ದಾವಣಗೆರೆ
ಹರಿಹರದಿಂದ ಯಶವಂತಪುರ ಇಂಟರ್ ಸಿಟಿ ರೈಲನ್ನು ಪ್ರತಿ ದಿನ ಸಂಚರಿಸುವಂತೆ ಮಾಡಿದ ನೈರುತ್ಯ ರೈಲ್ವೆ ವಲಯ ಪ್ರಯಾಣಿಕರ ಕುಂದು-ಕೊರತೆ ನಿವಾರಣೆ ಕ್ಷೇಮಾಭಿವೃದ್ಧಿ ಸಂಘದ ಮನವಿಗೆ ನೈರುತ್ಯ ರೈಲ್ವೆ ವಲಯದ ಜನರಲ್ ಮ್ಯಾನೇಜರ್ ಅಜಯಕುಮಾರ್ ಸಿಂಗ್ ಹಸಿರು ನಿಶಾನೆ ತೋರಿಸಿದ್ದಾರೆ.
ಹರಿಹರದಿಂದ ಚಿಕ್ಕಜಾಜೂರುವರೆಗೆ ವಿವಿಧ ಕಾಮಗಾರಿಗಳನ್ನು ಖುದ್ದಾಗಿ ವೀಕ್ಷಣೆ ಮಾಡಲು ವಿಶೇಷ ರೈಲಿನಲ್ಲಿ ಆಗಮಿಸಿದ್ದ ನೈರುತ್ಯ ರೈಲ್ವೆ ವಲಯದ ಜನರಲ್ ಮ್ಯಾನೇಜರ್ ಅಜಯಕುಮಾರ್ ಸಿಂಗ್ ಅವರಲ್ಲಿ ಸಮಿತಿ ಅಧ್ಯಕ್ಷ ಎಂ.ಎಸ್.ಕೆ.ಶಾಸ್ತ್ರಿ ಮಾಡಿಕೊಂಡ ಮನವಿಯಂತೆ ಮಾಯಕೊಂಡದಲ್ಲಿ ರೈಲು ನಿಲುಗಡೆ ಮಾಡಿ ಮನವಿ ಸ್ವೀಕರಿಸಿದರು.
ಹರಿಹರ-ಯಶವಂತಪುರ ಇಂಟರ್ ಸಿಟಿ ರೈಲು ಮಾಯಕೊಂಡದಲ್ಲಿ ನಿಲುಗಡೆಗೆ ಅನುಮತಿ ಕೂಡ ದೊರಕಿದೆ. ಈ ರೈಲನ್ನು ರಾಮನಗರದವರೆಗೆ ವಿಸ್ತರಿಸುವಂತೆ ಭರವಸೆ ಕೂಡ ನೀಡಿದರು. ಧಾರವಾಡ-ಮೈಸೂರು ಎಕ್ಸ್ಪ್ರೆಸ್ ರೈಲನ್ನು ಮಾಯಕೊಂಡದಲ್ಲಿ ನಿಲುಗಡೆ ಮಾಡಲು ಆದೇಶಿಸುವುದಾಗಿ ಅಜಯಕುಮಾರ್ ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮೈಸೂರು ವಿಭಾಗದ ಡಿ.ಆರ್.ಎಂ. ಅಪರ್ಣಾ ಇದ್ದರು. ನಿಯೋಗದಲ್ಲಿ ಎಸ್.ಜಿ. ಮುರುಗೇಶಪ್ಪ, ಗ್ರಾ.ಪಂ. ಅಧ್ಯಕ್ಷ ಕೆ.ಆರ್ ಲಕ್ಷ್ಮಣಪ್ಪ, ಗುಡ್ಲು ಗಂಗಾಧರ, ಪಟ್ಟಣಶೆಟ್ಟಿ ಆನಂದಪ್ಪ, ಎಸ್.ರಾಜಶೇಖರ, ಮಂಜುನಾಥಸ್ವಾಮಿ, ಬಿ.ಕೆ. ಬೀರಪ್ಪ, ದಾಸಜ್ಜರ ಎನ್.ಹನುಮಂತಪ್ಪ ಮತ್ತಿತರರು ಹಾಜರಿದ್ದರು.