.ನಾಗೇಶ್, ಪ್ರಸನ್ನಕುಮಾರ್, ಪಟ್ಟಣ ಪಂಚಾಯ್ತಿ ಸದಸ್ಯರಾದ ಶಶಿಶೇಖರ್, ಯಜಮಾನ್ ಮಹೇಶ್, ವಿಜಯ್ಕುಮಾರ್, ಶ್ರೀನಿವಾಸ್, ರುದ್ರೇಶ್, ಮುಖಂಡರುಗಳಾದ ನಂಜುಂಡಯ್ಯ, ಟಿ.ಎನ್.ಶಿವರಾಜು, ಜೋಗಿಪಾಳ್ಯ ಶಿವರಾಜ್, ಜಫ್ರುಲಾ, ರಮೇಶ್, ಕಾಂತರಾಜೇಅರಸ್, ರಂಗನಾಥ್, ಶಿವು, ಅಫ್ಜಲ್ ಸೇರಿದಂತೆ ಕಾಂಗ್ರೆಸ್ ಹಾಗು ಜೆಡಿಎಸ್ ನ ಹಲವಾರು ಮುಖಂಡರುಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
