ಬೆಂಗಳೂರು
ಒಂಟಿ ಮಹಿಳೆಯರ ಸರಗಳವು ಹಾಗೂ ಬೆದರಿಸಿ ಸುಲಿಗೆ ಮಾಡಿ ಮೋಜು ಮಾಡುತ್ತಿದ್ದ ಇಬ್ಬರು ಖದೀಮರು ಚಿಕ್ಕಜಾಲ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ನಾಗವಾರದ ಮುಖ್ಯರಸ್ತೆಯ ಗೋವಿಂದಪುರದ ಸೈಯ್ಯದ್ ವಸೀಂ ಅಲಿಯಾಸ್ ವಸೀಂ (33), ರೋಷನ್ ಉಲ್ಲಾ ಬೇಗ್ ಅಲಿಯಾಸ್ ರೋಷನ್ (26) ಬಂಧಿತ ಆರೋಪಿಗಳಾಗಿದ್ದು ಅವರಿಂದ 23 ಗ್ರಾಂ ಚಿನ್ನ, ಮೊಬೈಲ್, ವಾಚ್, ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ
ಆರೋಪಿಗಳು ಕಳೆದ ಮಾರ್ಚ್ 14 ರಂದು ಮುಂಜಾನೆ 4ರ ವೇಳೆ ಏರ್ಪೋರ್ಟ್ಗೆ ಕೆಲಸಕ್ಕೆ ಹೋಗಲು ಹುಣಸಮಾರನಹಳ್ಳಿಯ ರಾಷ್ಟ್ರೀಯ ಹೆದ್ದಾರಿ 7ರ ಸರ್ವೀಸ್ ರಸ್ತೆಯಲ್ಲಿ ಬಸ್ಗಾಗಿ ಕಾಯುತ್ತಿದ್ದ ಅಪ್ಪಾರಾಯಿ ರಾಮಪ್ಪ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ನಗದು, ಮೊಬೈಲ್ ಕಸಿದು ಪರಾರಿಯಾಗಿದ್ದರು.
ಇದಲ್ಲದೆ,ಬಾಗಲೂರು ಬಳಿ ಕಳೆದ ಮಾರ್ಚ್ 19 ರಂದು ಮುಂಜಾನೆ 5.30ರ ವೇಳೆ ವಾಕಿಂಗ್ ಮುಗಿಸಿಕೊಂಡು ಮನೆಗೆ ನಡೆದುಕೊಂಡು ಬರುತ್ತಿದ್ದ ಲಕ್ಷ್ಮಿ ಎಂಬುವವರ 40 ಗ್ರಾಂ ಚಿನ್ನದ ಸರವನ್ನು ಹಿಂದಿನಿಂದ ಬಂದ ಆರೋಪಿಗಳು ಕಸಿದು ಪರಾರಿಯಾಗಿದ್ದರು. ಇವೆರಡೂ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿತ್ತು.
ಚಿಕ್ಕಜಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಸುಲಿಗೆ ಪ್ರಕರಣದ ಬೆನ್ನುಹತ್ತಿದ ಪೊಲೀಸ್ ಇನ್ಸ್ಪೆಕ್ಟರ್ ಮುತ್ತುರಾಜ್ ಅವರು ಖಚಿತ ಮಾಹಿತಿಯ ಮೇರೆಗೆ ಆರೋಪಿಗಳನ್ನು ಬಂಧಿಸಿ, ನಡೆಸಿದ ವಿಚಾರಣೆಯಲ್ಲಿ ಆರೋಪಿಗಳು ಐಷಾರಾಮಿ ಜೀವನ ನಡೆಸಲು ಕೃತ್ಯಕ್ಕೆ ಕೈಹಾಕಿರುವುದನ್ನು ಬಾಯಿಬಿಟ್ಟಿದ್ದಾರೆ.
ಆರೋಪಿಗಳು ಹೆಬ್ಬಾಳ ಪೊಲೀಸ್ ಠಾಣೆ ವ್ಯಾಪ್ತಿಯ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿರುವ ಮಾಹಿತಿ ನೀಡಿದ್ದು, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ. ಆರೋಪಿಗಳಿಂದ 23 ಗ್ರಾಂ ತೂಕದ ಮಾಂಗಲ್ಯಸರ, ಮೊಬೈಲ್, ನಗದು, ವಾಚ್, ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಕಲಾಕೃಷ್ಣಸ್ವಾಮಿ ಅವರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
