ದಾವಣಗೆರೆ:
ಜಲಶಕ್ತಿ ಅಭಿಯಾನದ ಮುಖ್ಯ ಉದ್ದೇಶ ನೀರಿನ ಸಂರಕ್ಷಣೆಯಾಗಿದ್ದು, ನಿಗದಿತ ಅವಧಿಯಲ್ಲಿ ನೀರಿನ ಸಂರಕ್ಷಣೆ ಕುರಿತಾದ ಉತ್ತಮ ಕ್ರಿಯಾಯೋಜನೆ ತಯಾರಿಸಿ ಕಾರ್ಯಪ್ರವೃತ್ತರಾಗಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿ.ಎನ್ ಶಿವಮೂರ್ತಿ ಸೂಚನೆ ನೀಡಿದರು.
ಜಿಲ್ಲಾಡಳಿತ ಭವನದಲ್ಲಿ ಶನಿವಾರ ‘ಜಲಶಕ್ತಿ ಅಭಿಯಾನ’ದ ಕುರಿತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಲು ಕರೆಯಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಲಶಕ್ತಿ ಅಭಿಯಾನವು ಐದು ಮುಖ್ಯ ಕಾರ್ಯಕ್ರಮಗಳಾದ ನೀರು ಸಂರಕ್ಷಣೆ ಮತ್ತು ಮಳೆಕೊಯ್ಲು, ಸಾಂಪ್ರದಾಯಿಕ ನೀರಿನ ಮೂಲಗಳ ನವೀಕರಣ, ನೀರಿನ ಮರುಬಳಕೆ ಮತ್ತು ಮರುಪೂರಣ, ಜಲಾನಯನ ಅಭಿವೃದ್ಧಿ ಹಾಗೂ ಅರಣ್ಯೀಕರಣ ಕುರಿತು ಜಿಲ್ಲೆಯಲ್ಲಿ ಸಾಧಿಸಬಹುದಾದಂತಹ ಕ್ರಿಯಾ ಯೋಜನೆ ರಚಿಸಲು ಹಾಗೂ ಜಲಶಕ್ತಿ ವೆಬ್ಸೈಟ್ನಲ್ಲಿ ಜಿಲ್ಲೆಯ ಪ್ರಗತಿಯನ್ನು ನಿಯಮತಿವಾಗಿ ಅಪ್ಲೋಡ್ ಮಾಡಲು ಕ್ರಮ ಕೈಗೊಳ್ಳಬೇಕೆಂದರು.
ಪ್ರಸ್ತುತ ಟಾಪ್ 20 ಜಿಲ್ಲೆಯಲ್ಲಿ ದಾವಣಗೆರೆ 12 ನೇ ಸ್ಥಾನದಲ್ಲಿ ಇದೆ. ಸಾಧನೆ ಇನ್ನೂ ಆಗಬೇಕಿದೆ. ಹಾಗೂ ಆದ ಸಾಧನೆ ಬಗ್ಗೆ ಅಪ್ಲೋಡ್ ಮಾಡುವುದು ಮುಖ್ಯವಾಗುತ್ತದೆ. ಇದಕ್ಕಾಗಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ಹಿಂದೆ ಜಲಾನಯನ ಕಾರ್ಯಕ್ರಮಗಳು ತುಂಬಾ ಚುರುಕಾಗಿದ್ದವು. ಪ್ರಸ್ತುತ ಎಲ್ಲೆಡೆ ಗಿಡ ನೆಡುವ ಕಾರ್ಯ ಅತ್ಯಂತ ಚುರುಕಿನಿಂದ ನಡೆಯಲು ಕ್ರಮ ವಹಿಸಲಾಗುವುದು. ಅರಣ್ಯ ಇಲಾಖೆಯವರು ಗುಡ್ಡಗಾಡು ಪ್ರದೇಶಗಳು ಹಾಗೂ ಮುಖ್ಯವಾಗಿ ಗ್ರಾಮೀಣ ಮತ್ತು ನಗರ ಭಾಗದ ಎಲ್ಲ ಮುಖ್ಯ ಕೆರೆಗಳ ಪ್ರದೇಶದಲ್ಲಿ ಗಿಡಗಳನ್ನು ನೆಟ್ಟು ಪ್ರಗತಿ ತೋರಿಸಬೇಕೆಂದರು.
ಕೃಷಿ ವಿಜ್ಞಾನ ಕೇಂದ್ರದ ಸಲಹೆ ಮತ್ತು ಸಹಕಾರ ಅತ್ಯಗತ್ಯವಾಗಿದ್ದು, ಐಇಸಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದ ಅವರು ಇದೊಂದು ಅಭಿಯಾನ ಅನ್ನುವುದಕ್ಕಿಂತ ಜಿಲ್ಲೆಯ ಜಲಮೂಲದ ಕುರಿತಾದ ಸಮಗ್ರ ವೈಜ್ಞಾನಿಕ ಅಧ್ಯಯನವಾಗಿದೆ. ಕ್ರಿಯಾ ಯೋಜನೆ ಪ್ರಕಾರ ಅನುದಾನ ಬಿಡುಗಡೆಯಾಗುತ್ತದೆ. ಅದಕ್ಕೆ ಅನುಗುಣವಾಗಿ ಕೆಲಸ ಆಗಬೇಕೆಂದು ಸೂಚಿಸಿದರು.
ಕೃಷಿ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್ ಮಾತನಾಡಿ, ಜಲಶಕ್ತಿ ಅಭಿಯಾನದ ಮೇಲ್ಕಂಡ ಐದು ಕಾರ್ಯಕ್ರಮಗಳ ಪೈಕಿ ಸಾಧಿಸಬಹುದಾದಂತಹ ಯೋಜನೆ ಮೊದಲು ತಯಾರಿಸಲು ಆದ್ಯತೆ ನೀಡಲಾಗುವುದು. ಬೋರ್ವೆಲ್ ರೀಚಾರ್ಜ್, ನೀರಿನ ಮರುಬಳಕೆ, ಸರ್ಕಾರಿ ಜಾಗದಲ್ಲಿ, ಸರ್ಕಾರಿ ಕಚೇರಿ, ಶಾಲಾ ಕಾಲೇಜು, ಆಸ್ಪತ್ರೆಗಳಲ್ಲಿ ಗಿಡ ನೆಡುವಿಕೆ ಸೇರಿದಂತೆ ರೈತರ ಹೊಲಗಳಲ್ಲಿ ಗಿಡ ನೆಡುವ ಯೋಜನೆ ರೂಪಿಸಿದರೆ ಉತ್ತಮ ಎಂದರು.
ಡಿ.ಡಿ.ಪಿ.ಐ ಪರಮೇಶ್ವರಪ್ಪ ಮಾತನಾಡಿ, ಇಲಾಖೆ ವತಿಯಿಂದ ಜಿಲ್ಲೆಯಲ್ಲಿ 505 ಶಾಲೆಗಳಲ್ಲಿ ಕಳೆದ ಏಳೆಂಟು ವರ್ಷಗಳ ಹಿಂದೆ ಮಳೆಕೊಯ್ಲು ಅಳವಡಿಸಲಾಗಿತ್ತು. ಆದರೆ ಈಗ ಇವ್ಯಾವು ಕೆಲಸ ಮಾಡುತ್ತಿಲ್ಲವೆಂದಾಗ, ಜಿಲ್ಲಾಧಿಕಾರಿಗಳು ಈ ಯೋಜನೆಯಡಿ ಇವುಗಳನ್ನು ಕಾರ್ಯಗತಗೊಳಿಸುವ ಬಗ್ಗೆ ಚರ್ಚಿಸಿದರು.
ಕೇಂದ್ರ ಸರ್ಕಾರದ ಜಲಶಕ್ತಿ ಯೋಜನೆಯ ದಾವಣಗೆರೆ ಜಿಲ್ಲಾ ನೋಡಲ್ ಅಧಿಕಾರಿ ವಿಶಾಲ್ ಪ್ರತಾಪ್ ಸಿಂಗ್ ಮಾತನಾಡಿ, ಈ ಅಭಿಯಾನದಡಿ ಇನ್ನು ಎರಡರಿಂದ ಮೂರು ತಿಂಗಳ ಒಳಗೆ ಕ್ರಿಯಾಯೋಜನೆ ತಯಾರಿಸಬೇಕು. ಮೇಲ್ಕಂಡ ಐದು ಕಾರ್ಯಕ್ರಮಗಳ ಆಧಾರದಲ್ಲಿ ಜಲಸಂರಕ್ಷಣೆ ಕುರಿತ ಯೋಜನೆಯನುಗುಣವಾಗಿ ಜಿಲ್ಲೆಗೆ ಅನುದಾನ ಬಿಡುಗಡೆ ಮಾಡಲಾಗುವುದು.
ಜಿಲ್ಲೆಯ ಚನ್ನಗಿರಿ, ಜಗಳೂರು ಮತ್ತು ದಾವಣಗೆರೆ ತಾಲ್ಲೂಕುಗಳಿಗೆ ಕ್ಷೇತ್ರ ಭೇಟಿ ನೀಡಿ ಐದು ಜಲಸಂರಕ್ಷಣಾ ವಿಭಾಗಗಳಲ್ಲಿ ಈಗಾಗಲೇ ಆಗಿರುವ ಕಾರ್ಯಕ್ರಮಗಳು, ಪ್ರಗತಿಯಲ್ಲಿರುವ ಬಗ್ಗೆ ಹಾಗೂ ಮುಂದೆ ಯಾವ ವಿಭಾಗದ ಮೇಲೆ ಹೆಚ್ಚಿನ ಒತ್ತು ನೀಡಬೇಕೆಂಬ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ. ಈ ಅಭಿಯಾನದಡಿ ಪ್ರತಿ ಜಿಲ್ಲೆಗೆ ಒಬ್ಬ ಸೆಂಟ್ರಲ್ ನೋಡಲ್ ಅಧಿಕಾರಿ, ಬ್ಲಾಕ್ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಈ ಅಧಿಕಾರಿಗಳು ಸೇರಿದಂತೆ ಜಿಲ್ಲಾಧಿಕಾರಿಗಳಿಗೆ ಒಂದೊಂದು ವಿಭಾಗದ ಬಗ್ಗೆ ಜವಾಬ್ದಾರಿ ನೀಡಲಾಗುವುದು.
ಜಿ ಪಂ ಸಿಇಓ ಹೆಚ್.ಬಸವರಾಜೇಂದ್ರ ಮಾತನಾಡಿ, ಈಗಾಗಲೇ ಜಿ ಪಂ ವತಿಯಿಂದ ಗ್ರಾಮೀಣ ಭಾಗದಲ್ಲಿ ಶ್ರಮದಾನ ಆರಂಭವಾಗಿದ್ದು, ಜಲಮೂಲಗಳು, ಜಲಸಂರಕ್ಷಣೆ ಕುರಿತು ಶ್ರಮದಾನ ಆಗುತ್ತಿದೆ ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ, ಉಪವಿಭಾಗಾಧಿಕಾರಿ ಕುಮಾರಸ್ವಾಮಿ, ಜಿ ಪಂ ಉಪಕಾರ್ಯದರ್ಶಿ ಭೀಮಾನಾಯ್ಕ, ಸೆಂಟ್ರಲ್ ಗ್ರೌಂಡ್ವಾಟರ್ ಬಾಡಿ ವಿಜ್ಞಾನಿ ಡಾ.ಡೇವಿತ್ ರಾಜ್, ಡಿಹೆಚ್ಓ ಡಾ.ರಾಘವೇಂದ್ರಸ್ವಾಮಿ, ಡಿಯುಡಿಸಿ ಯೋಜನಾ ನಿರ್ದೇಶಕಿ ನಜ್ಮಾ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಲಕ್ಷ್ಮೀಕಾಂತ್ ಬೊಮ್ಮನ್ನಾರ್, ಪಾಲಿಕೆ ಆಯುಕ್ತ ಮಂಜುನಾಥ ಬಳ್ಳಾರಿ, ದೂಡಾ ಆಯುಕ್ತ ಆದಪ್ಪ, ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
