ಜಗಳೂರು;
ತಾಲೂಕಿನಲ್ಲಿ ಸತತ ಬರಗಾಲದಿಂದ ಜನರ ಬದುಕು ಶೋಚನಿಯವಾಗಿದೆ. ಜಿಲ್ಲಾಧಿಕಾರಿಗಳು ದಾವಣಗೆರೆ ನಗರದಲ್ಲಿ ಸ್ಥಳ ಗುರುತಿಸಿ ಕೊಟ್ಟರೆ ಕೇಂದ್ರ ಸರ್ಕಾರ ಅನುದಾನದಲ್ಲಿ ಮಾನಸಿಕ ರೋಗಿಗಳ ಆಸ್ಪತ್ರೆ ನಿರ್ಮಿಸಲಾಗುವುದು ಎಂದು ಸಂಸದ ಜಿ.ಎಂ ಸಿದ್ದೇಶ್ವರ್ ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಸೋಮವಾರ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಆಯುಷ್ ಇಲಾಖೆ ಜಿಲ್ಲಾಸ್ಪತ್ರೆ ದಾವಣಗೆರೆ , ಸಾರ್ವಜನಿಕ ಆಸ್ಪತ್ರೆ ಜಗಳೂರು ಎಸ್ಎಸ್ಐಎಂ ಆಸ್ಪತ್ರೆ , ಬಾಪೂಜಿ ಆಸ್ಪತ್ರೆ ಹಾಗೂ ಸುವರ್ಣ ಆರೋಗ್ಯ ಟ್ರಸ್ಟ್ ಸಹಾಯೋಗದಲ್ಲಿ ಉಚಿತ ಬೃಹತ್ ಆರೋಗ್ಯ ಮೇಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೊಡ್ಡ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಪಡೆದುಕೊಳ್ಳುವುದು ಕಷ್ಟ. ಆದ್ದರಿಂದ ದಾವಣಗೆರೆಯಲ್ಲಿ ನಡೆಯಬೇಕಿದ್ದ ಆರೋಗ್ಯ ಮೇಳವನ್ನು ಜಗಳೂರಿನಲ್ಲಿ ಆಯೋಜನೆ ಮಾಡಲಾಗಿದೆ. ಎರಡು ದಿನಗಳ ನಡೆಯುವ ಈ ಶಿಬಿರದಲ್ಲಿ ಜನರು ಸದುಪಯೋಗಪಡಿಸಿಕೊಳ್ಳಬೇಕು ಎಂದರು. ಜಿಲ್ಲಾ ಮತ್ತು ತಾಲೂಕು ಆರೋಗ್ಯ ಇಲಾಖೆಗಳ ಗ್ರಾಮೀಣ ಭಾಗಕ್ಕೆ ಪ್ರಚಾರ ನೀಡದ ಹಿನ್ನೆಲೆ ಜನರು ಕಡಿಮೆ ಸಂಖ್ಯೆಯಲ್ಲಿ ಬಂದಿದ್ದರು. ಇಂಥ ಮೇಳಕ್ಕೆ ಕನಿಷ್ಠ ಐದಾರು ಸಾವಿರ ಜನರು ಭಾಗವಹಿಸಬೇಕು ಆಗ ಮಾತ್ರ ಸಾರ್ಥಕತೆಯಾಗುತ್ತದೆ ಎಂದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಆರೋಗ್ಯ ಇಲಾಖೆಯಲ್ಲಿ ಹೊಸ ಕ್ರಾಂತಿಕಾರಿಕಾ ಕೆಲಸ ಮಾಡಿದ್ದಾರೆ. ಆಯುಷ್ಮಾನ್ಬವ ಯೋಜನೆಯಡಿ ದೇಶದ 10 ಕೋಟಿ ಕುಟುಂಬಗಳಿಗೆ ಸುಮಾರು 50 ಕೋಟಿ ಜನರಿಗೆ ಇದರ ಉಪಯೋಗ ನೀಡಿದ್ದಾರೆ. 300ಕ್ಕೂ ಹೆಚ್ಚು ಜನ ಔಷಧಿ ಕೇಂದ್ರಗಳ ಮೂಲಕ ಕಡಿಮೆ ದರದಲ್ಲಿ ಔಷಧಿಗಳನ್ನು ನೀಡಲಾಗುತ್ತಿದೆ ಎಂದರು.
ಶಾಸಕ ಎಸ್.ವಿ ರಾಮಚಂದ್ರ ಮಾತನಾಡಿ, ಸರ್ಕಾರ ಬಡವರಿಗಾಗಿ ಸಾಕಷ್ಟು ಆರೋಗ್ಯ ಕಾರ್ಯಕ್ರಮಗಳನ್ನು ನೀಡಿದೆ. ಆದರೆ ಸರಿಯಾಗಿ ಬಳಕೆಯಾಗುತ್ತಿಲ್ಲ. ಜಗಳೂರು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರನ್ನು ನೇಮಿಸಿ ಉತ್ತಮ ಸೇವೆಯನ್ನು ನೀಡಬೇಕು ಜಿಲ್ಲಾ ಆರೋಗ್ಯಾಧಿಕಾರಿಗೆ ತಾಕೀತು ಮಾಡಿದರು. ತಾಲೂಕಿನಲ್ಲಿ ಹೆಚ್ಚು ಜಾತ್ರೆಗಳು ನಡೆಯುತ್ತವೆ. ಬೇಸಿಗೆ ಕಾಲದಲ್ಲಿ ರೋಗ ಹರಡದಂತೆ ಮುಂಜಾಗ್ರತ ಕ್ರಮ ಕೈಗೊಳ್ಳಬೇಕು. ವಿವಿಧ ರೋಗಗಳಿಗೆ ಔಷಧಿ ಪರಿಕರಗಳನ್ನು ತೆಗದುಕೊಂಡು ಗ್ರಾಮೀಣ ಪ್ರದೇಶಗಳಿಗೆ ಹೋಗಿ ಚಿಕಿತ್ಸೆ ನೀಡಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ. ತ್ರಿಪುಲಾಂಭ ಆರೋಗ್ಯ ಇಲಾಖೆಗಳ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಜಿ.ಪಂ ಸದಸ್ಯರಾದ ಉಮಾ ವೆಂಕಟೇಶ್, ಶಾಂತಕುಮಾರಿ, ತಾ.ಪಂ ಸದಸ್ಯರಾದ ಬಸವರಾಜ್, ಶಂಕರ್ನಾಯ್ಕ, ಜಿಲ್ಲಾ ಆಯುಷ್ ಅಧಿಕಾರಿ ಡಾ. ಸಿದ್ದೇಶ್, ಜಿಲ್ಲಾ ಆರ್ಸಿಎಚ್ ಅಧಿಕಾರಿ ಶಿವಕುಮಾರ್, ಡಾ. ತಾಲೂಕು ಆರೋಗ್ಯಾಧಿಕಾರಿ ಡಾ. ನಾಗರಾಜ್, ಆಡಳಿತಾಧಿಕಾರಿ ಡಾ. ಮುರುಳಿಧರ್ ಸೇರಿದಂತೆ ಮತ್ತಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
