ಯತ್ನಾಳ್ ವಿರುದ್ಧ ಡಿಕೆಶಿಯಿಂದ ಮಾನನಷ್ಟ ಮೊಕದ್ದಮೆ..!!

ಬೆಂಗಳೂರು

    ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಿರುವ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಡಿ.ಕೆ.ಶಿವಕುಮಾರ್ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ

    ತವರು ಕ್ಷೇತ್ರ ಕನಕಪುರ ಸೀನಿಯರ್ ಸಿವಿಲ್ ಜಡ್ಜ್ ಹಾಗೂ ಜೆಎಂಎಫ್ ಸಿ ನ್ಯಾಯಾಲಯದಲ್ಲಿ ಡಿ.ಕೆ. ಶಿವಕುಮಾರ್ ಯತ್ನಾಳ್ ವಿರುದ್ಧ 204 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿ ದೂರು ದಾಖಲಿಸಿದ್ದಾರೆ.ಅರ್ಜಿದಾರ ಡಿ.ಕೆ. ಶಿವಕುಮಾರ್ ಅವರು ನ್ಯಾಯಾಲಯಕ್ಕೆ ಚೆಕ್ ಮೂಲಕ 1 ಕೋಟಿ 4 ಲಕ್ಷದ 8 ಸಾವಿರ ರೂಪಾಯಿ ಕೋರ್ಟ್ ಶುಲ್ಕ ಪಾವತಿಸಿದ್ದಾರೆ.

    ಶಿವಕುಮಾರ್ ಸಲ್ಲಿಸಿದ ಸಿವಿಲ್ ಮೊಕದ್ದಮೆ ಅರ್ಜಿ ವಿಚಾರಣೆ ಅಂಗೀಕರಿಸಿರುವ ನ್ಯಾಯಾಲಯ ಪ್ರತಿವಾದಿ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಸಮನ್ಸ್ ಜಾರಿ ಮಾಡಿದೆ. ಸೆಪ್ಟೆಂಬರ್ 18 ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ.

     ಪ್ರತಿವಾದಿ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕಳೆದ ಜೂನ್ 23 ರಂದು ವಿಜಯಪುರದಲ್ಲಿ ಡಿ.ಕೆ. ಶಿವಕುಮಾರ್ ತಮ್ಮ ವಿರುದ್ಧದ ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯದ ಪ್ರಕರಣಗಳಿಂದ ಮುಕ್ತಿಗೊಳಿಸಲು ಸಹಾಯ ಮಾಡುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಕೇಂದ್ರದ ಸಚಿವರುಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ. ಪ್ರಕರಣಗಳನ್ನು ಖುಲಾಸೆ ಮಾಡಿದರೆ ಪ್ರತಿಯಾಗಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಸಹಾಯ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.

     ಯತ್ನಾಳ್ ಅವರು ಸತ್ಯಕ್ಕೆ ದೂರವಾದ ಹೇಳೀಕೆ ನೀಡಿರುವುದರಿಂದ ತಮ್ಮ ಪ್ರಾಮಾಣಿಕತೆ, ನೈತಿಕತೆ, ಪ್ರತಿಷ್ಠೆ ಹಾಗೂ ವರ್ಚಸ್ಸಿಗೆ ಧಕ್ಕೆಯಾಗಿದೆ. ಯತ್ನಾಳ್ ಅವರ ಆಧಾರರಹಿತ, ದುರುದ್ದೇಶಪೂರ್ವಕ ಹಾಗೂ ಬೇಜವಾಬ್ದಾರಿ ಆರೋಪದಿಂದ ತಮ್ಮ ಮಾನಕ್ಕೆ ಹಾನಿಯಾಗಿದೆ ಎಂದು ಶಿವಕುಮಾರ್ ಆರ್ಜಿಯಲ್ಲಿ ವಾದಿಸಿದ್ದಾರೆ.

     ತಮ್ಮ, ಹಾಗೂ ಕುಟುಂಬದ ಸದಸ್ಯರು, ಬಂಧುಗಳು ಹಾಗೂ ಸ್ನೇಹಿತರ ವಿರುದ್ಧ ಐಟಿ ಮತ್ತು ಇಡಿ ದಾಖಲು ಮಾಡಿರುವ ಪ್ರಕರಣಗಳ ಸಂಬಂಧ ನಾನಾ ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಯುತ್ತಿದೆ. ಆದರೆ ಯತ್ನಾಳ್ ಮಾಡಿರುವ ಸುಳ್ಳು ಆರೋಪ ಕಾನೂನು ಸಂಸ್ಥೆಗಳ ದಿಕ್ಕುತಪ್ಪಿಸುವ ಹಾಗೂ ಅವುಗಳ ಮೇಲೆ ಪ್ರಭಾವ ಬೀರುವ ಹುನ್ನಾರದಿಂದ ಕೂಡಿದೆ.

    ಸುಳ್ಳು ಹೇಳಿಕೆಯಿಂದ ತಾವು ಪ್ರತಿನಿಧಿಸುತ್ತಿರುವ ಕನಕಪುರ ವಿಧಾನಸಭೆ ಕ್ಷೇತ್ರದ ಮತದಾರರು, ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ಕರ್ನಾಟಕ ಹಾಗೂ ಭಾರತದ ಪ್ರಜೆಗಳು ತಮ್ಮನ್ನು ಅನುಮಾನದಿಂದ ನೋಡುವಂತೆ ಮಾಡಿದೆ. ಹಿಂದಿನ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ತಾವು ಅದೇ ಸರ್ಕಾರ ಅಸ್ಥಿರಗೊಳಿಸಲು ಮುಂದಾಗಿದ್ದೇನೆ ಎಂಬರ್ಥ ಬರುವ ರೀತಿ ಹೇಳಿಕೆ ನೀಡುವ ಮೂಲಕ ಯತ್ನಾಳ್, ತಮ್ಮ ಪ್ರಾಮಾಣಿಕತೆ, ಬದ್ಧತೆ, ಘನತೆ ಹಾಗೂ ಗೌರವಕ್ಕೆ ಚ್ಯುತಿ ತಂದಿದ್ದಾರೆ ಎಂದು ಅರ್ಜಿಯಲ್ಲಿ ಅವರು ತಿಳಿಸಿದ್ದಾರೆ.

     ಯತ್ನಾಳ್ ಆರೋಪ ಗಂಭೀರ ಸ್ವರೂಪದ್ದಾಗಿದ್ದು, ಇದು ಕಾಂಗ್ರೆಸ್ ರಾಜ್ಯ, ರಾಷ್ಟ್ರೀಯ ಮುಖಂಡರು ಹಾಗೂ ಮೈತ್ರಿ ಸರ್ಕಾರದ ಮುಖಂಡರು ಕೂಡ ನನ್ನನ್ನು ಗುಮಾನಿಯಿಂದ ನೋಡಬೇಕು ಹಾಗೂ ನನ್ನ ರಾಜಕೀಯ ಭವಿಷ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಬೇಕು ಎಂಬ ದುರುದ್ದೇಶದಿಂದಲೂ ಕೂಡಿದೆ ಎಂದು ಅರ್ಜಿದಾರರು ದೂರಿದ್ದಾರೆ.

     ಆ ಮೂಲಕ ನನ್ನ ಕರ್ತವ್ಯನಿಷ್ಠೆ, ಗೌರವ ಹಾಗೂ ಘನತೆಗೆ ಭಂಗ ತರಲಾಗಿದೆ. ಯತ್ನಾಳ್ ಆರೋಪ ಕುರಿತು ಕನಕಪುರ ಕ್ಷೇತ್ರದ ಮತದಾರರು, ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ತಮ್ಮನ್ನು ಪ್ರಶ್ನೆ ಮಾಡಿದ್ದಾರೆ. ಇದರಿಂದ ಮಾನಸಿಕ ಹಿಂಸೆಯಾಗಿದೆ. ಸಾರ್ವಜನಿಕರ ಎದುರು ಅನಗತ್ಯವಾಗಿ ತಲೆ ತಗ್ಗಿಸುವಂತೆ ಮಾಡಿದೆ ಎಂದು ಶಿವಕುಮಾರ್ ನ್ಯಾಯಾಲಯಕ್ಕೆ ಅಲವತ್ತುಕೊಂಡಿದ್ದಾರೆ.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap