ದಾವಣಗೆರೆ:
ಸೆಪ್ಟೆಂಬರ್ ತಿಂಗಳು ಅಂತ್ಯದೊಳಗೆ ಜಿಲ್ಲಾಡಳಿತದಿಂದ ಜಿಲ್ಲೆಯ ತಾಲ್ಲೂಕು, ಹೋಬಳಿವಾರು ಭತ್ತ, ಮೆಕ್ಕೆಜೋಳಕ್ಕೆ ಖರೀದಿ ಕೇಂದ್ರ ಪ್ರಾರಂಭಿಸದಿದ್ದರೆ ಅಕ್ಟೋಬರ್ 1ರಂದು ಅನಿರ್ದಿಷ್ಟಾವಧಿ ಧರಣಿ ನಡೆಸಲು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ನಿರ್ಧರಿಸಿದ್ದಾರೆ.
ನಗರದ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಪ್ರಗತಿ ಪರ ಸಂಘಟನೆಗಳು, ರೈತ ಚಿಂತಕರು ಹಾಗೂ ರೈತರು ಒಳಗೊಂಡ ಖರೀದಿ ಕೇಂದ್ರ ಮತ್ತು ಬರಗಾಲ ಘೋಷಣೆ ಕುರಿತು ಮುಂದಿನ ನಡೆ ಬಗ್ಗೆ ಪೂರ್ವಭಾವಿ ಸಭೆಯಲ್ಲಿ ಚರ್ಚಿಸಿ, ಅಂದು ಜಯದೇವ ವೃತ್ತದಿಂದ ಬೆಳಗ್ಗೆ 10 ಗಂಟೆಗೆ ಪ್ರತಿಭಟನಾ ಮೆರವಣಿಗೆ ಮೂಲಕ ಗಾಂಧಿ ವೃತ್ತ ಮಾರ್ಗವಾಗಿ ತಾಲ್ಲೂಕು ಕಚೇರಿಗೆ ತೆರಳಿ ಅನಿರ್ಧಿಷ್ಠಾವಧಿ ಧರಣಿ ನಡೆಸಲು ತೀರ್ಮಾನಿಸಿದರು.
ಸೇನೆಯ ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ್ ಮಾತನಾಡಿ, ಈಗಾಗಲೇ ಕೇಂದ್ರ ಸರ್ಕಾರ ಮೆಕ್ಕೆಜೋಳಕ್ಕೆ 1700 ರೂ., ಭತ್ತಕ್ಕೆ 1750 ರೂ. ಬೆಲೆ ನಿಗದಿ ಮಾಡಿದ್ದು, ಅದರಂತೆಯೇ ದಲ್ಲಾಳಿಗಳು ಖರೀದಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಬೇಕೆಂದು ಒತ್ತಾಯಿಸಿದರು.
15 ದಿನಗಳ ಹಿಂದೆಯೇ ಜಿಲ್ಲಾಧಿಕಾರಿಗಳ ಮುಖೇನ ಸಂಬಂಧಪಟ್ಟ ಅಧಿಕಾರಿಗಳಿಗೆ ಖರೀದಿ ಕೇಂದ್ರ ಪ್ರಾರಂಭಕ್ಕೆ ಮನವಿ ಮಾಡಲಾಗಿದೆ. ದಲ್ಲಾಳಿಗಳು 1100ರಿಂದ 1200 ರೂ. ಮೆಕ್ಕೆಜೋಳ ಖರೀದಿ ಮಾಡುತ್ತಿದ್ದರೂ ಈ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಕೃಷಿ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೇ ಮೆಕ್ಕೆಜೋಳ ಖರೀದಿ ಕೇಂದ್ರ ಪ್ರಾರಂಭಿಸಿ ನಿಯಮಗಳನ್ನು ಸರಳಿಕರಣಗೊಳಿಸಿ 1700 ರೂ.ಗೆ ಖರೀದಿಸಬೇಕು ಎಂದು ಆಗ್ರಹಿಸಿದರು.
ರಾಜ್ಯ ಕಬ್ಬು ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ತೇಜಸ್ವಿ ಪಟೇಲ್ ಮಾತನಾಡಿ, ರೈತರು ಬೆಳೆದ ಎಲ್ಲಾ ಬೆಳೆಗೂ ವೈಜಾನಿಕವಾಗಿ ಬೆಂಬಲ ಬೆಲೆ ಸಿಗುವಂತಾಗಬೇಕು. ಈ ಬಗ್ಗೆ ಯೋಜನೆ ರೂಪಿಸಲು ಆಲೋಚಿಸಬೇಕಿದೆ ಎಂದರಲ್ಲದೇ, ಸರ್ಕಾರ ಮತ್ತು ಜಿಲ್ಲಾಡಳಿತ ಖರೀದಿ ಕೇಂದ್ರವನ್ನು ದಲ್ಲಾಳಿಗಳ ಗೋದಾಮಿಗೆ ಮೆಕ್ಕೆಜೋಳ ತಲುಪಿದ ಮೇಲೆಯೇ ತೆರೆಯಲಾಗುತ್ತಿದೆ. ರೈತರ ಬಗ್ಗೆ ನಿಜವಾದ ಕಾಳಜಿ ಇದ್ದರೆ ಮಾರುಕಟ್ಟೆ ಬರುವ ಮುಂಚಿತವಾಗಿಯೇ ಖರೀದಿ ಕೇಂದ್ರ ಪ್ರಾರಂಭಿಸಬೇಕು. ಖರೀದಿಗೆ ಇರುವ ನಿಯಮ ಸರಳಿಕರಣ ಮಾಡಬೇಕು. ಈ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಿಲ್ಲಾಡಳಿತಕ್ಕೆ ಸೂಚಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.
ಎಂಎಸ್ಕೆ ಶಾಸ್ತ್ರಿ ಮಾತನಾಡಿದರು. ಸಭೆಯಲ್ಲಿ ಚಿಕ್ಕನಹಳ್ಳಿ ರೇವಣ್ಣ, ಕೆ.ಎಂ. ಕುಮಾರಸ್ವಾಮಿ ಅಣಬೇರು, ಭೀಮನಾಯ್ಕ ಚಿನ್ನಸಮುದ್ರ, ದುರುಗೇಶ್, ಬುಳ್ಳಾಪುರ ಹನುಮಂತಪ್ಪ, ಈಚಘಟ್ಟ ರುದ್ರೇಶ್, ನಿಂಗಪ್ಪ, ರಮೇಶ್ ನಾಯ್ಕ ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
