ತಿಪಟೂರು
ರಾಜ್ಯದ 30 ತಾಲ್ಲೂಕುಗಳ ಜೊತೆಗೆ 31ನೇ ಜಿಲ್ಲೆಯಾಗಲು ಹಾತೊರೆಯುತ್ತಿರುವ, ಕಲ್ಪತರು ನಾಡು ತಿಪಟೂರು. ಆದರೆ ಇಲ್ಲಿನ ಖಾಸಗಿ ನಿಲ್ದಾಣವು ಮುಂದುವರೆಯುತ್ತಿರುವ ನಗರಕ್ಕೆ ಗುಲಗಂಜಿಯ ಕಪ್ಪಿನಂತೆ ಕಾಣುತ್ತಿದ್ದು, ಸಾಲದೆ ಇದಕ್ಕೆ ಬಸವೇಶ್ವರ ಬಸ್ ನಿಲ್ದಾಣವೆಂದು ಹೆಸರನ್ನಿಟ್ಟಿದ್ದು ಬಸವೇಶ್ವರರ ಹೆಸರಿಗೆ ಅವಮಾನಿಸಿದಂತಾಗಿದೆ.
ನಗರಸಭೆಗೆ ಕೂಗಳತೆಯ ದೂರದಲ್ಲಿದ್ದ ಖಾಸಗಿ ಬಸ್ನಿಲ್ದಾಣವನ್ನು ರಾಷ್ಟ್ರೀಯ ಹೆದ್ದಾರಿ 206ರ ಪಕ್ಕದಲ್ಲಿದ್ದು ಇತ್ತೀಚೆಗೆ ಕರ್ನಾಟಕ ರಾಜ್ಯ ರಸ್ತೆಸಾರಿಗೆ ಬಸ್ ನಿಲ್ದಾಣದ ಪಕ್ಕಕ್ಕೆ ಸ್ಥಳಾಂತರ ಗೊಂಡಿದೆ. ಸಾರ್ವಜನಿಕರ ಲಕ್ಷಾಂತರ ರೂಗಳನ್ನು ವ್ಯಯಿಸಿ ಹೊಸ ಖಾಸಗಿ ನಿಲ್ದಾಣವನ್ನು ನಿರ್ಮಿಸಿ ಅಲ್ಲಿಗೆ ಸ್ಥಳಾಂತರಿಸಿದರು.
ಇದನ್ನು ಕಂಡ ಪ್ರಯಾಣಿಕರ ಸಂತೋಷವು ಮಾಯವಾಗುವುದಕ್ಕೆ ಮೊದಲೇ ಪೂರ್ವಾಗ್ರಹ ಪೀಡೆಯಂತೆ ಆಕ್ರಮಿಸಿದ್ದೆ ಮೂಲಭೂತ ಸೌಕರ್ಯವೆಂಬ ಪೆಡಂಭೂತ. ನಗರಸಭೆಗೆ ಆದಾಯಬರುವ ಮೂಲವಾಗಬೇಕಾಗಿದ್ದ ಬಸ್ನಿಲ್ದಾಣವು ಇಂದು ಕಸದ ಮತ್ತು ಮಣ್ಣುಗುಡ್ಡೆಗಳ ರಾಶಿಯಿಂದ ತುಂಬಿದ್ದು ಬಸ್ಗಳು ಬಸ್ನಿಲ್ದಾಣದ ಒಳಗೆ ಹೋಗಲು ಸಾಧ್ಯವಾಗದೆ ರಸ್ತೆಯಲ್ಲೇ ನಿಲ್ಲಿಸುವ ಸ್ಥಿತಿ ನಿರ್ಮಾಣವಾಗಿದೆ. ಇಲ್ಲಿನ ಅಂಗಡಿ ಮಳಿಗೆಗಳು ಹರಾಜಾಗಿದೆಯೋ ಇಲ್ಲವೋ ತಿಳಿಯದಂತಾಗಿದೆ.
ಹರಾಜಾಗಿದ್ದರೆ ಇಲ್ಲಿಯವರೆಗೂ ಯಾರು ಸುಮ್ಮನೆ ಬಾಡಿಗೆ ಕಟ್ಟುತ್ತಿರಲಿಲ್ಲ. ಆದರೆ ಇಲ್ಲಿ ಸಾಕಷ್ಟು ಪೆಟ್ಟಿಗೆ ಅಂಗಡಿಗಳಿದ್ದು ಎಲ್ಲದರಲ್ಲೂ ಸ್ವಚ್ಛತೆಮಾಯವಾಗಿದ್ದರು ಮತ್ತು ಬಸ್ನಿಲ್ದಾಣದ ಸುತ್ತಲೂ ಸ್ವಚ್ಛತೆಯೇ ಇಲ್ಲದಂತಾಗಿ ಸಾಂಕ್ರಾಮಿಕ ರೋಗಗಳಿಗೆ ದಾರಿಮಾಡಿಕೊಡುತ್ತಿದ್ದರು ನಗರಸಭೆಯ ಅಧಿಕಾರಿಗಳು ಜಾಣಕುರುಡರಾಗಿದ್ದಾರೆ.
ಇನ್ನೂ ಶೌಚಾಲಯದ ಸ್ಥಿತಿ ಹೇಳತೀರದಾಗಿದ್ದು ನೀರಿನ ವ್ಯವಸ್ಥೆಯಿಲ್ಲದೆ ದುರ್ನಾತಬೀರುತ್ತಿವೆ. ಈ ಬಸ್ ನಿಲ್ದಾಣವು ಇದೇ ರಸ್ತೆಗೆ ಹೊಂದಿಕೊಂಡಿರುವ ಎಂ.ಎಸ್.ಐ.ಎಲ್ ಮದ್ಯದಂಗಡಿ ಇದ್ದು ಇದು ಕುಡುಕರಿಗೆ ವರದಾನವಾಗಿದೆ. ರಾತ್ರಿ ಸಮಯದಲ್ಲಿ ಬಸ್ ನಿಲ್ದಾಣ ಕಟ್ಟಡವು ಅನೈತಿಕ ಚಟುವಟಿಕೆಯತಾಣವಾಗಿದ್ದು ಬಾಟಲ್ಗಳು, ಬೀಡಿ ಸಿಗರೇಟ್ಗಳಿಂದ ತುಂಬಿದೆ.
ಸಂಬಂಧಿಸಿದವರು ಈಗಲಾದರು ನಗರದ ಬಸ್ ನಿಲ್ದಾಣವನ್ನು ವ್ಯವಸ್ಥಿತಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
