ಚಳ್ಳಕೆರೆ
ನಗರದ ಜಗಜೀವನರಾಮ್ ಕಾಲೋನಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ನಿರಂತರವಾಗಿ ಅಲ್ಲಿನ ಭಕ್ತರಿಂದ ಪೂಜಿಸಲ್ಪಡುವ ಶ್ರೀತಿಮ್ಮಪ್ಪಸ್ವಾಮಿ, ಶ್ರೀಚೌಡೇಶ್ವರಿ ಮತ್ತು ಗೌರಸಮುದ್ರ ಶ್ರೀಮಾರಮ್ಮ ದೇವಿಯ ಉತ್ಸವವನ್ನು ಭಕ್ತರು ಅದ್ದೂರಿಯಾಗಿ ಆಚರಿಸಿದರು.
ಪ್ರತಿವರ್ಷದ ದಸರಾ ಹಬ್ಬದ ಬನ್ನಿ ಮಾರನೆ ದಿನ ದೇವರ ಉತ್ಸವವನ್ನು ಇಲ್ಲಿನ ಭಕ್ತರು ನಡೆಸಿಕೊಂಡು ಬರುತ್ತಿದ್ದು,ಈ ವರ್ಷ ಸಹ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಭಕ್ತರು ಮೂರು ದೇವರುಗಳ ಉತ್ಸವ ಮೂರ್ತಿಗಳನ್ನು ನಗರ ಪ್ರಮುಖ ರಸ್ತೆಗಳಲ್ಲಿ ಮಂಗಳವಾದ್ಯಗಳ ಮೂಲಕ ಮೆರವಣಿಗೆ ನಡೆಸಿದರು.
ಜಗಜೀವನರಾಮ್ ಕಾಲೋನಿಯಿಂದ ಹೊರಟ ಈ ಉತ್ಸವ ಪಾದಗಟ್ಟೆ, ಹಳೇಟೌನ್, ಬಳ್ಳಾರಿ ರಸ್ತೆ ನೆಹರೂ ಸರ್ಕಲ್, ಚಿತ್ರದುರ್ಗ ರಸ್ತೆ, ಗಾಂಧಿನಗರ, ಬೆಂಗಳೂರು ರಸ್ತೆ, ಪಾವಗಡ ರಸ್ತೆ ಮೂಲಕ ದೇವಸ್ಥಾನದ ಆವರಣ ತಲುಪಿತು. ಪ್ರತಿವರ್ಷ ಶ್ರೀಸ್ವಾಮಿಯ ಎಲ್ಲಾ ಭಕ್ತರು ಸೇರಿ ಈ ಉತ್ಸವವನ್ನು ಆಚರಣೆ ಮಾಡಿಕೊಂಡು ಬರುತ್ತಿದ್ದು, ದಸರೆಯ ಸಂದರ್ಭದಲ್ಲಿ ಈ ಮೂರು ದೇವರುಗಳಿಗೆ ವಿಶೇಷ ಅಲಂಕಾರದ ಮೂಲಕ ಪೂಜೆಗಳನ್ನು ಸಹ ನೆರವೇರಿಸಲಾಗುತ್ತದೆ.
ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಜಿ.ಮಾರಣ್ಣ, ಕಾರ್ಯದರ್ಶಿ ಟಿ.ಜಯಣ್ಣ, ಖಜಾಂಚಿ ತಿಮ್ಮಯ್ಯ, ಪೂಜಾರಿ ತಿಮ್ಮಪ್ಪ, ತಿಮ್ಮರಾಯಪ್ಪ, ಮಾರಣ್ಣಸ್ವಾಮಿ ಮುಂತಾದವರು ಈ ಉತ್ಸವದ ವ್ಯವಸ್ಥಾಪಕರಾಗಿದ್ದು, ಪ್ರತಿವರ್ಷವೂ ಸಹ ಈ ಉತ್ಸವವನ್ನು ನಡೆಸಿಕೊಂಡು ಬರುತ್ತಿದ್ಧಾರೆ. ಮೂರು ದೇವರುಗಳ ಭಕ್ತರಲ್ಲದೆ ಸ್ವಾಮಿಯ ಒಕ್ಕಲಿನ ಭಕ್ತರೂ ಸಹ ಈ ಸಂದರ್ಭದಲ್ಲಿ ಸೇರಿ ಈ ಕಾರ್ಯಕ್ರಮವನ್ನು ಭಕ್ತಿ ಮತ್ತು ಶ್ರದ್ದೆಗಳಿಂದ ಆಚರಿಸುತ್ತಾ ಬಂದಿದ್ಧಾರೆ.
ಅಧ್ಯಕ್ಷರ ಮನವಿ :- ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ಜಿ.ಮಾರಣ್ಣ, ಕಳೆದ ನೂರಾರು ವರ್ಷಗಳಿಂದ ಶಿಥಿಲಗೊಂಡ ದೇವಸ್ಥಾನದಲ್ಲಿಯೇ ಶ್ರೀಸ್ವಾಮಿಯ ಪೂಜೆಯನ್ನು ಯಾವುದೇ ಲೋಪದೋಷವಿಲ್ಲದೆ ನಡೆಸಿಕೊಂಡು ಬರಲಾಗುತ್ತಿತ್ತು. ದೇವಸ್ಥಾನದ ಶಿಥಿಲಗೊಂಡ ದುಸ್ಥಿತಿಯನ್ನು ಕಂಡ ಅನೇಕಭಕ್ತರು ದೇವಸ್ಥಾನ ನಿರ್ಮಾಣಕ್ಕೆ ನಿರ್ಣಯಕೈಗೊಂಡಿದ್ದು, ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಹಾಗೂ ಇನ್ನಿತರ ದಾನಿಗಳ ಸಹಕಾರದೊಂದಿಗೆ ದೇವಸ್ಥಾನದ ನಿರ್ಮಾಣದ ಕಾರ್ಯಪ್ರಗತಿಯಲ್ಲಿದ್ದು, ಭಕ್ತರು ದೇವಸ್ಥಾನ ನಿರ್ಮಾಣಕ್ಕಾಗಿ ಆರ್ಥಿಕ ನೆರವು ನೀಡುವಂತೆ ಮನವಿ ಮಾಡಿದ್ಧಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
