ಹೊನ್ನಾಳಿ :
ಮಾಜಿ ಸೈನಿಕರಿಗೆ ಹಾಗೂ ಯುದ್ಧದಲ್ಲಿ ಮಡಿದ ಯೋಧರ ಪತ್ನಿಯರಿಗೆ ಶೇ. 100 ರಷ್ಟು ಆಸ್ತಿ ತೆರಿಗೆ ವಿನಾಯಿತಿ ನೀಡಬೇಕು ಎಂದು ತಾಲ್ಲೂಕು ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಂ. ವಾಸಪ್ಪ ತಹಶೀಲ್ದಾರ್ ಅವರಲ್ಲಿ ಮನವಿ ಮಾಡಿದರು.
ಸೋಮವಾರ ತಹಶೀಲ್ದಾರ್ ಮಲ್ಲಿಕಾರ್ಜುನ್ ಅವರಿಗೆ ಮನವಿ ಸಲ್ಲಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು. ಕಳೆದ ಸರ್ಕಾರದ ಮಾಜಿ ಗೃಹಮಂತ್ರಿ ಡಾ. ವಿ.ಎಸ್. ಆಚಾರ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸರ್ಕಾರಿ ನಡಾವಳಿಕೆಗಳನುಸಾರ ಶೇ. 100 ರಷ್ಟು ಆಸ್ತಿ ತೆರಿಗೆ ನೀಡುವಂತೆ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿತ್ತು.
ಆದರೆ ಸರ್ಕಾರ ಬದಲಾವಣೆಯ ಕಾರಣದಿಂದ ಅದು ಕಾರ್ಯಗತವಾಗಿಲ್ಲ. ಆದ್ದರಿಂದ ಕರ್ನಾಟಕ ಸರ್ಕಾರದ ಗೆಜೆಟ್ ನೊಟೀಫಿಕೇಶನ್ ಪ್ರಕಾರ ಶೇ.100 ರಷ್ಟು ಆಸ್ತಿ ತೆರಿಗೆ ರಿಯಾಯಿತಿಯನ್ನು ಕೂಡಲೇ ನೀಡಬೇಕು ಎಂದು ಮನವಿ ಮಾಡಿದರು.
ಮನವಿಯ ಪ್ರತಿಯನ್ನು ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ ವಸತಿ ಇಲಾಖೆ ಬೆಂಗಳೂರು, ಹಾಗೂ ಉಪ ನಿರ್ದೇಶಕರು, ಸೈನಿಕ ಕಲ್ಯಾಣ ಇಲಾಖೆ ಶಿವಮೊಗ್ಗ ಇವರಿಗೆ ಕೂಡಾ ಕಳಿಸಿಕೊಡಲಾಗುವುದು ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಮಾಜಿ ಸೈನಿಕರಾದ ಎಂ. ಮಂಜಪ್ಪ, ಎನ್.ವಿ. ರಾಮಪ್ಪ, ಬಿ.ಆರ್. ನಾಗರಾಜ್, ಕೇಶವಮೂರ್ತಿ, ಬಸವರಾಜಪ್ಪ, ಕರಿಯಪ್ಪ, ಮರಿಯಪ್ಪ ಸೇರಿದಂತೆ ಹಲವರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
