ಬೆಂಗಳೂರು
ಹಠಮಾರಿ ಧೋರಣೆ ಹೊಂದಿದ್ದ ಪತ್ನಿಯ ಜೊತೆ ಜಗಳ ಮಾಡಿ ಕತ್ತು ಹಿಸುಕಿ ಸುತ್ತಿಗೆಯಿಂದ ಹೊಡೆದು ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ ವಾಚ್ಮೆನ್ನ್ನು ರಾಮಮೂರ್ತಿ ನಗರ ಪೊಲೀಸರು ಬಂಧಿಸಿದ್ದಾರೆ.
ಬಿಹಾರದ ಬಾಲಟೋಲ ಮೂಲದ ವಿನಯ್ ಕುಮಾರ್ (31) ಬಂಧಿತ ಆರೋಪಿಯಾಗಿದ್ದಾನೆ.ಪತ್ನಿ ಗೀತಾದೇವಿ(23)ಯನ್ನು ಕಲೆಗೈದು ಪರಾರಿಯಾಗಿದ್ದ ಆರೋಪಿಯನ್ನು ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಬಂಧಿಸಲಾಗಿದೆ ಎಂದು ಡಿಸಿಪಿ ರಾಹುಲ್ಕುಮಾರ್ ಶಹಪುರವಾಡ ಅವರು ತಿಳಿಸಿದ್ದಾರೆ.
ಬಿಹಾರದ ಹರೋನ ಗ್ರಾಮದ ಗಾಯಿತ್ರಿ ದೇವಿ ಅವರನ್ನು 6 ವರ್ಷದ ಹಿಂದೆ ವಿವಾಹವಾಗಿದ್ದ ವಿನಯ್ಕುಮಾರ್ ದಂಪತಿಗೆ ಇಬ್ಬರು ಮಕ್ಕಳಿದ್ದರು. ಉದ್ಯೋಗ ಅರಸಿ ದಂಪತಿ ನಗರಕ್ಕೆ ಬಂದಿದ್ದರು.
ವಿನಯ್ಕುಮಾರ್ ಹೊರಮಾವು ಮುಖ್ಯರಸ್ತೆಯ ಪ್ರೇರಣಾ ಟ್ರಾ ಟೂಲ್ ಅಪಾರ್ಟ್ಮೆಂಟ್ನಲ್ಲಿ ವಾಚ್ಮೆನ್ ಆಗಿ ಕೆಲಸ ಮಾಡುತ್ತಿದ್ದನು ಪತ್ನಿ ಗೀತಾದೇವಿ ಅಲ್ಲೇ ಮನೆಗೆಲಸ ಮಾಡಿಕೊಂಡಿದ್ದರು. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಇಬ್ಬರ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಹಠಮಾರಿ ಸ್ವಭಾವ ಹೊಂದಿದ್ದ ಗೀತಾದೇವಿ, ಪತಿಯನ್ನು ಎಲ್ಲರ ಮುಂದೆ ಅವಾಚ್ಯ ಶಬ್ಧಗಳಿಂದ ನಿಂದಿಸುವುದು, ಹಲ್ಲೆ ನಡೆಸುವುದು ಮಾಡುತ್ತಿದ್ದಳು. ಇದರಿಂದ ಕೋಪಗೊಂಡ ವಿನಯ್ಕುಮಾರ್, ಪಾನಮತ್ತನಾಗಿ ಮನೆಯಲ್ಲಿ ಬಂದು ಗಲಾಟೆ ಮಾಡುತ್ತಿದ್ದ. ಅಪಾರ್ಟ್ಮೆಂಟ್ನ ನಿವಾಸಿಗಳು ವಿನಯ್ಕುಮಾರ್ ದಂಪತಿಯನ್ನು ಸುಮ್ಮನಿರಿಸುತ್ತಿದ್ದರು.
ಕಳೆದ ಜ. 12 ರಂದು ರಾತ್ರಿ ದಂಪತಿ ನಡುವೆ ಜಗಳವಾಗಿದ್ದು, ಮಧ್ಯರಾತ್ರಿ 3ರ ವೇಳೆ ಮಲಗಿದ್ದ ಗೀತಾದೇವಿಯನ್ನು ಕತ್ತು ಹಿಸುಕಿ ತಲೆಗೆ ಸುತ್ತಿಗೆಯಿಂದ ಹೊಡೆದು, ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆಗೈದು ಮೃತದೇಹವನ್ನು ಪಾರ್ಕಿಂಗ್ ಜಾಗದಲ್ಲಿ ತಂದು ಎಸೆದು ಪರಾರಿಯಾಗಿದ್ದ
ಈ ಸಂಬಂಧ ಪ್ರಕರಣ ದಾಖಲಿಸಿದ ಪೊಲೀಸ್ ಇನ್ಸ್ಪೆಕ್ಟರ್ ಸಂಜೀವ್ ರಾಯಪ್ಪ ಅವರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








