ದಾವಣಗೆರೆ:
ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗದ ಭೂಸ್ವಾಧೀನ ಪ್ರಕ್ರಿಯೆಯನ್ನು ತಕ್ಷಣವೇ ಮುಗಿಸಬೇಕು ಹಾಗೂ ಕೆಲ ರೈಲು ಗಾಡಿಗಳನ್ನು ವಿಸ್ತರಿಸಬೇಕೆಂದು ಒತ್ತಾಯಿಸಿ, ನೈರುತ್ಯ ರೈಲ್ವೆ ವಲಯ ಪ್ರಯಾಣಿಕರ ಸಂಘದ ರೋಹಿತ್ ಎಸ್. ಜೈನ್ ನೈರುತ್ಯ ರೈಲ್ವೆ ವಲಯ ಪ್ರಧಾನ ವ್ಯವಸ್ಥಾಪಕರಿಗೆ ಪತ್ರ ಬರೆದಿದ್ದಾರೆ.
ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗವು ಬೆಂಗಳೂರಿನಿಂದ ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ, ಗದಗ ಮತ್ತು ವಿಜಯಪುರ ಅಂತರವನ್ನು ಸುಮಾರು 65 ಕಿ.ಮೀ.ಯಷ್ಟು ಕಡಿಮೆ ಮಾಡಲಿದೆ. ಆದ್ದರಿಂದ ಈ ಮಾರ್ಗದ ನಿರ್ಮಾಣ ಅತ್ಯವಶ್ಯವಾಗಿದೆ. ಈಗಾಗಲೇ ಈ ಮಾರ್ಗದ ಅಂತಿಮ ಸಮೀಕ್ಷೆ ಪೂರ್ಣಗೊಂಡು ತುಮಕೂರು-ಚಿತ್ರದುರ್ಗ-ದಾವಣಗೆರೆ ಜಿಲ್ಲೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆ
ಆರಂಭವಾಗಿದ್ದು, ಆದಷ್ಟು ಬೇಗನೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿಸಬೇಕೆಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಭೂಸ್ವಾಧೀನ ಪ್ರಕ್ರಿಯೆ ಮುಗಿದರೆ, ನೇರ ರೈಲು ಮಾರ್ಗದ ಕಾಮಗಾರಿಗೆ ವೇಗದಲ್ಲಿ ಚುರುಕು ಮುಟ್ಟಿಸಿ, ಆದಷ್ಟು ಬೇಗನೇ ಮಾರ್ಗವನ್ನು ನಿರ್ಮಾಣಮಾಡಿ ಮುಂದಿನ ದಿನಗಳಲ್ಲಿ ತುಮಕೂರು-ಚಿತ್ರದುರ್ಗ-ದಾವಣಗೆರೆ ಹೊಸ ರೈಲು ಮಾರ್ಗದಲ್ಲಿ ಹೊಸ ರೈಲು ಓಡಿಸುವ ಮೂಲಕ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಅಲ್ಲದೆ, ಬೆಂಗಳೂರಿನಿಂದ ಚಿತ್ರದುರ್ಗಕ್ಕೆ 110 ಕಿ.ಮೀ. ಅಂತರ ಕಡಿಮೆಯಾಗಲಿದೆ.
ಸಿರಾ ಮತ್ತು ಹಿರಿಯೂರು ತಾಲೂಕುಗಳು ರೈಲು ಸಂಪರ್ಕ ಪಡೆಯಲಿವೆ. ಬೆಂಗಳೂರು-ಅರಸೀಕೆರೆ-ಶಿವಮೊಗ್ಗ ಸಾಲಿನಲ್ಲಿ ರೈಲು ಸಂಚಾರ ಶೇ.50 ರಷ್ಟು ಕಡಿಮೆಯಾಗಲಿದೆ. ಬೆಂಗಳೂರಿನಿಂದ, ಬೆಳಗಾವಿ ಮತ್ತು ಬಿಜಾಪುರ ನಡುವಿನಅಸ್ತಿತ್ವದಲ್ಲಿರುವ ಮಾರ್ಗಗಳಲ್ಲಿ ಸಂಚಾರ ಕನಿಷ್ಠ 35% ಕಡಿಮೆಯಾಗುತ್ತದೆ.
ಪರಿಣಾಮವಾಗಿ ಪ್ರಸ್ತುತ ಹರಿಹರ-ಬೀರೂರು-ಅರಸೀಕೆರೆ ಸಾಲಿನಲ್ಲಿ ದಟ್ಟಣೆ ಕಡಿಮೆಯಾಗುವುದರಿ0ದ ಹೆಚ್ಚಿನ ಸರಕು ಸಾಗಣೆ ಮಾಡಬಹುದು. ಪ್ರಯಾಣದ ದೂರ ಕಡಿಮೆಯಾಗುವುದರಿಂದ, ಇಂಧನ ಮತ್ತು ಸಾಕಷ್ಟು ಪ್ರಯಾಣ ಸಮಯ ಉಳಿಸಬಹುದಾಗಿದೆ. ಆದ್ದರಿಂದ ತಕ್ಷಣವೇ ಭೂ ಸ್ವಾಧೀನ ಪ್ರಕ್ರಿಯೆ ಮುಕ್ತಾಯಗೊಳಿಸಬೇಕೆಂದು ಅವರು ಪತ್ರದಲ್ಲಿ ಆಗ್ರಹಿಸಿದ್ದಾರೆ.
ಹರಿಹರ-ಶಿವಮೊಗ್ಗ ರೈಲು ಮಾರ್ಗ ಭೂಸ್ವಾಧೀನ ಪ್ರಕ್ರಿಯೆ ಬೇಗ ಮುಗಿಸಿಬೇಕು. ಗದಗ-ಹರಪನಹಳ್ಳಿ ಸರ್ವೇ ಕಾರ್ಯ ಮುಗಿಸಿ ಆದಷ್ಟು ಬೇಗ ಕಾಮಗಾರಿ ಪ್ರಾರಂಭಿಸಬೇಕು. ಕರ್ನಾಟಕ ಸಂಪರ್ಕ ಕ್ರಾಂತಿ ರೈಲನ್ನು ಹಾವೇರಿಯಲ್ಲಿ ನಿಲುಗಡೆ ಗೊಳಿಸಬೇಕು.
ಬೆಂಗಳೂರು – ಗಾಂಧಿದಂ ರೈಲು ಗಾಡಿಯನ್ನು ಭುಜ್ ವರೆಗೆ ವಿಸ್ತರಿಸಬೇಕು ಹಾಗೂ ಅದನ್ನು ವಾರಕೆ 3 ಬಾರಿ ಓಡಿಸಬೇಕು. ಹುಬ್ಬಳಿ-ಕೊಚುವೆಲಿ ರೈಲನ್ನು ವಾರಕ್ಕೆ 3 ಬಾರಿ ಓಡಿಸಬೇಕು. ಬೆಂಗಳುರಿನಿಂದ -ವೈಷ್ಣೋದೇವಿ ( ಕತ್ರ ) ಹುಬ್ಬಳ್ಳಿ ಮಾರ್ಗವಾಗಿ ಒಂದು ಜನ ಸಾಧಾರಣ ರೈಲು ಗಾಡಿ ಓಡಿಸಬೇಕು. ಬೆಂಗಳುರಿನಿಂದ – ಮುಂಬೈ ( ದಾವಣಗೆರೆ , ಹುಬ್ಬಳ್ಳಿ ಮಾರ್ಗವಾಗಿ ) ಒಂದು ಹೊಸ ರೈಲು ಓಡಿಸಬೇಕು , ಯೆಶ್ವಂತಪುರ – ಚಂಡಿಗಡ ರೈಲನು ಜಮ್ಮು ತವಿ ಅಥವಾ ವೈಷ್ಣೋದೇವಿ ( ಕತ್ರ ) ರವರೆಗೆ ವಿಸ್ತರಿಸಬೇಕು ಹಾಗು ಬೆಂಗಳೂರು – ಜೋಧ್ಪುರ್ ರೈಲು ಗಾಡಿಯನು ವಾರಕ್ಕೆ 3 ಬಾರಿ ಓಡಿಸಬೇಕು. ದಾವಣಗೆರೆ ರೈಲು ನಿಲ್ದಾಣದ ಅಭಿವೃದ್ಧಿ ಕಡೆ ರೈಲ್ವೆ ಅಧಿಕಾರಿಗಳು ಗಮನ ಹರಿಸಬೇಕು ಹಾಗು ರೈಲು ನಿಲ್ದಾಣದಲ್ಲಿ ರೈಲುಗಾಡಿಗಳ ನಿಲ್ದಾಣದ ಸಮಯ ಹೆಚಿಸಬೇಕೆಂದು ಜೈನ್ ನೈರುತ್ಯ ರೈಲ್ವೆ ವಲಯ ಪ್ರಧಾನ ವ್ಯವಸ್ಥಾಪಕರಿಗೆ ಬರೆದಿರುವ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








