ಕೊರಟಗೆರೆ
ಭಾರತ ಸರ್ಕಾರದ ಬರಅಧ್ಯಯನ ತಂಡ ಜಿಲ್ಲೆಯ ಬರಪೀಡಿತ ಪ್ರದೇಶಗಳೆಂದು ಘೋಷಣೆಯಾಗಿರುವ 10 ತಾಲ್ಲೂಕುಗಳಿಗೂ ನ.18 ರ ಭಾನುವಾರ ಭೇಟಿ ನೀಡಲಿದ್ದು, ಇದೇ ತಂಡ ಕೊರಟಗೆರೆ ತಾಲ್ಲೂಕಿಗೂ ಭೇಟಿ ನೀಡುವ ನಿಮಿತ್ತ ಬೆಳೆ ನಾಶ ಆಗಿರುವ ರೈತರ ಜಮೀನಿಗೆ ಭೇಟಿ ನೀಡಿ ಬೆಳೆಗಳ ವೀಕ್ಷಣೆ ಮಾಡಲಿದ್ದಾರೆ ಎಂದು ತುಮಕೂರು ಜಿಲ್ಲಾಧಿಕಾರಿ ರಾಕೇಶ್ಕುಮಾರ್ ತಿಳಿಸಿದರು.
ಅವರು ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ಬೈಚಾಪುರ ಗ್ರಾಪಂ ವ್ಯಾಪ್ತಿಯ ರಾಯವಾರ ಗ್ರಾಮದ ರೈತರ ಜಮೀನಿಗೆ ಭಾನುವಾರ ಕೇಂದ್ರ ಬರಅಧ್ಯಯನ ತಂಡ ಆಗಮಿಸುವ ಹಿನ್ನೆಲೆಯಲ್ಲಿ ಬರದಿಂದ ಮಳೆಯಾಗದೆ ನಷ್ಟವಾಗಿರುವ ಕೃಷಿ ಬೆಳೆಗಳನ್ನು ಜಿಲ್ಲಾ ಮಟ್ಟದ ಅಧಿಕಾರಿ ತಂಡದೊಂದಿಗೆ ಶುಕ್ರವಾರ ವೀಕ್ಷಣೆ ನಡೆಸಿದ ನಂತರ ಮಾತನಾಡಿ, ತಾಲ್ಲೂಕ್ ಮಟ್ಟದ ಅಧಿಕಾರಿಗಳು ಕೇಂದ್ರ ತಂಡಕ್ಕೆ ವ್ಯವಸ್ಥಿತವಾಗಿ ವೀಕ್ಷಣೆ ಮಾಡಿಸಿ ಅರಿವು ಮೂಡಿಸುವಂತಹ ಕೆಲಸವಾಗಬೇಕು ಎಂದು ಎಚ್ಚರಿಕೆ ನೀಡಿದರು.
ತುಮಕೂರು ಜಿಲ್ಲೆಯ ಕೊರಟಗೆರೆ, ಮಧುಗಿರಿ, ಪಾವಗಡ ಮತ್ತು ಶಿರಾ ತಾಲ್ಲೂಕಿಗೆ ಮೊದಲ ಹಂತದಲ್ಲಿ ಕೇಂದ್ರ ಬರಅಧ್ಯಯನ ತಂಡದ ಅಧಿಕಾರಿಗಳು ಭೇಟಿ ನೀಡಿ ಬರಗಾಲದಿಂದ ನಷ್ಟವಾಗಿರುವ ರೈತರ ಬೆಳೆಗಳನ್ನು ವೀಕ್ಷಣೆ ಮಾಡಿ ರೈತರು ಮತ್ತು ಅಧಿಕಾರಿಗಳಿಂದ ಅಂಕಿಅಂಶದ ವರದಿ ಪಡೆಯಲಿದ್ದಾರೆ. ತುಮಕೂರು ಜಿಲ್ಲೆಗೆ ಬರುವ ಹಿನ್ನೆಲೆಯಲ್ಲಿ ಪೂರ್ವಭಾವಿ ಆಗಿ ಈಗಾಗಲೇ ಪರಿಶೀಲನೆ ನಡೆಸಿ ಸಮರ್ಪಕ ಅಂಕಿಅಂಶ ಸಿದ್ದಪಡಿಸಲಾಗಿದೆ ಎಂದು ಹೇಳಿದರು.
ರಾಯವಾರ ಗ್ರಾಮದ ರೈತರ ಜಮೀನುಗಳಿಗೆ ಭೇಟಿ ನೀಡಿದ ಡಿಸಿ ಮತ್ತು ಸಿಇಓ ಮುಂಜಾರು ಮಳೆ ಇಲ್ಲದೆ ಬರಗಾಲದಿಂದ ನಾಶವಾಗಿರುವ ಮುಸುಕಿನ ಜೋಳ, ಶೇಂಗಾ ಮತ್ತು ರಾಗಿ ಬೆಳೆ ವೀಕ್ಷಣೆ ಮಾಡಿ ರೈತರಿಂದ ಮಾಹಿತಿ ಪಡೆದರು. ನಂತರ ಪಶು ಇಲಾಖೆ ವತಿಯಿಂದ ರಾಯವಾರ ಗ್ರಾಮದ ರೈತ ಮೈಲಾರಪ್ಪ ಎಂಬುವರಿಗೆ ಸೌತ್ಆಫ್ರಿಕನ್ ಟಾಲ್ ಮೈಲ್ ಎಂಬ ತಳಿಯ ಮುಸುಕಿನ ಜೋಳ ಬೀಜದಿಂದ ಬೆಳೆದಿರುವ ಮೇವಿನ ತೋಟವನ್ನು ವೀಕ್ಷಣೆ ಮಾಡಿದರು.
ರೈತರ ಭೇಟಿಗೆ ಮೊದಲು ಕೊರಟಗೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕಂದಾಯ, ತಾಪಂ, ಕೃಷಿ, ತೋಟಗಾರಿಕೆ, ರೇಷ್ಮೆ ಅಧಿಕಾರಿಗಳ ಸಭೆ ನಡೆಸಿದರು. ತಾಲ್ಲೂಕು ಮಟ್ಟದ ಅಧಿಕಾರಿಗಳಿಂದ ಕೊರಟಗೆರೆ ಕ್ಷೇತ್ರದಲ್ಲಿ ಬರಗಾಲದಿಂದ ನಷ್ಟವಾಗಿರುವ ಬೆಳೆಗಳ ಅಂಕಿಅಂಶದ ಮಾಹಿತಿ ಪಡೆದು ಕೇಂದ್ರ ಬರಅಧ್ಯಯನ ತಂಡ ಬರುವ ವೇಳೆ ಸಮರ್ಪಕವಾಗಿ ಮಾಹಿತಿ ನೀಡುವಂತೆ ಸೂಚಿಸಿದರು. ನಂತರ ನಷ್ಟವಾಗಿರುವ ಬೆಳೆಗಳ ಮಾಹಿತಿಯ ಜೊತೆ ರೈತರ ಮನವಿಯನ್ನು ಆಲಿಸಿದರು.
ಕೊಳವೆಬಾವಿಗೆ ಚಾಲನೆ ನೀಡಿದ ಡಿಸಿ:
ರಾಯವಾರ ಮತ್ತು ಅಕ್ಕಪಕ್ಕದ ಗ್ರಾಮದ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಕಳೆದ ಆರು ತಿಂಗಳ ಹಿಂದೆ ಟಾಸ್ಕ್ ಪೋಸ್ಟ್ ಮತ್ತು ಬರ ಪರಿಹಾರ ಯೋಜನೆಯಡಿ 3ಲಕ್ಷ 12ಸಾವಿರ ಅನುಧಾನದಿಂದ ಕೊರೆಸಿದ ಕೊಳವೆ ಬಾವಿಗೆ ಇಲ್ಲಿಯವರೆಗೂ ಪಂಪು ಮೋಟಾರ್ ಅಳವಡಿಕೆ ಮಾಡಿರಲಿಲ್ಲ. ರಾಯವಾರ ಗ್ರಾಮಕ್ಕೆ ಶುಕ್ರವಾರ ಡಿಸಿ ಬರುವ ಮುನ್ಸೂಚನೆ ಅರಿತ ಗ್ರಾ.ಕು.ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿ ರಂಗಪ್ಪ ಕೇವಲ 2 ಗಂಟೆಯೊಳಗೆ ಬೋರ್ವೇಲ್ಗೆ ಪಂಪು ಮೋಟಾರ್ನಜೊತೆ ವಿದ್ಯುತ್ ಸಂಕರ್ಪ ನೀಡಿ ಕುಡಿಯುವ ನೀರಿಗೆ ಚಾಲನೆ ನೀಡಿದ ಘಟನೆ ನಡೆಯಿತು.
ಬೆಳೆ ವೀಕ್ಷಣೆ ವೇಳೆಯಲ್ಲಿ ಜಿಪಂ ಸಿಇಓ ಅನಿಸ್ ಕಣ್ಮಣಿಜಾಯ್, ಮಧುಗಿರಿ ಎಸಿ ಚಂದ್ರಶೇಖರ್, ತಹಸೀಲ್ದಾರ್ ನಾಗರಾಜು, ತಾಪಂ ಇಓ ಶಿವಪ್ರಕಾಶ್, ತುಮಕೂರು ಕೃಷಿ ನಿರ್ದೇಶಕ ಜಯಸ್ವಾಮಿ, ಮಧುಗಿರಿ ಉಪಕೃಷಿ ನಿರ್ದೇಶಕ ಅಶೋಕ್, ಸಹಾಯಕ ಕೃಷಿ ನಿರ್ದೇಶಕ ನಾಗರಾಜು, ನೂರುಆಜಾಂ, ಪಶು ಇಲಾಖೆಯ ಶಶಿಕುಮಾರ್, ತೋಟಗಾರಿಕೆ ಇಲಾಖೆಯ ಪುಪ್ಪಲತಾ, ತಾಪಂ ಎಡಿಎ ನಾಗರಾಜು, ಬೈಚಾಪುರ ಪಿಡಿಓ ರಾಘವೇಂದ್ರ ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
