ಕುಣಿಗಲ್
ಪುರಸಭೆಯ ಆಡಳಿತದ ವಿರುದ್ಧ ಪುರಸಭೆಗೆ ಆಯ್ಕೆಯಾದ ಸದಸ್ಯರೊಬ್ಬರು ಇಲ್ಲಿನ ಆಡಳಿತ ಕಾರ್ಯವೈಖರಿಯನ್ನು ಖಂಡಿಸಿ ಆಡಳಿತ ಯಂತ್ರದ ಅವ್ಯವಸ್ಥೆಯ ವಿರುದ್ಧ ಥೂ…. ಛೀ… ಚಳವಳಿಯನ್ನ ಹಮ್ಮಿಕೊಳ್ಳುವ ಮೂಲಕ ಪುರಸಭೆಗೆ ಎಚ್ಚರಿಕೆ ಘಂಟೆ ಬಾರಿಸಿದ್ದಾರೆ.!
ಪುರಸಭೆಯ ಆಸ್ತಿಯನ್ನು ರಕ್ಷಿಸುವಲ್ಲಿ ವಿಫಲ ಆಗಿರುವ ಅಧಿಕಾರಿಗಳ ವಿರುದ್ಧ ಶೀಘ್ರವಾಗಿ ಮುಂದಿನ ವಾರದೊಳಗೆ ಥೂ….ಛೀ.. ಚಳವಳಿಯನ್ನು ಪ್ರಾರಂಭಿಸಲಾಗುವುದು ಎಂದು 19ನೇ ವಾರ್ಡ್ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡ ಶಂಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪಟ್ಟಣದಲ್ಲಿ ಇರುವ ಪುರಸಭೆಗೆ ಸೇರಿದ ಸಾರ್ವಜನಿಕ ಆಸ್ತಿಗಳನ್ನು ರಕ್ಷಿಸುವಂತೆ ಹಲವಾರು ಬಾರಿ ಸ್ವತಃ ನಾನೇ ಲಿಖಿತ ರೂಪದಲ್ಲಿ ನೀಡುವುದರ ಜೊತೆಗೆ ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ತಂದು ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಅದನ್ನು ಅನುಷ್ಠಾನಕ್ಕೆ ತರಬೇಕಾದ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಮರೆತು ಉದಾಸೀನತೆ ತೋರುವ ಮೂಲಕ ಏತಕ್ಕಾಗಿ ಹೀಗೆ ಅಧಿಕಾರಿಗಳು ಹಿಂದೆ ಸರಿಯುತ್ತಾ ಬಂದಿದ್ದಾರೆ ಎಂಬುದು ಹಲವು ಅನುಮಾನಕ್ಕೆ ಎಡೆ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪುರಸಭೆಯ ಅಧಿಕಾರಿಗಳು ಕೇವಲ ಖಾತೆ ಪಾಣಿ ಮಾಡುವ ದಂಧೆಯಲ್ಲಿ ತಲ್ಲೀನರಾಗಿ ಹಣ ಮಾಡುತ್ತಿದ್ದಾರೆ. ಸಾರ್ವಜನಿಕರ ಆಸ್ತಿಯನ್ನು ರಕ್ಷಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಅಧಿಕಾರಿಗಳಿಗೆ ಒಂದು ವಾರ ಕಾಲಾವಕಾಶ ನೀಡುತ್ತಿದ್ದು ಪುರಸಭಾ ಆಸ್ತಿಯನ್ನು ರಕ್ಷಿಸಲು ಮುಂದಾಗದಿದ್ದರೆ ಥೂ ಛೀ ಚಳವಳಿಯನ್ನು ಪ್ರಾರಂಭಿಸಲಾಗುವುದು ನಂತರದ ದಿನಗಳಲ್ಲಿ ಪುರಸಭೆ ಮುಂಭಾಗ ಚಪ್ಪಲಿ ಹಾಗೂ ಪೊರಕೆಗಳ ಪ್ರದರ್ಶನ ಮೂರನೇಯ ಹಂತವಾಗಿ ಅಧಿಕಾರಿಗಳ ಭಾವಚಿತ್ರಕ್ಕೆ ಸಾರ್ವಜನಿಕರಿಂದ ಸಗಣಿಯಾಕಿ ಪ್ರತಿಭಟಿಸುವ ಮೂಲಕ ವಿಶೇಷ ಹಾಗೂ ಉಗ್ರವಾದ ರೂಪದಲ್ಲಿ ಪ್ರತಿಭಟನೆಯನ್ನು ನಡೆಸುವುದಾಗಿ ಸದ್ಯ ಪುರಸಭಾ ಸದಸ್ಯರೆ ಎಚ್ಚರಿಕೆ ನೀಡಿರುವುದು ನಾಗರೀಕ ವಲಯದಲ್ಲಿ ಬಾರಿ ಅಚ್ಚರಿ ಹಾಗೂ ಚರ್ಚೆಗೆ ಗ್ರಾಸವನ್ನುಂಟುಮಾಡಿದೆ.
ಇನ್ನಾದರೂ ಇವರು ಸಮಯಾವಕಾಶದಲ್ಲಿ ಪುರಸಭಾ ಅಧಿಕಾರಿಗಳು ಇಂತಹ ಘಟನಾವಳಿಗೆ ಅವಕಾಶ ನೀಡದೆ ಪುರಸಭಾ ವ್ಯಾಪ್ತಿಯಲ್ಲಿರುವ ಸರ್ಕಾರದ ಭೂಮಿಗಳನ್ನು ಹಾಗೂ ಉದ್ಯಾನವನಗಳನ್ನು ಕೆಲ ಬಲಾಢ್ಯರ ಮತ್ತು ಪಟ್ಟಭದ್ರ ಶಕ್ತಿಗಳ ಕೈಯಲ್ಲಿ ಸೇರಿ ಹೋಗುತ್ತಿರುವ ಆಸ್ತಿಗಳನ್ನು ಕೂಡಲೇ ರಕ್ಷಿಸಬೇಕೆಂದು ಆಗ್ರಹಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
