ಬೆಂಗಳೂರು:
ಅನರ್ಹ ಶಾಸಕ ಆನಂದ್ ಸಿಂಗ್ ಕಾಂಗ್ರೆಸ್ನಿಂದ ಬಿಜೆಪಿಗೆ ಹೋಗುವ ಮೂಲಕ ಪಕ್ಷಕ್ಕೆ ಮಾತ್ರವಲ್ಲದೆ ಕ್ಷೇತ್ರದ ಜನರಿಗೂ ಮೋಸಮಾಡಿದ್ದಾರೆ. ಪಕ್ಷಾಂತರಿಗಳಿಗೆ ತಕ್ಕ ಉತ್ತರ ನೀಡುವ ಕಾಲ ಬಂದಿದೆ. ಹೀಗಾಗಿ ವಿಜಯನಗರ ಕ್ಷೇತ್ರದ ಜನ ಸ್ವಾಭಿಮಾನ ಎತ್ತಿ ಹಿಡಿದು ಸ್ವಾರ್ಥ ರಾಜಕಾರಣ ಮಾಡುತ್ತಿರುವವರನ್ನು ಮನೆಗೆ ಕಳುಹಿಸಬೇಕು ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದರು.
ನಗರದ ಪರ್ವಾಜ್ ಪ್ಲಾಜಾದ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ಆನಂದಸಿಂಗ್ಗೆ ಕಾಂಗ್ರೆಸ್ನಿಂದ ಯಾವುದೇ ಅನ್ಯಾಯವಾಗಿದ್ದಿಲ್ಲ. ಹೀಗಿದ್ದರೂ ಅವರು ತಮ್ಮ ಸ್ವಾರ್ಥ ಮನೋಭಾವದಿಂದ ಕಾಂಗ್ರೆಸ್ ಬಿಟ್ಟು ಹೋಗಿದ್ದಾರೆ, ಅನವಶ್ಯಕ ಉಪಚುನಾವಣೆಗೆ ಕಾರಣರಾಗಿದ್ದಾರೆ. ಈ ರೀತಿ ಅಧಿಕಾರಕ್ಕೋಸ್ಕರ ಪದೇ ಪದೇ ಪಕ್ಷಾಂತರ ಮಾಡುವ ಪಕ್ಷಾಂತರಿಗಳಿಗೆ ಜನ ಪಾಠ ಕಲಿಸಿ ತಮ್ಮ ಸ್ವಾಭಿಮಾನವನ್ನು ಎತ್ತಿ ಹಿಡಿಯಬೇಕು ಎಂದರು.
ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಹಾಗು ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಒಂದು ಕೆಲಸ ಮಾಡಿಲ್ಲ. ಬರೀ ಟೀಕೆ, ಜಾತಿ, ಧರ್ಮ ಎಂಬಂತಹ ಭಾವನಾತ್ಮಕ ವಿಚಾರಗಳ ಕುರಿತು ಮಾತನಾಡುತ್ತಿದ್ದಾರೆ ಹೊರತು ತಾವೇನು ಕೆಲಸ ಮಾಡಿದ್ದೀವಿ ಅಂತ ಹೇಳುತ್ತಿಲ್ಲ. ರಾಜ್ಯದ ಜನ ಇವರ ದುರಾಡಳಿತಕ್ಕೆ ರೋಸಿ ಹೋಗಿದ್ದಾರೆ. 15 ಕ್ಷೇತ್ರಗಳಲ್ಲಿ ನಮ್ಮ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸಲಿದೆ. ಇಂಥ ಕೆಟ್ಟ ಸರ್ಕಾರ ಇರಬಾರದು. ಭವಿಷ್ಯ ಜನವರಿ ತಿಂಗಳಿನಲ್ಲಿ ಈ ಬಿಜೆಪಿ ಸರಕಾರ ಪತನವಾಗಬಹುದು ಎಂದು ಭವಿಷ್ಯ ನುಡಿದರು.
ಮಾಜಿ ಶಾಸಕ ಸೀರಾಜ್ ಶೇಖ್ ಮಾತನಾಡಿ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನ. 30 ಕ್ಕೆ ನಗರಕ್ಕೆ ಆಗಮಿಸಲಿದ್ದಾರೆ. ಗುಂಡೂರಾವ್ ಅವರನ್ನು ಬೈಕ್ ರ್ಯಾಲಿ ಮೂಲಕ ನಗರಕ್ಕೆ ಬರಮಾಡಿಕೊಳ್ಳಲಾಗುವುದು. ನಗರದಲ್ಲಿ ನಡೆಯುವ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ನಂತರ ನಾನಾ ಸಮುದಾಯಗಳ ಮುಖಂಡರನ್ನು ಭೇಟಿಯಾಗಿ ಮಾತನಾಡಲಿದ್ದಾರೆ ಎಂದು ಹೇಳಿದರು.
ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ಬಾವನಗೌಡ ಬಾದರ್ಲಿ ಮಾತನಾಡಿ, ಅನರ್ಹ ಶಾಸಕ ಆನಂದ್ ಸಿಂಗ್ ಮಾರಾಟವಾಗುವ ಮೂಲಕ ಕ್ಷೇತ್ರದ ಮತದಾರರ, ಜನರ ಮಾನ ಹರಾಜು ಹಾಕಿದ್ದಾರೆ ಎಂದು ದೂರಿದರು. ಬ್ಲಾಕ್ ಕಾಂಗ್ರೆಸ್ ಹೊಸಪೇಟೆ ಘಟಕದ ಅಧ್ಯಕ್ಷ ಇಮಾಮ್ ನಿಯಾಜಿ, ಬಳ್ಳಾರಿ ನಗರ, ಗ್ರಾಮೀಣ ಜಿಲ್ಲಾಧ್ಯಕ್ಷರಾದ ಶಿವಯೋಗಿ, ಆಂಜನೇಯಲು, ಮುಖಂಡರಾದ ದೀಪಕ್ ಸಿಂಗ್, ಗುಜ್ಜಲ್ ನಾಗರಾಜ್, ನಿಂಬಗಲ್ ರಾಮಕೃಷ್ಣ ಮುಂತಾದವರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2019/11/29hpt02.gif)