ತುರುವೇಕೆರೆ
ಪಟ್ಟಣದಲ್ಲಿ ಹಾದು ಹೋಗಿರುವ ಜೀವರ್ಗಿ – ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿಗೆ ಬೈಪಾಸ್ ನಿರ್ಮಿಸದಂತೆ ನೂರಾರು ಕೃಷಿಕರು ರಾಷ್ಟ್ರೀಯ ಹೆದ್ದಾರಿ ವಿಶೇಷ ಭೂಸ್ವಾದೀನ ಅಧಿಕಾರಿ ರಂಗನಾಥ್ ಹಾಗೂ ಶಾಸಕ ಮಸಾಲ ಜಯರಾಮ್ರನ್ನು ಒತ್ತಾಯಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಹೆದ್ದಾರಿಯ ಪಟ್ಟಣದ ಬೈಪಾಸ್ ಹಾದು ಹೋಗುವ ಜಮೀನಿನ ರೈತರ ಸಭೆಯಲ್ಲಿ ವಿಶೇಷ ಭೂಸ್ವಾದೀನ ಅಧಿಕಾರಿ ರಂಗನಾಥ್ಗೆ ಅರಳಿಕೆರೆ, ಬಾಣಸಂದ್ರ ಗ್ರಾಮದ ನೂರಾರು ರೈತರು ಒಕ್ಕೊರಲಿನಿಂದ ಬೈಪಾಸ್ ಮಾಡದಂತೆ ಮನವಿ ಸಲ್ಲಿಸಿದರು.
ರೈತ ಹಿತ ರಕ್ಷಣೆ ವೇದಿಕೆಯ ಅರಳಿಕೆರೆ ಶಿವಯ್ಯ ಮಾತನಾಡಿ, ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬೈಪಾಸ್ ನಿರ್ಮಾಣದ ಬಗ್ಗೆ ರೈತರ ಜಮೀನಿನ ಸರ್ವೆ ನಂಬರ್ ಸಹಿತ ಅಧಿಸೂಚನೆ ಹೊರಡಿಸಿದ್ದು ನೂರಾರು ರೈತರಿಗೆ ನೋಟಿಸ್ ಸಹ ನೀಡಿರುವುದರಿಂದ ರೈತರ ಆತಂಕಕ್ಕೆ ಕಾರಣವಾಗಿದೆ. ಬೈಪಾಸ್ ನಿರ್ಮಾಣವಾಗುವ ಜಮೀನು ಫಲವತ್ತಾದ ಕೃಷಿ ಜಮೀನಾಗಿದ್ದು ಅಡಿಕೆ, ತೆಂಗು, ಬಾಳೆ ಬೆಳೆ ಇಟ್ಟು ರೈತರು ಜೀವನ ಸಾಗಿಸುತ್ತಿದ್ದಾರೆ. ಈ ಬೈಪಾಸ್ ನಿರ್ಮಾಣದಿಂದ ಕೃಷಿಕರು ವ್ಯವಸಾಯದ ಜಮೀನು ಕಳೆದುಕೊಂಡು ರೈತ ಕುಟುಂಬಗಳು ಬೀದಿಗೆ ಬೀಳುವಂತಾಗಿದೆ. ಆದ್ದರಿಂದ ಬೈಪಾಸ್ ನಿರ್ಮಾಣ ಕೈ ಬಿಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ವಿಶೇಷ ಭೂಸ್ವಾದೀನ ಅಧಿಕಾರಿ ರಂಗನಾಥ್ ಮಾತನಾಡಿ ಬೈಪಾಸ್ ನಿರ್ಮಾಣದ ಅಂಗವಾಗಿ ಈಗಾಗಲೇ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ ಅಷ್ಟೆ. ಇದೇ ಫೈನಲ್ ಅಲ್ಲ. ರೈತರು ಯಾವುದೇ ಅಹವಾಲುಗಳಿದ್ದರೂ ಸಲ್ಲಿಸಲು ಸೂಚಿಸಲಾಗಿದೆ. ಈಗಾಗಲೇ 155 ರೈತರಿಗೆ ನೋಟಿಸ್ ನೀಡಲಾಗಿದ್ದು, ಅಂತಹ ರೈತರು ತಕರಾರುಗಳನ್ನು ಸಲ್ಲಿಸಬಹುದಾಗಿದೆ. ತಾಲ್ಲೂಕಿನ ಅರಳಿಕೆರೆ ಹಾಗೂ ಬಾಣಸಂದ್ರ ಭಾಗದ ರೈತರು ಬೈಪಾಸ್ ನಿರ್ಮಿಸದಂತೆ ಮನವಿ ಮಾಡಿದ್ದಾರೆ. ಸರ್ಕಾರ ನಿರ್ದೇಶನದ ಮೇರೆಗೆ ನಾವುಗಳು ಕ್ರಮ ಕೈಗೊಳ್ಳಬಹುದಾಗಿದ್ದು , ರೈತರ ಮನವಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.
ಶಾಸಕ ಮಸಾಲಜಯರಾಮ್ ಮಾತನಾಡಿ, ಬೈಪಾಸ್ ನಿರ್ಮಾಣದಿಂದ ಸುಮಾರು ನೂರಾರು ಎಕರೆ ಫಲವತ್ತಾದ ಕೃಷಿ ಭೂಮಿ ಸರ್ವ ನಾಶವಾಗಲಿದೆ. ಇದರಿಂದ ನೂರಾರು ರೈತ ಕುಟುಂಬ ಬೀದಿಗೆ ಬೀಳುವಂತಾಗಲಿದೆ. ಪಟ್ಟಣ ಹಾಗೂ ಬಾಣಸಂದ್ರದಲ್ಲಿ ಹೆದ್ದಾರಿ ಪ್ರಾಧಿಕಾರ ಅವೈಜ್ಞಾನಿಕವಾಗಿ ಸರ್ವೆ ಮಾಡಲಾಗಿದೆ. ರೈತರ ಹಾಗೂ ಪಟ್ಟಣದ ಹಿತದೃಷ್ಟಿಯಿಂದ ಬೈಪಾಸ್ ನಿರ್ಮಾಣ ಕೈ ಬಿಟ್ಟು ಪಟ್ಟಣದಲ್ಲಿಯೇ ರಸ್ತೆ ನಿರ್ಮಿಸಬೇಕು. ಯಾವುದೇ ಕಾರಣಕ್ಕೂ ರೈತರನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ ಎಂದರಲ್ಲದೆ, ನಾನು ರೈತರ ಪರವಾಗಿ ಹೋರಾಡುವುದಾಗಿ ರೈತರಿಗೆ ಆಶ್ವಾಸನೆ ನೀಡಿದರು. ಈ ಬಗ್ಗೆ ಹೆದ್ದಾರಿ ಕೇಂದ್ರ ಸಚಿವರು, ರಾಜ್ಯ ಸಚಿವರು ಭೇಟಿ ಮಾಡಿ ಮನವಿ ಮಾಡಲಿದ್ದು, ಮುಂಬರುವ ವಿಧಾನಸಭೆಯ ಕಲಾಪದಲ್ಲಿ ಈ ವಿಷಯ ಚರ್ಚಿಸಲಾಗುವುದು ಎಂದರು.
ಸಭೆಯಲ್ಲಿ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಲಚ್ಚಿಬಾಬು, ಸಿಪಿಐ ಮಹಮದ್ ಸಲಿಂ, ರೈತ ಮುಖಂಡರಾದ ಶಿವನಂಜಪ್ಪ, ಶಿವಲಿಂಗಪ್ಪ, ಬೊಮ್ಮಲಿಂಗಯ್ಯ, ನಿಜಾನಂದಮೂರ್ತಿ, ಚಂದ್ರಯ್ಯ, ತಿಮ್ಮಪ್ಪ, ಪ್ರದೀಪ್, ಕಿರಣ್, ಸಿದ್ದಲಿಂಗಪ್ಪ, ರಾಜಣ್ಣ, ಬಸವರಾಜು, ವಸಂತ್ಕುಮಾರ್ ಸೇರಿದಂತೆ ನೂರಾರು ಆಜು ಬಾಜು ಗ್ರಾಮದ ರೈತರು ಪಾಲ್ಗೊಂಡಿದ್ದರು.
