ಬೆಂಗಳೂರು:
ಲಂಚಕೋರರನ್ನು ಹೆಡೆಮುರಿಕಟ್ಟಲು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಬೆಳ್ಳಂಬೆಳಗ್ಗೆ ರಾಜ್ಯದ 17 ಕಡೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.
ಐದು ವಿಶೇಷ ತಂಡದ ಅಧಿಕಾರಿಗಳು ರಾಜ್ಯದ ಪ್ರಮುಖ ಕೇಂದ್ರಗಳಾದ ಬೆಂಗಳೂರು, ಉಡುಪಿ, ದಾವಣಗೆರೆ, ಚಿಕ್ಕಮಗಳೂರು, ಮೈಸೂರು ತಾಲೂಕು ಕೇಂದ್ರಗಳಾದ ಹುಣಸೂರು, ಕಾರವಾರ, ಮಂಗಳೂರು, ಚಿಂಕತಾಮಣೆ ಸೇರಿದಂತೆ ಇತರೆ ಕಡೆ ದಾಳಿ ನಡೆಸಿ ಶೋಧ ಕಾರ್ಯದಲ್ಲಿ ನಿರತರಾಗಿದ್ದಾರೆ.
ಅಕ್ರಮ ಆಸ್ತಿ ಸಂಪಾದನೆ ಆರೋಪದ ಮೇಲೆ ದಾಳಿ ನಡೆಸಿದ್ದು, ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಐವರು ಸರ್ಕಾರಿ ಆಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದ್ದು, ಕೆಲ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.
ಬೆಂಗಳೂರಿನಲ್ಲಿ ಎರಡು ಕಡೆ ದಾಳಿ ನಡೆಸಿದ್ದು, ಬಸವೇಶ್ವರನಗರ ಮತ್ತು ಸಹಕಾರನಗರದಲ್ಲಿರುವ ಅಧಿಕಾರಿಗಳನ್ನು ವಿಚಾರಣೆ ನಡೆಸಿದ್ದಾರೆ. ಕೋ-ಆಪರೇಟಿವ್ ಬ್ಯೂರೋದ ಅಡಿಷನಲ್ ರಿಜಿಸ್ಟರ್ ಶಶಿಧರ್, ಬಿಬಿಎಂಪಿಯ ಪ್ಲಾನಿಂಗ್ ಅಡಿಷನಲ್ ಡೈರೆಕ್ಟರ್ ಬಿಸೆಟಪ್ಪ, ಮೈಸೂರು ಅರ್ಬನ್ ಡೆವಲಪ್ ಮೆಂಟ್ ಅಥಾರಿಟಿಯ ಜೂನಿಯರ್ ಇಂಜಿನಿಯರ್ ಕೆ.ಮಣಿ, ಗವರ್ನಮೆಂಟ್ ಕಾಲೇಜ್ ಆಫ್ ಟೀಚರ್ ಫೌಂಡೇಷನ್ ರೀಡರ್ಮಂಜುನಾಥಯ್ಯ, ದಾವಣಗೆರೆ ಅಗ್ರಿಕಲ್ಚರ್ನ ಡೆಪ್ಯುಟಿ ಡೈರೆಕ್ಟರ್ ಹಂಸವೇಣಿ ನಿವಾಸ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ಇನ್ನು ಮೈಸೂರಿನ ಹೊರವಲಯದ ಬಲವತ್ತ ಗ್ರಾಮದಲ್ಲಿರುವ ಮಣಿ ಮನೆ ಹಾಗೂ ಹುಣಸೂರಿನಲ್ಲಿರುವ ಮಣಿ ಅಕ್ಕನ ಮನೆ ಮೇಲೂ ಏಕಕಾಲಕ್ಕೆ ಎಸಿಬಿ ದಾಳಿ ನಡೆಸಿದೆ. ಇಂಜಿನಿಯರ್ ಕೆ.ಮಣಿ ಅಕ್ರಮ ಆಸ್ತಿ ಸಂಪಾದಿಸಿರುವ ಆರೋಪ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಎಸಿಬಿ ಅಧಿಕಾರಿಗಳು ಮನೆ ಮೇಲೆ ದಾಳಿ ನಡೆಸಿದರು.ಇದಲ್ಲದೆ,ಕಾರವಾರದ ತೋಟಗಾರಿ ಇಲಾಖೆ ಸಹಾಯಕ ನಿರ್ದೇಶಕ ಎನ್.ಕುಮಾರ್ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಎನ್.ಕುಮಾರ್ ಮನೆಯಲ್ಲೂ ಅಪಾರ ಪ್ರಮಾಣದ ಆಸ್ತಿ ಪತ್ರಗಳು ಪತ್ತೆಯಾಗಿವೆ. ದಾವಣಗೆರೆಯ ಕೃಷಿ ಇಲಾಖೆ ಅಧಿಕಾರಿ ಎನ್.ಕುಮಾರ್ ಪತ್ನಿ ಹಂಸವೇಣಿ ಮನೆ ಮೇಲೂ ಎಸಿಬಿ ಡಿವೈಎಸ್ಪಿ ಪರಮೇಶ್ವರಪ್ಪ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಹಂಸವೇಣಿ ಹೆಸರಿನಲ್ಲಿ 75/40 ಅಳತೆಯ 3 ಅಂತಸ್ತಿನ ಒಂದು ಮನೆ, ಹರಪನಹಳ್ಳಿ ತಾಲೂಕಿನ ತೆಲಗಿ ಗ್ರಾಮದಲ್ಲಿ 15 ಎಕರೆ ಜಮೀನು, 1 ಜೈಲೋ ಕಾರು, 5 ದ್ವಿಚಕ್ರ ವಾಹನ, 1 ಟ್ರ್ಯಾಕ್ಟರ್ ಅಪಾರ ಪ್ರಮಾಣದ ಬೆಳ್ಳಿ, ಬಂಗಾರ ಪತ್ತೆಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2018/12/ACB.gif)