ಹರಿಹರ:
ಕ್ಷೇತ್ರಕ್ಕೆ ಬೃಹತ್ ಕೈಗಾರಿಕೆಗಳನ್ನು ಸ್ಥಾಪನೆ ಮಾಡಿ ಹಳೆಯ ಕೈಗಾರಿಕಾ ಕ್ಷೇತ್ರವನ್ನಾಗಿಸುವ ಮಹದಾಸೆ ಇದ್ದು, ಆ ನಿಟ್ಟಿನಲ್ಲಿ ಉನ್ನತ ಅಧಿಕಾರಿಗಳ ಮಟ್ಟದಲ್ಲಿ ಚರ್ಚೆ ನಡೆಸುತ್ತೇನೆ ಎಂದು ಶಾಸಕ ಎಸ್ ರಾಮಪ್ಪ ಹೇಳಿದರು.
ಅವರು ನಗರದ ಮರಿಯಾ ಸದನದ ಸಭಾಂಗಣದಲ್ಲಿ ಬ್ಲಾಕ್ ಕಾಂಗ್ರೆಸ್ ಯುವ ಕಾಂಗ್ರೆಸ್ ಮತ್ತು ಎನ್ಎಸ್ಯುಐ ಸಂಯೋಜನೆಯಲ್ಲಿ ಯುವ ಜನತೆ ಹಾಗೂ ವಿದ್ಯಾರ್ಥಿಗಳಿಗೆ ನಡೆಸಿದ ವಿಭಿನ್ನ ವಿಚಾರಗಳ ಮುಖಾಮುಖಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಒಬ್ಬ ಸಾಮಾನ್ಯ ಕಾರ್ಮಿಕನಾಗಿದ್ದ ನಾನು ಇಂದು ಜನಪ್ರತಿನಿಧಿಯಾಗಿದ್ದು ಜನರ ಸೇವೆಗಾಗಿ ನಗರಕ್ಕೆ ಬೃಹತ್ ಉದ್ಯಮಗಳನ್ನು ತರುವ ನಿಟ್ಟಿನಲ್ಲಿ ಶ್ರಮೀಸುತ್ತಿದ್ದು. ನನ್ನ ಅವಧಿ ಮುಗಿಯುವವರೆಗೂ ಕಾಯದೆ ಆದಷ್ಟು ಶೀಘ್ರವಾಗಿ ಕೈಗಾರಿಕೆಗಳನ್ನು ತರಲು ಸರ್ಕಾರ ಮಟ್ಟದಲ್ಲಿ ಚರ್ಚಿಸಲಿದ್ದೇನೆ ಎಂದು ಭರವಸೆ ನೀಡಿದರು.
ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ನಾಯಕರು ಈಗ ಚುನಾವಣೆ ಹತ್ತಿರವಿರುವ ಸಂದರ್ಭದಲ್ಲಿ ರಾಮಮಂದಿರದ ವಿಷಯ ಪ್ರಸ್ತಾಪಿಸುತ್ತಿದ್ದಾರೆ. ಕಳೆದ ನಾಲ್ಕೂವರೆ ವರ್ಷದಿಂದ ಅಧಿಕಾರದಲ್ಲಿದ್ದಾಗ ರಾಮಮಂದಿರದ ಬಗ್ಗೆ ಚಕಾರವೆತ್ತದೆ ಸುಮ್ಮನಿದ್ದು ಈಗ ಮಂದಿರದ ವಿಚಾರ ಪ್ರಾರಂಭಿಸಿದ್ದು,ಚುನಾವಣೆ ಮುಗಿಯುತ್ತಿದ್ದಂತೆ ಶ್ರೀರಾಮನನ್ನು ಮರೆಯುತ್ತಾರೆ ಎಂದರು.
ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರದಿಂದ ಯಾವುದೇ ಬಡಜನರಿಗೆ, ಎಸ್ಸಿ, ಎಸ್ಟಿ ಮತ್ತು ಅಲ್ಪಸಂಖ್ಯಾತರಿಗೆ ಒಳ್ಳೆಯದನ್ನು ಮಾಡಿಲ್ಲ. ಅವರು ಕೇವಲ ಅಂಬಾನಿ,ಬಿರ್ಲಾ ರಂತಹ ಆಗರ್ಭ ಶ್ರೀಮಂತರಿಗೆ ಒಳ್ಳೆಯದು ಮಾಡಿರುತ್ತಾರೆ. ಆದ್ದರಿಂದ ಇಂದಿನ ಯುವಜನರು ಮುಂದಿನ ದಿನಗಳಲ್ಲಿ ಯೋಚಿಸಿ ಮತದಾನ ಮಾಡಲು ಮನವಿ ಮಾಡಿದರು.
ನಂತರ ಮಾತನಾಡಿದ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಬಸವನಗೌಡ ಬಾದರ್ಲಿ ಅವರು ಕೇಂದ್ರದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿರುವ ಬಿಜೆಪಿ ಸರ್ಕಾರವು ಯುವ ಜನತೆಗೆ ಪ್ರತಿ ವರ್ಷ ಎರಡು ಕೋಟಿಗಳಷ್ಟು ಉದ್ಯೋಗ ಕೊಡಿಸುವುದಾಗಿ ಹೇಳಿ, ನಾಲ್ಕು ವರೆ ವರ್ಷಗಳು ಕಳೆದರೂ ಸಹ ಈವರೆಗೆ ಕೇವಲ ಕೆಲವು ಲಕ್ಷ ಉದ್ಯೋಗವನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿಯವರು ಬರೀ ಸುಳ್ಳಿನ ಸರಮಾಲೆಯಿಂದ ಜನರನ್ನು ಮರಳು ಮಾಡುತ್ತಿದ್ದು. ಸುಳ್ಳಿನಿಂದಲೇ ದೇಶವನ್ನು ಭ್ರಮಾಲೋಕದಲ್ಲಿರಿಸಿ ಜನರನ್ನು ಕತ್ತಲಲ್ಲಿ ಇರಿಸಿ ರೈತರು, ಕಾರ್ಮಿಕರು, ಬಡವರ ವಿರುದ್ಧ ಮತ್ತು ಶ್ರೀಮಂತರ ಪರವಾದ ಆಡಳಿತ ನಡೆಸುತ್ತಿದ್ದಾರೆ. ಎಂದು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಯುವ ಕಾಂಗ್ರೆಸ್ ಮುಖಂಡ ಚೇತನ್ ರೆಡ್ಡಿ ಮಾತನಾಡಿ ಪ್ರಧಾನಿ ನರೇಂದ್ರ ಮೋದಿಯವರು ದೇಶದಲ್ಲಿ ಕಪ್ಪು ಹಣ ಹೊರತರಲು, ಭಯೋತ್ಪಾದನೆ, ಭ್ರಷ್ಟಾಚಾರ ನಿರ್ಮೂಲನೆ ಮತ್ತು ಕೋಟಾ ನೋಟುಗಳಿಂದ ದೇಶವನ್ನು ರಕ್ಷಿಸುವ ಉದ್ದೇಶದಿಂದ ನೋಟ್ ಬ್ಯಾನ್ ಮಾಡಿದರ ಹಿನ್ನಲೆ ಹೊಸ ನೋಟುಗಳನ್ನು ಮುದ್ರಿಸಲು ಸುಮಾರು ಎಂಟು ಸಾವಿರ ಕೋಟಿ ಹಣವನ್ನು ಖರ್ಚು ಮಾಡಲಾಗಿದೆ ಎಂದು ತಿಳಿಸಿದರು.
ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಕಾಲದಲ್ಲಿ ಅನೇಕ ಬಾರಿ ಸರ್ಜಿಕಲ್ ಸ್ಟ್ರೈಕ್ ಗಳು ನಡೆದಿವೆ, ದೇಶದ ರಕ್ಷಣಾ ಹಿತದೃಷ್ಟಿಯಿಂದ ಎಲ್ಲೂ ಪ್ರಚಾರ ಮಾಡಲಿಲ್ಲ.ಆದರೆ ಬಿಜೆಪಿ ಸರ್ಕಾರ ಕೇವಲ ಒಂದು ಬಾರಿ ಸರ್ಜಿಕಲ್ ಸ್ಟ್ರೈಕ್ ಮಾಡಿ ಅದನ್ನು ಸಹ ಪ್ರಚಾರಕ್ಕೆ ಬಳಸಿಕೊಂಡಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸುಜಾತಾ, ತಾಲೂಕು ಪಂಚಾಯತ್ ಮಾಜಿ ಸದಸ್ಯ ಬಸವರಾಜ್ ಬೆಳ್ಳೂಡಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಗಂಗಮ್ಮ ,ನಗರಸಭೆಯ ಸದಸ್ಯರಾದ ಶಂಕರ್ ಕಟಾವಕರ್, ಕೆ.ಮರಿದೇವ, ಎಜಾಜ್ ಅಹಮದ್, ರತ್ನಮ್ಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಲ್ ಬಿ ಹನುಮಂತಪ್ಪ, ಧುಡಾ ಮಾಜಿ ಸದಸ್ಯ ಜಿ.ವಿ.ವಿರೆಶ್, ಎನ್ಎಸ್ಯುಐ ರಾಜ್ಯ ಕಾರ್ಯದರ್ಶಿ ಮಮತಾ, ಜಿಲ್ಲಾ ಅಧ್ಯಕ್ಷ ಅಲಿ ಅಹಮದ್,ಉಪಾಧ್ಯಕ್ಷ ಶಿವಕುಮಾರ್,ರಾಷ್ಟ್ರೀಯ ಮಾಜಿ ಕಾರ್ಯದರ್ಶಿ ಇಬ್ರಾಹಿಂ ಖಲೀಲ್,ಎಪಿಎಂಸಿ ನರೇಂದ್ರ ತಾಲೂಕು ಕುರುಬ ಸಮಾಜದ ಅಧ್ಯಕ್ಷ ಕೆ ಜಡಿಯಪ್ಪ, ಸಿ.ಎನ್. ಹುಲಿಗೆಶ್, ಟಿ ಕೆ ಪ್ರವೀಣ್, ಬಾಬುಲಾಲ್ ,ಸನಾವುಲ್ಲಾ, ಬಾಲರಾಜ್, ಅರುಣ್ ಬಂಗಾಳೆ,ಮಾಗಾನಹಳ್ಳಿ ವಾಸುದೇವ್,ಕೆ.ಪಿ ಗಂಗಾಧರ, ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
