ದಾವಣಗೆರೆ :
ಮರಳಿನ ಹೋರಾಟಕ್ಕೆ ಹೋದರೆ, ಜೈಲಿಗೆ ಹಾಕುವುದಾಗಿ ಪೊಲೀಸರು ಜನಸಾಮಾನ್ಯರನ್ನು ಬೆದರಿಸುತ್ತಿದ್ದಾರೆಂದು ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಆರೋಪಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಸಚಿವನ ಮಾತು ಕೇಳಿಕೊಂಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹೊನ್ನಾಳಿ ತಾಲೂಕಿಗೆ ಸುಮಾರು 1 ಸಾವಿರ ಪೊಲೀಸ್ ಸಿಬ್ಬಂದಿಯನ್ನು ಬಂದೋಬಸ್ತ್ಗೆ ಕಳಿಸಿದ್ದಾರೆ. ಅಲ್ಲದೆ, ಹಳ್ಳಿ-ಹಳ್ಳಿಗೂ ಪೊಲೀಸ್ ಅಧಿಕಾರಿ, ಸಿಬ್ಬಂದಿಯನ್ನು ಕಳಿಸಿ, ಬೆದರಿಸುವ ತಂತ್ರವನ್ನು ಪೊಲೀಸ್ ಇಲಾಖೆ ಮಾಡುತ್ತಿದೆ ಎಂದು ದೂರಿದರು.
ಕಳೆದ ನ.10, 11ರಂದು ಹೊನ್ನಾಳಿ ತಾಲೂಕು ಕೇಂದ್ರ, ಗ್ರಾಮೀಣ ಭಾಗದಲ್ಲಿ ಪೊಲೀಸ್ ವಾಹನಗಳಲ್ಲಿ ಮೈಕ್ನಲ್ಲಿ ಕೂಗುತ್ತಾ, ಮನೆ-ಮನೆಗಳಿಗೆ ತೆರಳಿ ಬಡವರು, ಮಧ್ಯಮ ವರ್ಗ, ಜನ ಸಾಮಾನ್ಯರನ್ನು ರೇಣುಕಾಚಾರ್ಯ ಜೊತೆಗೆ ಮರಳು ಹೋರಾಟಕ್ಕಿಳಿದರೆ ಜೈಲಿಗೆ ತಳ್ಳುವ, ಕೇಸ್ ಹಾಕುವ ಬೆದರಿಸುವ ತಂತ್ರಕ್ಕೆ ಪೊಲೀಸ್ ಇಲಾಖೆ ಮುಂದಾಗಿರುವುದು ಅತ್ಯಂತ ಖಂಡನೀಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮರಳಿಗಾಗಿ ಹೋರಾಟ ನಡೆಸುವ ಜನ ಸಾಮಾನ್ಯರು, ಬಡವರು, ಮಧ್ಯಮ ವರ್ಗದವರ ಮೇಲೆ ಕೇಸ್ ಹಾಕಿದರೆ ನಾವಂತೂ ನೋಡಿಕೊಂಡು ಸುಮ್ಮನಿರುವುದಿಲ್ಲ. ಜನರಿಗೆ ಮರಳೊದಗಿಸಲಾಗದ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಜನರನ್ನು ಬೆದರಿಸುತ್ತಿವೆ. 4-5 ಸಭೆ ನಡೆಸಿ, ಜನರಿಗೆ ಮರಳು ನೀಡುವಂತೆ ಡಿಸಿ, ಎಸಿ, ತಹಶೀಲ್ದಾರ್ಗೆ ತಿಳಿಸಿದ್ದರೂ ಸ್ಪಂದಿಸಿಲ್ಲ. ಅಧಿಕಾರಿಗಳ ಸಭೆಯ ರೆಕಾರ್ಡ್ ಮಾಡಿಸಿದ್ದು, ಕಾಸು ಮಾಡಿಕೊಳ್ಳುವ ದುರಾಸೆಯಿಂದ ಅಧಿಕಾರಿಗಳು ಮರಳಿನ ಅಭಾವ ಸೃಷ್ಟಿಸಿದ್ದಾರೆಂದು ಆಪಾದಿಸಿದರು.
ಮರಳಿನ ಅಭಾವವಿಲ್ಲ, ಮರಳು ವಿತರಿಸುತ್ತಿರುವುದಾಗಿ ಉಪ ವಿಭಾಗಾಧಿಕಾರಿ ಹೇಳಿಕೆ ನೀಡಿದ್ದಾರೆ. ಒಂದು ವೇಳೆ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ತಹಶೀಲ್ದಾರ್ ಹೊನ್ನಾಳಿ, ನ್ಯಾಮತಿ ತಾಲೂಕಿನಲ್ಲಿ ಎಷ್ಟು ಜನರಿಗೆ ಮರಳು ನೀಡಿದ್ದಾರೆ, ಎಷ್ಟು ಮನೆ ಕಟ್ಟಿಕೊಳ್ಳಲು, ಎಷ್ಟು ಶೌಚಾಲಯ ಕಟ್ಟಿಕೊಳ್ಳಲು, ದೇವಸ್ಥಾನ ಕಟ್ಟುವುದಕ್ಕೆ ಮರಳು ನೀಡಲಾಗಿದೆಯೆಂಬ ಬಗ್ಗೆ ಸ್ಪಷ್ಟ ದಾಖಲೆ ಸಮೇತ ಮಾಹಿತಿ ನೀಡಲಿ. ಮರಳನ್ನು ಕೊಟ್ಟಿದ್ದೇ ನಿಜವಾದರೆ ರಾಜಕೀಯದಿಂದಲೇ ನಿವೃತ್ತಿಯಾಗುತ್ತೇನೆ ಎಂದು ಅವರು ಸವಾಲೆಸೆದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಹೆಚ್.ಬಿ.ಮೋಹನ್, ನೀಲಕಂಠಪ್ಪ, ಬಡಾವಣೆ ಗಂಗಪ್ಪ, ಕಿರವಿ ಶ್ರೀಧರ್, ರಘು, ಗಿರೀಶ, ಸಂತೋಷ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
