ಕನಕದಾಸರ ವಿಚಾರಧಾರೆ ಮನೆ-ಮನೆಗೂ ತಲುಪಿಸಿ

ದಾವಣಗೆರೆ

         ಹಾಲುಮತ ಬಾಂಧವರು ಡಿಜೆ ಸಂಸ್ಕøತಿಯಿಂದ ದೂರ ಉಳಿದು, ಡಿಜೆಯ ಬದಲಾಗಿ ದಾಸಶ್ರೇಷ್ಠ ಕನಕದಾಸರ ಕೀರ್ತನೆ, ಮಂಡಿಗೆಗಳನ್ನು ಪುಸ್ತಕದ ರೂಪದಲ್ಲಿ ಹೊರ ತಂದು, ಅವರ ವಿಚಾರಧಾರೆಗಳನ್ನು ಮನೆ-ಮನೆಗೂ ತಲುಪಿಸಬೇಕೆಂದು ಕಾಗಿನೆಲೆ ಕನಕ ಗುರುಪೀಠದ ಜಗದ್ಗುರು ಶ್ರೀನಿರಂಜನಾನಂದಪುರಿ ಸ್ವಾಮೀಜಿ ಕರೆ ನೀಡಿದರು.

        ಜಗಳೂರು ತಾಲೂಕಿನ ಹಾಲೇಕಲ್ಲು ಗ್ರಾಮದಲ್ಲಿ ಹಾಲುಮತ ಮಹಾಸಭಾ ಹಾಗೂ ಕನಕದಾಸರ ಜಯಂತೋತ್ಸವ ಸಮಿತಿ ಆಶ್ರಯದಲ್ಲಿ ಬುಧವಾರ ಏರ್ಪಡಿಸಿದ್ದ ಕನಕದಾಸರ ಹಬ್ಬ ಸಮಾರಂಭದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದ ಅವರು, ಡಿಜೆ ಸಂಸ್ಕತಿಯಿಂದ ನಮ್ಮ ಹಾಲುಮತ ಸಂಸ್ಕತಿ ದೂರ ಉಳಿಯಬೇಕು. ಡಿಜೆ ಬದಲು ಕನಕದಾಸರ ಕೀರ್ತನೆ, ಮಂಡಿಗೆಗಳನ್ನು ಪುಸ್ತಗಳನ್ನು ಹೊರ ತಂದು ಮನೆ-ಮನೆಗೆ ಹಂಚುವ ಕೆಲಸ ಮಾಡಬೇಕೆಂದು ಕಿವಿಮಾತು ಹೇಳಿದರು.

          ಮಾನವ ಕುಲದ ಒಳಿತಿಗೆ ಶ್ರಮಿಸಿದ ಕನಕದಾಸರನ್ನು ಯಾರೂ ಸಹ ಒಂದು ಜಾತಿಗೆ ಸೀಮಿತ ಮಾಡಬಾರದು. ಹಾಲೇಕಲ್ಲು ಗ್ರಾಮದಲ್ಲಿ ಎಲ್ಲಾ ಸಮುದಾಯದವರು ಸೇರಿ ಕನಕದಾಸರ ಹಬ್ಬ ಆಚರಿಸುತ್ತಿರುವುದು ಇಡೀ ರಾಜ್ಯಕ್ಕೆ ಮಾದರಿಯಾಗಬೇಕೆಂದು ಸಲಹೆ ನೀಡಿದರು.

          ಹಾಲುಮತ ಮಹಾಸಭಾ ಅಸ್ತಿತ್ವಕೆ ಬಂದ ನಂತರ ರಾಜ್ಯದಲ್ಲಿ ಕುರುಬರು ಜಾಗೃತರಾಗುವುದರ ಜೊತೆಗೆ ಯುವಕರು ಸಂಘಟಿತರಾಗುತ್ತಿದ್ದಾರೆ. ಎಲ್ಲಾ ಸಮುದಾಯದವರೊಂದಿಗೆ ಒಂದಾಗಿ ಸಹೋದರರಂತೆ ಹೆಜ್ಜೆ ಹಾಕುತ್ತಿದ್ದಾರೆ. ಕನಕ ಗುರುಪೀಠವೂ ಶೈಕ್ಷಣಿಕವಾಗಿ ದೊಡ್ಡ ಕ್ರಾಂತಿಗೆ ಮುಂದಾಗಿದೆ. ನಿಮ್ಮ ಆಶಯಗಳನ್ನು ನಾವು ಸಾರ್ಥಕ ಮಾಡುತ್ತೇವೆ ಎಂದರು.’

         ಕನಕದಾಸರ ಹೆಸರಿನ ಮೇಲೆ ಕನಕ ಮಾಲೆ ಧರಿಸಿ ಕಾಗಿನೆಲೆಗೆ ಈ ಬಾರಿ 8 ಸಾವಿರಕ್ಕೂ ಅಧಿಕ ಭಕ್ತರು ಆಗಮಿಸಿದ್ದರು. ಇದು ಒಂದು ವಿನೂತನ ಕಾರ್ಯ. ಈ ಕಾರ್ಯಕ್ಕೆ ಶ್ರೀಮಠದ ಬೆಂಬಲ ಸದಾ ಇರುತ್ತದೆ. ಕನಕ ಜಯಂತಿಯಂತೆ ಕನಕದಾಸರ ಹಬ್ಬಗಳು ಎಲ್ಲೆಡೆ ಎಲ್ಲರೊಂದಿಗೆ ಸೇರಿ ನಡೆಯಲಿ ಎಂದು ಆಶಿಸಿದರು.

         ತರಳಬಾಳು ಬೃಹನ್ಮಠದ ಸಾಣೇಹಳ್ಳಿ ಶಾಖಾ ಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಕನಕದಾಸರಂತಹ ಶ್ರೇಷ್ಠ ಸಂತ ಜಗತ್ತಿನಲ್ಲಿ ಯಾರೂ ಇಲ್ಲ. ಅವರ ಪ್ರತಿಯೊಂದ ಕೀರ್ತನೆಗಳು ಮಂಡಿಗೆಗಳು ಅಭೂತಪೂರ್ವವಾಗಿವೆ. ತನ್ನನ್ನು ತಾನು ಅರಿಯುವುದೇ ನಿಜವಾದ ಕಾಯಕ ಎಂಬುದನ್ನು ಕನಕದಾಸರು ತೋರಿಸಿಕೊಟ್ಟಿದ್ದಾರೆ ಎಂದರು.

          ಕನಕದಾಸರ ಕೀರ್ತನೆಗಳು ಪ್ರತಿ ಮನೆಗೆ ಮುಟ್ಟಿಸುವ ಮೂಲಕ ಸಮುದಾಯವನ್ನು ಮೇಲೆತ್ತುವ ಕೆಲಸವಾಗಬೇಕು. ಹಾಲೇಕಲ್ಲು ಗ್ರಾಮದಲ್ಲಿ ನಡೆದ ಈ ಕಾರ್ಯಕ್ರಮ ಪ್ರತಿ ವರ್ಷವೂ ಹರ್ಷದಾಯಕವಾಗಿ ನಡೆಯುವಂತಾಗಲಿ ನಾವು ಪ್ರತಿವರ್ಷವೂ ಬರುತ್ತೇವೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಎಸ್.ವಿ.ರಾಮಚಂದ್ರಪ್ಪ ಮಾತನಾಡಿ, ಹಾಲುಮತ ಸಮಾಜ ಶ್ರೇಷ್ಠ ಸಮಾಜವಾಗಿದೆ. ಕನಕದಾಸರ ಚಿಂತನೆಗಳನ್ನು ಇಂದಿನ ಯುವ ಸಮೂಹ ರೂಢಿಸಿಕೊಳ್ಳಬೇಕು. ಗುರುಗಳ ಆದೇಶದಂತೆ ಯಾವ ಸಮಾಜ ಮುನ್ನಡೆಯುತ್ತದೆಯೋ ಆ ಸಮಾಜ ಉನ್ನತ ಅಭಿವೃದ್ಧಿ ಹೊಂದುತ್ತದೆ ಎಂಬುದಕ್ಕೆ ಸಿರಿಗೆರೆ ಸಾಣೆಹಳ್ಳಿ ಶ್ರೀಗಳೇ ಸಾಕ್ಷಿಯಾಗಿದ್ದಾರೆ. ಅದರಂತೆಯೇ ಹಿಂದುಳಿದ ಸಮಾಜಗಳು ಗುರುಗಳ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕೆಂದು ಹೇಳಿದರು.

          ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕೆ.ಆರ್.ಜಯಶೀಲ ಮಾತನಾಡಿ, ಕುರಿ ಕಾಯುತ್ತ ಅಡವಿಯಲ್ಲಿ ಅಲೆಯುತ್ತ ಇದ್ದ ಕಾಡು ಕುರುಬರು. ಆದಿವಾಸಿಗಳು. ಅಲೆಮಾರಿಗಳು. ಈಗ ಶೈಕ್ಷಣಿಕ ಪಥದತ್ತ ಸಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಹಿಂದುಳಿದರಾದರೂ ನಾವು ಮುಂದೆ ಬಂದಿದ್ದೇವೆ. ಇನ್ನು ಬರಬೇಕಿದೆ. ಶಿಕ್ಷಣದ ಆಧ್ಯತೆಯನ್ನು ಚಿಂತಿಸಿ ಬೆಳ್ಳೊಡಿ ಶಾಖಾಮಠದಲ್ಲಿ ಐಎಎಸ್ ಹಾಗೂ ಕೆಎಎಸ್ ತರಬೇತಿಗಳು ಆರಂಭಗೊಳ್ಳಲಿದ್ದು, ಇದರ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಿಕೊಡಬೇಕೆಂದು ಸಲಹೆ ನೀಡಿದರು.

          ಮಾಜಿ ಶಾಸಕ ಹೆಚ್.ಪಿ ರಾಜೇಶ್ ಮಾತನಾಡಿ, ಕುರುಬ ಸಮುದಾಯಕ್ಕೆ ಸಿದ್ದರಾಮಯ್ಯನಂತ ವ್ಯಕ್ತಿ ಸಿಕ್ಕಿರುವುದು ಅದೃಷ್ಠ. ಸಿದ್ದರಾಮಯ್ಯ ಅವರು ಕುರುಬರಾದರೂ ಅವರು ಎಸ್ ಸಿ ಮತ್ತು ಎಸ್ ಟಿ ಹಾಗೂ ಅಲ್ಪಸಂಖ್ಯಾತರಿಗೆ ಸಾಕಷ್ಟು ಅನುಕೂಲ ಮಾಡಿಕೊಟ್ಟರು. ಎಸ್‍ಸಿ-ಎಸ್‍ಟಿಗಳು ಎಂದೂ ಸಿದ್ದರಾಮಯ್ಯವರನ್ನು ಮರೆಯುವಂತಿಲ್ಲ ಎಂದರು .

        ನಿವೃತ್ತ ಪ್ರಾಚಾರ್ಯರಾದ ಡಾ.ನಾ.ಲೋಕೇಶ್ ಒಡೆಯರ್ ಉಪನ್ಯಾಸ ನೀಡಿದರು. ಬುಡಕಟ್ಟು ಸಂಸ್ಕತಿ ಸಂಶೋಧಕ ಮಾಲತೇಶ್ ಅರಸ್ ಹರ್ತಿಕೋಟೆ, ತಾಲೂಕು ಪಂಚಾಯಿತಿ ಅಧ್ಯಕ್ಷೆ ಮಂಜುಳ ಶಿವಾನಂದಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯೆ ಉಮಾ, ಹಾಲುಮತ ಮಹಾಸಭಾದ ದಾವಣಗೆರೆ ಜಿಲ್ಲಾಧ್ಯಕ್ಷ ಸಿ.ವೀರಣ್ಣ, ಹಾಲುಮತ ಮಹಾಸಭಾದ ರಾಜ್ಯ ಸಂಚಾಲಕ ರಾಜುಮೌರ್ಯ, ಬಿಳಿಚೋಡು ಗ್ರಾಪಂ ಮಾಜಿ ಅಧ್ಯಕ್ಷ ಗಿರೀಶ್ ಒಡೆಯರ್, ಜಿಪಂ ಮಾಜಿ ಸದಸ್ಯ ನಾಗರಾಜ್, ತಾಲೂಕು ಕುರುಬರ ಸಂಘದ ಅಧ್ಯಕ್ಷ ಓಮಣ್ಣ, ಗ್ರಾಪಂ ಪಿಡಿಇ ಕೆ.ವೈ.ಲೋಹಿತ್ ಕುಮಾರ್, ನಿವೃತ್ತ ಶಿಕ್ಷಕ ರೇವಣಸಿದ್ದಪ್ಪ ಹಾಲುಮತ ಮಹಾಸಭಾ ಮುಖಂಡರಾದ ಗಂಗಾಧರ್, ಎಸ್.ರಾಜಪ್ಪ, ಕೆಜಿಡಿ ಗೋಣಿ ಬಸಪ್ಪ, ರೇಷ್ಮೆ ಇಲಾಖೆ ನಿವೃತ್ತ ಅಧಿಕಾರಿ ಬಸವರಾಜಪ್ಪ, ಹಾಲಪ್ಪ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಎಸ್.ಆರ್. ಗಂಗಪ್ಪ, ಗ್ರಾಪಂ ಉಪಾಧ್ಯಕ್ಷ ಸುರೇಂದ್ರಕುಮಾರ್ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

          ಕಾರ್ಯಕ್ರಮಕ್ಕೂ ಮುನ್ನ ಸಂಗೊಳ್ಳಿರಾಯಣ್ಣ ವೃತ್ತವನ್ನು ಮುಖಂಡರು ಅನಾವರಣ ಮಾಡಿದರು. ನೂರಾರು ಯುವಕರು ಭಂಡಾರದ ಬಣ್ಣದ ಟೀಷರ್ಟ ಧರಿಸಿ ಶಿಸ್ತಿನ ಸಿಪಾಯಿಗಳಂತೆ ಕಾರ್ಯನಿರ್ವಹಿಸಿದರು.ಗ್ರಾಮದೇವತೆ ಕರಿಯಮ್ಮ ದೇವಸ್ಥಾನದಿಂದ ಬೀರಲಿಂಗೇಶ್ವರ ದೇವಸ್ಥಾನದವರೆಗೆ ಮಹಿಳೆಯರು ಕುಂಭಾರತಿಯೊಂದಿಗೆ ಡೊಳ್ಳಿನ ಮೆರವಣಿಗೆ ಮಾಡಲಾಯಿತು. ಮಕ್ಕಳು ಹೂವಿನ ಹಾಸಿಗೆ ಮಾಡಲಾಗಿತ್ತು.

         ಇದೇ ವೇಳೆ ಹಾಲೇಕಲ್ಲು ಗ್ರಾಮದ ಸೈನಿಕರಾದ ಹೆಚ್.ಆರ್ ಪರಶುರಾಮ್ ಹಾಗೂ ಸೈನಿಕ ಆರ್.ಪಿ. ಮಂಜುನಾಥ್ ಪೋಷಕರನ್ನು ಹಾಗೂ ಪವರ್ ಲಿಫ್ಟರ್ ಪಿ.ಮಂಜುನಾಥ್ ಅರನ್ನು ಸಮಿತಿ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು. ದಾವಣಗೆರೆಯ ಸಪ್ತಸ್ವರ ಸಾಂಸ್ಕತಿಕ ತಂಡದ ಮಹಿಳೆಯರು ಕನಕ ಕೀರ್ತಿನೆಗಳನ್ನು ಸುಮಧುರವಾಗಿ ಹಾಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link