ಚಿತ್ರದುರ್ಗ:
ಪ್ರವಾದಿ ಮಹಮದ್ ಪೈಗಂಬರ್ರವರು ನೀಡಿರುವ ಸಂದೇಶದಂತೆ ಯಾವುದೇ ಜಾತಿ ಭೇದವಿಲ್ಲದೆ ಎಲ್ಲರೂ ಶಾಂತಿಯಿಂದ ಬಾಳಬೇಕಾಗಿದೆ ಎಂದು ಕಬೀರಾನಂದಾಶ್ರಮದ ಶಿವಲಿಂಗಾನಂದಮಹಾಸ್ವಾಮಿಗಳು ಹೇಳಿದರು.
ಜಿಲ್ಲಾ ಜಟಕಾಗಾಡಿ ಮಾಲೀಕರ ಮತ್ತು ಚಾಲಕರ ಕ್ಷೇಮಾಭಿವೃದ್ದಿ ಸಂಘ, ಎತ್ತಿನಗಾಡಿ ಮಾಲೀಕರ ಮತ್ತು ಚಾಲಕರ ಸಂಘ, ಗುಜರಿ ಯುವಕರ ಸಂಘದಿಂದ ಸಂತೇಹೊಂಡದ ಸಮೀಪವಿರುವ ಜಟಕಾಗಾಡಿ ಸ್ಟ್ಯಾಂಡ್ನಲ್ಲಿ ಬುಧವಾರ ಆಚರಿಸಲಾದ ಈದ್ಮಿಲಾದ್ನ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಯಾವುದೆ ಧರ್ಮವಾಗಲಿ, ಹುಟ್ಟು ಬೆಳವಣಿಗೆ ಒಂದೇ. ಆದರೆ ಇವೆರಡರ ನಡುವೆ ಭಿನ್ನವಾಗಿರುವ ಮನಸ್ಸುಳಿಗೆ ಬೆಸುಗೆ ಹಾಕುವ ಕೆಲಸವಾಗಬೇಕು. ಪ್ರಕೃತಿಯಲ್ಲಿ ಅನ್ನ, ನೀರು, ಗಾಳಿ, ಬೆಳಕು ಒಂದೆ. ಮನಸ್ಸು ಹೇಗೆ ಬೇರೆಯಾಗುತ್ತದೆ. ಹಾಗಾಗಿ ಪ್ರಕೃತಿ ಜೊತೆ ಬೆರೆತು ಎಲ್ಲರೂ ಸಹೋದರರಂತೆ ಬದುಕಬೇಕಿದೆ ಎಂದು ತಿಳಿಸಿದರು.
ಪೈಗಂಬರ್, ಋಷಿಮುನಿಗಳು, ಶರಣರು, ದಾರ್ಶನಿಕರು ಎಲ್ಲರೂ ಜಗತ್ತಿಗೆ ಶಾಂತಿಯ ಸಂದೇಶ ನೀಡಿದ್ದಾರೆ. ದ್ವೇಷ, ಅಸೂಯೇ ನಿರ್ಮೂಲನೆಯಾಗಬೇಕು. ಮತ್ತೊಬ್ಬರಿಗೆ ನೋವುಂಟುಮಾಡುವುದು ಯಾರಿಗೂ ಇಷ್ಟವಿಲ್ಲ. ಮಾನಸಿಕ ಚಂಚಲತೆ, ಹೆಚ್ಚಾದ ಬಯಕೆ, ಅತಿಯಾಸೆಯಿಂದ ಕೆಲವೊಮ್ಮೆ ದುಃಖಕ್ಕೆ ಕಾರಣವಾಗಬಹುದು. ಇದನ್ನರಿತು ಇತಿಮಿತಿಯಿಂದ ಜೀವಿಸಬೇಕು ಎಂದರು.
ಚಿತ್ರದುರ್ಗ ಶಾಂತಿಗೆ ಹೆಸರುವಾಸಿಯಾದುದು. ಎಲ್ಲರೂ ಒಂದಾಗಿ ಸಮಪ್ರಮಾಣದಲ್ಲಿ ಒಟ್ಟಾಗಿ ಬದುಕೋಣ ಎಂದು ಈದ್ಮಿಲಾದ್ನಲ್ಲಿ ಹಾರೈಸಿದರು.
ಛಲವಾದಿ ಗುರುಪೀಠದ ಬಸವನಾಗಿದೇವಸ್ವಾಮಿ ಮಾತನಾಡಿ ಪೈಗಂಬರ್ರವರ ಸಂದೇಶದಂತೆ ಶಾಂತಿ, ಸಂಯಮ, ನಿಸ್ವಾರ್ಥ, ಪ್ರಾಮಾಣಿಕತೆಯಿಂದ ಪ್ರತಿಯೊಬ್ಬರು ಬದುಕಿದಾಗ ಮಾತ್ರ ಆರೋಗ್ಯ, ಐಶ್ವರ್ಯ ಜಾಸ್ತಿಯಾಗುತ್ತದೆ. ನಿರಾಕಾರವಾದ ಪರಮಾತ್ಮನನ್ನು ಎಲ್ಲಿಯೂ ಹುಡುಕುವುದು ಬೇಡ. ನಮ್ಮ ನಿಮ್ಮಲ್ಲಿಯೇ ಪರಮಾತ್ಮನನ್ನು ಕಾಣಬಹುದು ಎಂದು ಹೇಳಿದರು.ನಗರಸಭೆ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಮಹಮದ್ ಅಹಮದ್ ಪಾಷ ಮಾತನಾಡಿ ಇಸ್ಲಾಂ ಧಮರ್ದಲ್ಲಿ ಐದು ವೇಳೆ ನಮಾಜ್, ಜಕಾತ್, ಪಿತ್ರಾ, ಹಜ್ ಯಾತ್ರೆ ಮಾಡಬೇಕೆಂಬ ನಿಯಮವಿದೆ. ಇಷ್ಟೇ ಪಾಲನೆ ಮಾಡಿದರೆ ಸಾಲದು ಬೇರೆಯವರ ಪ್ರೀತಿ ವಿಶ್ವಾಸವನ್ನು ಗಳಿಸಿಕೊಂಡು ಎಲ್ಲರೊಂದಿಗೆ ಬೆರೆತು ಬಾಳುವುದನ್ನು ಮುಸ್ಲಿಂ ಜನಾಂಗ ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಎಲ್ಲಾ ಧರ್ಮ ಬಯಸುವುದು ಶಾಂತಿಯನ್ನೇ. ಪೈಗಂಬರ್ರವರು ಜಗತ್ತಿಗೆ ಶಾಂತಿಯ ಸಂದೇಶವನ್ನು ಸಾರಿದ್ದಾರೆ. ಸಮಾಜ ಸುಧಾರಣೆಗಾಗಿ ಮುಡುಪಾಗಿದ್ದ ಪೈಗಂಬರ್ರವರ ಆಶಯದಂತೆ ದ್ವೇಷ, ಅಸೂಯೇ, ಈರ್ಶೆ, ಹೊಟ್ಟೆಕಿಚ್ಚನ್ನು ಮನುಷ್ಯ ಮೊದಲು ಬಿಡಬೇಕು ಎಂದು ತಿಳಿಸಿದರು.
ಈದ್ಮಿಲಾದ್ ಆಚರಣೆಯ ಅಧ್ಯಕ್ಷತೆ ವಹಿಸಿದ್ದ ಸರ್ಖಾಜಿ ಸೈಯದ್ ಶಂಷುದ್ದೀನ್ ಮಾತನಾಡಿ ಪೈಗಂಬರ್ರವರು ಜನಿಸುವ ಮುನ್ನ ಅನೇಕ ಕ್ರೌರ್ಯ, ಹಿಂಸೆ, ಅನಾಚಾರಗಳು ನಡೆಯುತ್ತಿದ್ದವು. ಅವರ ಜನನದ ನಂತರ ಸಮಾಜ ಸುಧಾರಣೆಯತ್ತ ಸಾಗಿತು. ಶಾಂತಿಯ ಸಂದೇಶ ಸಾರಿದ ಪೈಗಂಬರ್ರವರ ಆಶಯದಂತೆ ಯಾರಿಗೆ ನೋವು. ಕಷ್ಟ ಕೊಡದೆ ಎಲ್ಲರೂ ಸಮಾನರಾಗಿ ಬದುಕಿದಾಗ ಮಾತ್ರ ಈದ್ಮಿಲಾದ್ ಆಚರಣೆಗೆ ನಿಜವಾದ ಅರ್ಥ ಬರುತ್ತದೆ ಎಂದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಎಂ.ಕೆ.ತಾಜ್ಪೀರ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಸೈಫುಲ್ಲಾ, ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ರಾಜ್ಯಾಧ್ಯಕ್ಷ ಟಿಪ್ಪುಖಾಸಿಂಆಲಿ, ನ್ಯಾಯವಾದಿ ಬಿ.ಕೆ.ರಹಮತ್ವುಲ್ಲಾ, ವಂದನ ಫಾದರ್ ಪಾಲ್ ಪ್ರವೀಣ್, ಬಾಳೆಕಾಯಿ ಶ್ರೀನಿವಾಸ್ ವೇದಿಕೆಯಲ್ಲಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
