ದಾವಣಗೆರೆ :
ನಾಡಹಬ್ಬ ವಿಜಯ ದಶಮಿಯ ಪ್ರಯುಕ್ತ ಸಾರ್ವಜನಿಕ ವಿಜಯದಶಮಿ ಮಹೋತ್ಸವ ಸಮಿತಿ ಹಾಗೂ ವಿಶ್ವ ಹಿಂದು ಪರಿಷತ್ ನೇತೃತ್ವದಲ್ಲಿ ಶುಕ್ರವಾರ ದೇವನಗರಿಯಲ್ಲಿ ಬೃಹತ್ ಶೋಭಾಯಾತ್ರೆ ನಡೆಯಿತು.
ನಗರದ ಬೇತೂರು ರಸ್ತೆಯಲ್ಲಿರುವ ಶ್ರೀವೆಂಕಟೇಶ್ವರ ವೃತ್ತದಲ್ಲಿ ಜಡೇಸಿದ್ದೇಶ್ವರ ಶಿವಯೋಗಿಶ್ವರ ಮಠದ ಶ್ರೀಶಿವಾನಂದ ಸ್ವಾಮೀಜಿ ಹಾಗೂ ಸಂಸದ ಜಿ.ಎಂ.ಸಿದ್ದೇಶ್ವರ ಅವರುಗಳು ದುರ್ಗಾದೇವಿಗೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿ ಶೋಭಾಯಾತ್ರೆಗೆ ಚಾಲನೆ ನೀಡಿದರು.
ವೆಂಕಟೇಶ್ವರ ವೃತ್ತದಿಂದ ಆರಂಭವಾದ ಶೋಭಾಯಾತ್ರೆ ಅರಳಿಮರ ವೃತ್ತ, ಬೊಂಬು ಬಜಾರ್ ರಸ್ತೆ, ಶಾಂತಿ ಶಾಂತಿ ಟಾಕೀಸ್ ಎದುರಿನ ಗಣೇಶ ದೇವಸ್ಥಾನ, ಎಕ್ಸ್ ಮುನ್ಸಿಪಲ್ ಕಾಲೇಜು, ಕೆ.ಆರ್ ಮಾರುಕಟ್ಟೆ, ಬೆಳ್ಳೂಡಿಗಲ್ಲಿ ಮುಖಾಂತರ ಕಾಳಿಕಾದೇವಿ ರಸ್ತೆಯ ಮೂಲಕ ನಗರದೇವತೆ ಶ್ರೀದುರ್ಗಾಂಬಿಕಾ ದೇವಸ್ಥಾನ, ಹೊಂಡದ ವೃತ್ತ, ಬಾರ್ಲೈನ್ ರಸ್ತೆ, ರೇಣುಕಾ ಮಂದಿರ ಮುಖಾಂತರ ಬೀರಲಿಂಗೇಶ್ವರ ಮೈದಾನ ತಲು ಮುಕ್ತಾಯವಾಯಿತು. ಬಳಿಕ ಇದೇ ಮೈದಾನದಲ್ಲಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರಿಂದ ಅಂಬುಛೇದನ ನೆರವೇರಿತು.
ರಾಮ ಮಂದಿರ ನಿರ್ಮಾಣದ ಸ್ತಬ್ಧ ಚಿತ್ರ, ಗೋಮಾತೆ ರಕ್ಷಿಸಿ-ಹಿಂದುತ್ವ ಉಳಿಸಿ ಎಂಬ ಘೋಷಣೆ ಯೊಂದಿಗೆ ಗೋಮಾತೆ ಚಿತ್ರವುಳ್ಳ ಸ್ತಬ್ಧ, ಬುದ್ಧ, ಬಸವ, ಅಂಬೇಡ್ಕರ್, ವಾಲ್ಮೀಕಿ, ಕನಕದಾಸ, ಭಗತ್ಸಿಂಗ್, ಸುಭಾಷ್ ಚಂದ್ರಬೋಸ್, ಗುರೂಜಿ ಗೋಲವಾಲ್ಕರ್, ಕೇಶವಬಲಿರಾಮ್ದ ಹೆಡಗೆವಾರ್, ಶಿವಾಜಿ ಮಹಾರಾಜ, ಗಡಿ ಕಾಯುತ್ತಿರುವ ಮತ್ತು ಯುದ್ಧದಲ್ಲಿ ಸೆಣಸಾಡುತ್ತಿರುವ ಯೋಧರ, ಭಾರತಾಂಬೆ, ಮೈಸೂರು ದಸರಾದ ಆಯ್ದ ಚಿತ್ರಗಳು, ಅಬ್ದುಲ್ ಕಲಾಂ, ನಗರದೇವತೆ ದುರ್ಗಾಂಬಿಕ ದೇವಿಯ ಭಾವಚಿತ್ರಗಳು ಮೆರವಣಿಗೆಗೆ ವಿಶೇಷ ಆಕರ್ಷಣೆ ನೀಡಿದ್ದವು.
ನೂರಾರು ಕಲಾವಿದರನ್ನು ಹೊಂದಿದ್ದ ಮಹಾರಾಷ್ಟ್ರದ ಡೋಲ್ತಾಷ್ ಕಲಾ ತಂಡ ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿತ್ತು. ಮಹಿಳಾ ಹಾಗೂ ಪುರುಷ ಡೊಳ್ಳು ತಂಡ ಹಾಗೂ ನಾಸಿಕ್ ಡೋಲ್ನಿಂದ ಹೊರ ಹೊಮ್ಮುತ್ತಿದ್ದ ಸದ್ದು ಯುವ ಸಮೂಹ ಹುಚ್ಚೆದ್ದು ಕುಣಿಯುವಂತೆ ಪ್ರೇರೇಪಿಸುತ್ತಿದ್ದವು. ಸಮಾಳ, ನಂದಿಕೋಲು, ವೀರಗಾಸೆ, ಗೊರವರ ಕುಣಿತ, ಕೊಂಬು ಕಹಳೆ ಸೇರಿದಂತೆ ಇತರೆ ಕಲಾತಂಡಗಳು ನೋಡುಗರ ಗಮನ ಸೆಳೆದವು. ಇನ್ನೂ ಡಿಜೆಯಿಂದ ಹೊರಹೊಮ್ಮುತ್ತಿದ್ದ ವಿವಿಧ ಹಾಡುಗಳಿಗೆ ಯುವಕರು ಭಾವಪರವಶರಾಗಿ ಕುಣಿದು ಕುಪ್ಪಳಿಸಿದರು. ಅಲ್ಲದೆ, ಪೂರ್ಣಕುಂಭ ಹೊತ್ತ ಮಹಿಳೆಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಶೋಭಾಯಾತ್ರೆಯ ವೈಭವಪೂರಕ ದೃಶ್ಯಗಳನ್ನು ನೋಡಲು ಮೆರವಣಿಗೆ ಉದ್ದಕ್ಕೂ ಇರುವ ಕಟ್ಟಡಗಳ ಮೇಲೆ ನಿಂತಿದ್ದ ದೃಶ್ಯ ಅಲ್ಲಲ್ಲಿ ಸಾಮಾನ್ಯವಾಗಿತ್ತು.
ಶೋಭಾಯಾತ್ರೆಯ ಹಿನ್ನೆಲೆಯಲ್ಲಿ ನಗರದಾದ್ಯಂತ ಸೂಕ್ತ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ನಗರದ ಸೂಕ್ಷ್ಮ ಹಾಗೂ ಅತೀಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿ ಕ್ಯಾಮೇರಾ ಅಳವಡಿಸಲಾಗಿತ್ತು. ಅಲ್ಲದೆ, ಮೆರವಣಿಯ ದೃಶ್ಯವನ್ನು ಚಿತ್ರೀಕರಿಸಲು ಡ್ರೋನ್ ಕ್ಯಾಮೇರಾವನ್ನು ಪೊಲೀಸ್ ಇಲಾಖೆ ಬಳಸಿಕೊಂಡಿತು.
ಮೆರವಣಿಗೆಯಲ್ಲಿ ಶಾಸಕ ಎಸ್.ಎ.ರವೀಂದ್ರನಾಥ್, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ಎ.ಹೆಚ್.ಶಿವಯೋಗಿಸ್ವಾಮಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತರಾವ್ ಜಾಧವ್, ವಿಜಯದಶಮಿ ಸಮಿತಿಯ ದೇವರಮನಿ ಶಿವಕುಮಾರ್, ಎನ್.ರಾಜಶೇಖರ್, ಕೆ.ಬಿ.ಶಂಕರ್ನಾರಾಯಣ, ಹೆಚ್ ಎಸ್ ನಾಗರಾಜ್, ಎಸ್ ಟಿ ವಿರೇಶ್, ರಾಜನಹಳ್ಳಿ ಶಿವಕುಮಾರ್, ಎಂ ಮನು, ವಿರೇಶ್ ಪೈಲ್ವಾನ್, ಬಿ.ರಮೇಶ್ ನಾಯ್ಕ, ಸಂಕೋಳ್ ಚಂದ್ರಶೇಖರ್, ಸತೀಶ್ ಪೂಜಾರಿ, ಗೋಪಾಲ್, ಗೌತಮ್ ಜೈನ್, ಮಲ್ಲಿಕಾರ್ಜುನ್, ಡಿ.ಕೆ.ಕುಮಾರ್, ಪ್ರಭು ಕಲಬುರ್ಗಿ, ಸೋಗಿ ಶಾಂತಕುಮಾರ್, ಪಿ.ಸಿ.ಶ್ರೀನಿವಾಸ್, ಟಿಂಕರ್ ಮಂಜಣ್ಣ, ಅಜಯ್ಕುಮಾರ್, ಜಯಪ್ರಕಾಶ್ ಅಂಬರ್ಕರ್, ಎಂ.ಜಿ.ಶ್ರೀಕಾಂತ, ಕಲ್ಲೇಶಪ್ಪ ಸೇರಿದಂತೆ ಹಲವರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
