ಬೆಂಗಳೂರು
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೆಗೌಡ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಡೆಗೆ ವಿಧಾನ ಪರಿಷತ್ತಿನ ಕೆಲ ಜೆಡಿಎಸ್ ಸದಸ್ಯರು ಅಸಮಾಧಾನಗೊಂಡಿದ್ದಾರೆ. ಮೇಲ್ಮನೆಯಲ್ಲಿ ಪಕ್ಷದ ಸದಸ್ಯರನ್ನು ಪರಿಗಣಿಸುತ್ತಿಲ್ಲ. ಸೂಕ್ತ ಸ್ಥಾನಮಾನ ಕೊಡುತ್ತಿಲ್ಲ. ಸ್ವಂತ ಲಾಭಕ್ಕಾಗಿ ಪಕ್ಷದಲ್ಲಿ ದೇವೆಗೌಡ ಮತ್ತು ಕುಮಾರಸ್ವಾಮಿ ದ್ವಿಮುಖ ನೀತಿ ಅನುಸರಿಸುವ ಮೂಲಕ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್ ಬೇಡಿಕೆ ಇಡದಿದ್ದರೂ ಎಚ್.ಡಿ.ದೇವೆಗೌಡ, ಸಭಾಪತಿ ಸ್ಥಾನವನ್ನು ತಪ್ಪಿಸಿ ಅನ್ಯಾಯ ಮಾಡಿದ್ದಾರೆ ಎಂದು ಮೇಲ್ಮನೆ ಹಿರಿಯ ಸದಸ್ಯ ಬಸವರಾಜಹೊರಟ್ಟಿ ಆಪ್ತರಲ್ಲಿ ಅಸಮಾಧಾನ ತೋಡಿಕೊಂಡಿದ್ದಾರೆ ಎನ್ನಲಾಗಿದೆ.
ವಿಧಾನ ಪರಿಷತ್ತಿನಲ್ಲಿ ಉಪಸಭಾಪತಿ ಮತ್ತು ಮುಖ್ಯಸಚೇತಕ ಎರಡೂ ಸ್ಥಾನವನ್ನು ತಮ್ಮ ಆಪ್ತರಿಗೆ ಕೊಡಲು ಸಭಾಪತಿ ಸ್ಥಾನವನ್ನು ಅವರಾಗಿಯೇ ಕಾಂಗ್ರೆಸ್ಸಿಗೆ ಬಿಟ್ಟುಕೊಟ್ಟಿದ್ದು, ನಂತರ ಕಾಂಗ್ರೆಸ್ ಮೇಲೆ ಆಪಾದನೆಯನ್ನು ಹೊರಿಸುವ ಪ್ರಯತ್ನವನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾಡಿದ್ದಾರೆ ಎಂದು ಉಪಸಭಾಪತಿ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದ ಶ್ರೀಕಂಠೇಗೌಡ ಮತ್ತು ಅಪ್ಪಾಜಿಗೌಡ ಜೆಡಿಎಸ್ ವರಿಷ್ಠರ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.
ಜೆಡಿಎಸ್ ವರಿಷ್ಠ ಎಚ್.ಡಿ.ದೇವೆಗೌಡರು ಮುಖ್ಯಸಚೇತಕ ಸ್ಥಾನಕ್ಕೆ ತಮ್ಮ ಹೆಸರನ್ನು ಪ್ರಸ್ತಾಪಿಸಿ, ಅಂತಿಮ ನಿರ್ಣಯ ಕುಮಾರಸ್ವಾಮಿಯದ್ದು ಎಂದು ಹಾರಿಕೆಯ ಉತ್ತರ ನೀಡಿದ್ದಾರೆ. ಕುಮಾರಸ್ವಾಮಿ ತಮಗೆ ಮುಖ್ಯಸಚೇತಕರಾಗಲು ಒಪ್ಪಿಗೆ ಕೊಟ್ಟಿಲ್ಲ ಎಂದು ಜೆಡಿಎಸ್ ಸದಸ್ಯ ಟಿ.ಎ. ಶರವಣ, ತಮ್ಮ ಆತ್ಮೀಯರ ಬಳಿ ಅಸಮಾಧಾನ ಹೊರಹಾಕಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ