ಹರಿಹರ:
ಮಾ.31ರ ಭಾನುವಾರ ಬೆಳಗ್ಗೆ 10.30 ಕ್ಕೆ ತಾಲೂಕಿನ ಕೊಕ್ಕನೂರು ಗ್ರಾಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ಎಸ್ .ಯಡಿಯೂರಪ್ಪನವರ ನೇತೃತ್ವದಲ್ಲಿ ಸಾರ್ವತ್ರಿಕ ಲೋಕಸಭಾ ಚುನಾವಣೆ -2019 ರ ಪ್ರಚಾರಾರ್ಥವಾಗಿ ಬೃಹತ್ ಬಹಿರಂಗ ಸಭೆ ನಡೆಯಲ್ಲಿದೆ ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ರಾಜು ರೋಖಡೆ ಹೇಳಿದರು.
ನಗರದ ರಚನಾ ಕ್ರೀಡಾ ಟ್ರಸ್ಟ್ ಸಭಾಂಗಣದಲ್ಲಿ ಶುಕ್ರವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬರುವ ಭಾನುವಾರ ಕೊಕ್ಕನೂರು ಗ್ರಾಮದಲ್ಲಿ ಬೃಹತ್ ಬಹಿರಂಗ ಸಭೆಯ ಅಧ್ಯಕ್ಷತೆಯನ್ನು ಬಿಜೆಪಿ ತಾಲ್ಲೂಕು ಗ್ರಾಮಾಂತರ ಅಧ್ಯಕ್ಷ ಗೋವಿನಾಳ್ ರಾಜಣ್ಣ ವಹಿಸುವರು ಎಂದರು.
ನಂತರ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬಿಜೆಪಿ ಅಭ್ಯರ್ಥಿ,ಸಂಸದ ಜಿ.ಎಂ.ಸಿದ್ದೇಶ್ವರ್, ಶಾಸಕ ಎಸ್.ಎ.ರವೀಂದ್ರನಾಥ್ ,ಮಾಜಿ ಶಾಸಕ ಬಿ.ಪಿ. ಹರೀಶ್, ಬಿಜೆಪಿ ಜಿಲ್ಲಾಅಧ್ಯಕ್ಷ ಯಶವಂತರಾವ್ ಜಾಧವ್ ಅಲ್ಲದೆ ಜಿಲ್ಲೆಯ ಬಿಜೆಪಿ ಶಾಸಕರುಗಳಾದ ಎಂ.ಪಿ.ರೇಣುಕಾಚಾರ್ಯ,ಮಾಡಾಳು ವಿರೂಪಾಕ್ಷಪ್ಪ, ಎಸ್.ವಿ.ರಾಮಚಂದ್ರ, ಎನ್. ಲಿಂಗಣ್ಣ, ಜಿ.ಪಂ ಸದಸ್ಯರಾದ ಬಿ.ಎಂ.ವಾಗೀಶ ಸ್ವಾಮಿ ,ನಿರ್ಮಲಾ ಮುಕುಂದ್,ಜಿ.ಪಂ.ಮಾಜಿ ಅಧ್ಯಕ್ಷ ಹನಗವಾಡಿ ವೀರೇಶ್,ಕೊಕ್ಕನೂರು ಗ್ರಾಮದ ಓ.ಬಿ.ಗೌಡರು,ಬಿಜೆಪಿ ಇನ್ನೂ ಅನೇಕ ಗಣ್ಯರು ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಉಪಸ್ಥಿತರಿದ್ದ ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್ ಮಾತನಾಡಿ ಅಂದು ಬೆಳಗ್ಗೆ 10.00 ಗಂಟೆಗೆ ನಗರ ಹಾಗೂ ಗ್ರಾಮೀಣ ಪ್ರದೇಶದ ಬಿಜೆಪಿಯ ನೂರಾರು ಯುವಕರು ಹರಿಹರ ನಗರದ ಮಾಜೇನಹಳ್ಳಿ ಗ್ರಾಮದೇವತೆ ದೇವಸ್ಥಾನದ ಬಳಿ ಸೇರಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರನ್ನು ಸ್ವಾಗತಿಸಿ ಕೊಕ್ಕನೂರಿಗೆ ಕರೆತರಲಾಗುವುದು ಎಂದು ಹೇಳಿದ ಅವರು ಇದೇ ವೇಳೆ ಆ ಭಾಗದ ವಿವಿಧ ಪಕ್ಷಗಳ ಗಣ್ಯರುಗಳು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂಬುದನ್ನು ಸಹ ತಿಳಿಸಿದರು.
ಪಕ್ಷದ ಹಿರಿಯರಾದ ಹೊಳೆ ಸಿರಿಗೆರೆ ಎನ್.ಜಿ. ನಾಗನಗೌಡ್ರ ಬಗ್ಗೆ ಸುದ್ದಿಗಾರರೊಬ್ಬರು ಮಾಡಿದ ಪ್ರಶ್ನೆಗೆ ಉತ್ತರಿಸಿದ ಅವರು ಇತ್ತೀಚೆಗೆ ನಡೆಯುವ ಪಕ್ಷದ ಕಾರ್ಯಕ್ರಮಗಳು ಹಿರಿಯರಾದ ಎನ್.ಜಿ.ನಾಗನಗೌಡ್ರ ರವರ ಮಾರ್ಗದರ್ಶನದಲ್ಲಿ ನಡೆಸಲಾಗುತ್ತಿದೆ ಎಂದು ಹೇಳಿದರಾದರೂ ಪಕ್ಷದಿಂದ ಹೊರಡಿಸಿರುವ ಕರಪತ್ರದಲ್ಲಿ ನಾಗನಗೌಡರ ಹೆಸರು ಇಲ್ಲದ್ದು ಆಶ್ಚರ್ಯಕ್ಕೆ ಎಡೆ ಮಾಡಿಕೊಟ್ಟಿದೆ.
ಭಾನುವಾರ ನಡೆಯುವ ಬೃಹತ್ ಬಹಿರಂಗ ಸಭೆಗೆ ತಾಲೂಕಿನ ಎಲ್ಲ ಬಿಜೆಪಿ ಕಾರ್ಯಕರ್ತರು ಅಭಿಮಾನಿಗಳು ವಿವಿಧ ಘಟಕಗಳ ಪದಾಧಿಕಾರಿಗಳು ಆಗಮಿಸಿ ಸಭೆಯನ್ನು ಯಶಸ್ವಿಗೊಳಿಸಿಕೊಡಬೇಕೆಂದು ವಿನಂತಿಸಿದರು.ಗೋಷ್ಠಿಯಲ್ಲಿ ಗ್ರಾಮಾಂತರ ಅಧ್ಯಕ್ಷ ಗೋವಿನಹಾಳ್ ರಾಜಣ್ಣ, ಬಾತಿ ಚಂದ್ರಶೇಖರ್, ಎಸ್ಸಿ ಘಟಕದ ಅಧ್ಯಕ್ಷ ಎನ್.ರಜನಿಕಾಂತ್, ರಾಘವೇಂದ್ರ ಉಪಾಧ್ಯಾಯ, ಎಚ್.ಸಿ.ಕೀರ್ತಿ ಕುಮಾರ್,ಬೆಳ್ಳೂಡಿ ಬಕ್ಕೆಶಪ್ಪ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
