ತುರುವೇಕೆರೆ
ರಾಜ್ಯದಲ್ಲಿ ಕಾಂಗ್ರೆಸ್ – ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರದ ಅಸ್ತಿತ್ವ ನಿಂತಿರುವುದೇ ನಾಯಕ ಅಥವಾ ವಾಲ್ಮೀಕಿ ಸಮುದಾಯದಿಂದ ಮಾತ್ರ ಎಂಬುದನ್ನು ನಾಡಿನ ಜನತೆಯೇ ಅರಿತಿದ್ದಾರೆ ಎಂದು ಶಾಸಕ ಮಸಾಲಾಜಯರಾಮ್ ಹೇಳಿದರು.
ಪಟ್ಟಣದ ಗಣಪತಿ ಆಸ್ಥಾನಮಂಟಪದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ ಹಾಗೂ ಪಟ್ಟಣ ಪಂಚಾಯಿತಿ ವತಿಯಿಂದ ಏರ್ಪಡಿಸಿದ್ದ ವಿಶ್ವಕವಿ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮುದಾಯದ ಜನತೆ ಕೀಳರಿಮೆ ಹೊಂದದೆ, ಸಂಘಟನಾ ಶಕ್ತ್ತಿಯಿಂದ ತಮ್ಮ ಹಕ್ಕುಬಾಧ್ಯತೆಗಳನ್ನು ಪಡೆದುಕೊಳ್ಳುವತ್ತ ಚಿತ್ತ ಹರಿಸಬೇಕಿದೆ. ಪಟ್ಟಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಸಮುದಾಯ ಭವನ ನಿರ್ಮಾಣಕ್ಕೆ ಮನವಿ ಬಂದಿದ್ದು ಶೀಘ್ರವೇ ಸ್ಥಳ ಗುರುತಿಸಿ ಭವನ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ರೇಣುಕಾಕೃಷ್ಣಮೂರ್ತಿ ಮಾತನಾಡಿ ರಾಮಾಯಣದಂತಹ ಮಹಾಕಾವ್ಯ ಇಡೀ ಮನುಕುಲಕ್ಕೆ ಮಾದರಿ ಎನಿಸಿದೆ ಎಂದು ದರೋಡೆಕೋರನಾದ ವಾಲ್ಮೀಕಿ ಸಂತನಾದ ಬಗೆಯನ್ನು ವಿವರಿಸಿದರು.
ನಿವೃತ್ತ ಪ್ರಾಂಶುಪಾಲ ಆನಂದ್ರಾಜ್ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಮತ್ತು ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಲಾಯಿತು. ಹಾಗೆಯೇ ವಾಲ್ಮೀಕಿ ಸಮುದಾಯದ ಮುಖಂಡರಿಂದ ಶಾಸಕ ಮಸಾಲಾಜಯರಾಮ್ ಅವರನ್ನು ಮೈಸೂರು ಪೇಟ ತೊಡಿಸಿ ಅಭಿನಂದಿಸಲಾಯಿತು.
ಇದಕ್ಕೂ ಮೊದಲು ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರವನ್ನು ಜಾನಪದ ಕಲಾತಂಡಗಳೊಂದಿಗೆ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಲಾಯಿತು.
ಸಮಾರಂಭದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನಾಗರತ್ನ, ಉಪಾಧ್ಯಕ್ಷೆ ಹೇಮಾವತಿ, ಪ.ಪಂ. ಅಧ್ಯಕ್ಷ ಲಕ್ಷ್ಮೀನರಸಿಂಹ, ಎಪಿಎಂಸಿ ನಿರ್ದೇಶಕ ವಿ.ಟಿ.ವೆಂಕಟರಾಮಯ್ಯ, ಕಸಾಪ ಅಧ್ಯಕ್ಷ ನಂರಾಜುಮುನಿಯೂರು, ಮುಖಂಡ ಕಡೇಹಳ್ಳಿಸಿದ್ದೇಗೌಡ, ತಹಸೀಲ್ದಾರ್ ನಾಗರಾಜು, ಇ.ಒ.ಗಂಗಾಧರ್, ಬಿಇಒ.ಮಂಜುನಾಥ್, ಸಮಾಜಕಲ್ಯಾಣಾಧಿಕಾರಿ ಎಸ್.ರಾಮಣ್ಣ, ಸಿಪಿಐ ಮೊಹಮದ್ ಸಲೀಂ, ಪಿಎಸ್ಐ.ರಾಜು, ಅಬಕಾರಿ ನಿರೀಕ್ಷಕ ಆನಂದ್, ಈಜುತರಬೇತುದಾರ ತಿಮ್ಮೇಗೌಡ, ತಾಲ್ಲೂಕು ಸಹಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಯ್ಯ ಮತ್ತು ಸಮುದಾಯದ ಜನರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2018/10/24tvk3-valmiki-jayanthi.gif)