ಚಿತ್ರದುರ್ಗ:
ವಾಹನಗಳನ್ನು ಚಾಲನೆ ಮಾಡುವಾಗ ಚಾಲಕರು ಮೈಯೆಲ್ಲಾ ಕಣ್ಣಾಗಿಸಿಕೊಂಡು ಎಚ್ಚರಿಕೆಯಿಂದ ಇರಬೇಕು. ಇಲ್ಲವಾದರೆ ಅಪಘಾತಗಳು ಸಂಭವಿಸಿ ಅಮೂಲ್ಯವಾದ ಪ್ರಾಣವನ್ನು ಬಲಿಕೊಡಬೇಕಾಗುತ್ತದೆ. ಎಂದು ಸಂಸದ ಬಿ.ಎನ್.ಚಂದ್ರಪ್ಪ ಚಾಲಕರುಗಳಿಗೆ ಕಿವಿಮಾತು ಹೇಳಿದರು.
ಜಿಲ್ಲಾ ಸರ್ಕಾರಿ ನೌಕರರ ಸಂಘದ ಕಟ್ಟಡದ ಸಮೀಪ ಐದು ಲಕ್ಷ ರೂ.ವೆಚ್ಚದಲ್ಲಿ ಜಿಲ್ಲಾ ಸರ್ಕಾರಿ ವಾಹನ ಚಾಲಕರ ಸಂಘದ ಕಟ್ಟಡ ನಿರ್ಮಾಣ ಕಾಮಗಾರಿಗೆ ಗುರುವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಅಧಿಕಾರಿಗಳ ಜೀವ ನಿಮ್ಮ ಕೈಯಲ್ಲಿರುವುದರಿಂದ ವಾಹನ ಚಾಲನೆ ಮಾಡುವಾಗ ನಿಮ್ಮ ಗಮನ ಬೇರೆಡೆ ಹೋಗಬಾರದು. ಆಕಸ್ಮಿಕವಾಗಿ ಅಪಘಾತಗಳು ಸಂಭವಿಸಿದರೆ ಪ್ರಾಣ ಹಾನಿಯಾಗಿ ನಿಮ್ಮನ್ನೇ ನಂಬಿಕೊಂಡಿರುವ ಕುಟುಂಬ ಅನಾಥವಾಗುತ್ತದೆ ಎಂದು ಚಾಲಕರುಗಳಿಗೆ ತಿಳಿಸಿದರು.
ಸಮಾಜದಲ್ಲಿ ಸರ್ಕಾರಿ ನೌಕರರ ಸೇವೆ ಹೆಚ್ಚಿನ ಮಹತ್ವದ್ದಾಗಿದೆ. ಅದರಲ್ಲೂ ಸರ್ಕಾರಿ ವಾಹನ ಚಾಲಕರ ಸೇವೆ ಅತ್ಯಂತ ಮಹತ್ವದ್ದು, ಸರ್ಕಾರಿ ಅಧಿಕಾರಿಗಳ ಜೀವ ಈ ನೌಕರರ ಕೈಯಲ್ಲಿದೆ ಎಂದು ಹೇಳಿದರು.
ಇಂದು ವಾಹನ ಚಾಲಕರೂ ಸಹ ಸಂಘಟಿತರಾಗುತ್ತಿರುವುದು ಉತ್ತಮ ಬೆಳವಣಿಗೆ. ಈ ಸಂಘಟನೆ ಇಡೀ ಜಿಲ್ಲೆಯ ಸರ್ಕಾರಿ ವಾಹನ ಚಾಲಕರ ಹಿತವನ್ನು ಬಯಸುವ ಕೆಲಸ ಮಾಡಬೇಕು. ಸಂಘದ ಚಟುವಟಿಕೆಯನ್ನು ಉತ್ತಮವಾಗಿ ನಡೆಸಿಕೊಂಡು ಹೋಗಲು ನನ್ನ ಅನುದಾನದಲ್ಲಿ ಐದು ಲಕ್ಷ ರೂಪಾಯಿ ನೀಡಲಾಗಿದೆ. ಈ ಮೊತ್ತದಲ್ಲಿ ಉತ್ತಮ ಕಟ್ಟಡವನ್ನು ನಿರ್ಮಿಸಿಕೊಂಡು ಸಂಘಟನೆಯನ್ನು ಇನ್ನಷ್ಟು ಬಲಪಡಿಸಬೇಕು, ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಅನುದಾನ ನೀಡಲಾಗುವುದು ಎಂದು ಸಂಸದ ಚಂದ್ರಪ್ಪ ಇದೇ ಸಂದರ್ಭದಲ್ಲಿ ಭರವಸೆ ನೀಡಿದರು
ಜಿಲ್ಲಾ ಸರ್ಕಾರಿ ವಾಹನ ಚಾಲಕರ ಸಂಘದ ಅಧ್ಯಕ್ಷ ಎನ್. ಶ್ರೀನಿವಾಸ್, ಉಪಾಧ್ಯಕ್ಷ ಎಸ್.ಟಿ.ಶ್ರೀನಿವಾಸ್, ಕಾರ್ಯದರ್ಶಿ ಮೊಹಿಸ್ಸಾಬ್, ಖಜಾಂಚಿ ಟಿ.ಆರ್.ತಿಪ್ಪೇಸ್ವಾಮಿ, ರಾಘವೇಂದ್ರ,ಮ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕಿನ ಅಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
