ಬೆಂಗಳೂರು
ಹೊಸ ವರ್ಷಾಚರಣೆಯ ವೇಳೆ ಸಂಭವಿಸುವ ರಸ್ತೆ ಅಪಘಾತಗಳು ಇನ್ನಿತರ ಅನಾಹುತಗಳಿಂದ ಉಂಟಾಗುವ ಜೀವ ಹಾನಿಯನ್ನು ತಡೆಯಲು ಆರೋಗ್ಯ ಕವಚ 108 ಅಂಬುಲೆನ್ಸ್ಗಳ ಸೇವೆಯನ್ನು ರಾಜ್ಯಾದ್ಯಂತ ಸುಸಜ್ಜಿತಗೊಳಿಸಲಾಗಿದೆ.
108 ಅಂಬುಲೆನ್ಸ್ ಸೇವೆಯು ದೊಡ್ಡ ಪ್ರಮಾಣದಲ್ಲಿ ಹೊಸ ವರ್ಷಾಚರಣೆ ನಡೆಯುವ ನಗರಗಳಲ್ಲಿರುವ ಪೊಲೀಸ್ ನಿಯಂತ್ರಣ ಕೇಂದ್ರದ ಹಿರಿಯ ಅಧಿಕಾರಿಗಳಿಗೆ ನೇರ ಸಂಪರ್ಕ ಕಲ್ಪಿಸುವ ಮೂಲಕ ಅವಘಡ ಸಂಭವಿಸಿದ ಸ್ಥಳಕ್ಕೆ ತ್ವರಿತವಾಗಿ ತಲುಪುವ ನಿಟ್ಟಿನಲ್ಲಿ ನೆರವಾಗುತ್ತದೆ.
ಹೊಸ ವರ್ಷವನ್ನು ದೊಡ್ಡ ಪ್ರಮಾಣದಲ್ಲಿ ಆಚರಿಸುವ ನಗರಗಳಾದ ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಬೆಳಗಾವಿ, ಮಂಗಳೂರಿನಲ್ಲಿ ಅವಘಡ ಸಂಭವಿಸಿದ ಸ್ಥಳದಿಂದಲೇ ತುರ್ತಾಗಿ ಅಂಬುಲೆನ್ಸ್ ಸೇವೆಯು ಲಭ್ಯವಾಗಲಿದೆ.ಸಾಮಾನ್ಯ ದಿನಗಳಿಗಿಂತ ಹೊಸ ವರ್ಷದ ಆಚರಣೆಗಳಲ್ಲಿ ಶೇ.30 ರಿಂದ 35 ಹೆಚ್ಚಾಗುತ್ತಿರುವ ಅಪಘಾತದ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಅಂಬುಲೆನ್ಸ್ಗಳನ್ನು ಸುಸಜ್ಜಿತಗೊಳಿಸಲಾಗಿದೆ.
ಹೊಸ ವರ್ಷದ ರಾತ್ರಿ 11:45 ರಿಂದ 12:20ರವರೆಗೆ ಮೋಬೈಲ್ ಫೋನ್ ಸಂಪರ್ಕಗಳು ಬ್ಯುಸಿಯಾಗುವ ಸಂಭವವಿರುವುದರಿಂದ ಪೋಲಿಸ್ ನಿಸ್ತಂತು (ವೈಫೈ) ಜಾಲದ ಮೂಲಕ ಅವಘಡಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಸ್ವೀಕರಿಸುವುದಕ್ಕಾಗಿ ಅಂಬುಲೆನ್ಸ್ಗಳನ್ನು ಹತ್ತಿರದ ಪೊಲೀಸ್ ಠಾಣೆ, ಆಸ್ಪತ್ರೆ ಮತ್ತು ಅಗ್ನಿಶಾಮಕ ಇತ್ಯಾದಿಗಳಲ್ಲಿ ನಿಯೋಜಿಸಲಾಗಿದೆ.
ಹೆಚ್ಚಿನ ತುರ್ತು ಪರಿಸ್ಥಿತಿಗಳನ್ನು ನಿರೀಕ್ಷಿಸುವ ಪ್ರದೇಶಗಳಲ್ಲಿ ಹೆಚ್ಚುವರಿ ಅಂಬುಲೆನ್ಸ್ಗಳನ್ನು ನಿಯೋಜಿಸ ಲಾಗುವುದು. ಹೆಚ್ಚುವರಿ ಸೇವೆಗಾಗಿ ಕಾಲ್ಸೆಂಟರ್ ಮತ್ತು ಅಂಬುಲೆನ್ಸ್ ಸಿಬ್ಬಂದಿಯ ಸಾಪ್ತಾಹಿಕ ರಜೆಗಳನ್ನು ರದ್ದುಗೊಳಿಸಲಾಗಿದೆ. ಮುಂಜಾಗೃತವಾಗಿಯೇ ಎಲ್ಲಾ ಅಂಬುಲೆನ್ಸ್ಗಳಲ್ಲಿ ಇಂಧನ, ಆಮ್ಲಜನಕ, ವೈದ್ಯಕೀಯ ಉಪಕರಣಗಳನ್ನು ಇರಿಸಲಾಗಿದೆ.
ನಗರದಲ್ಲಿ ಹೆಚ್ಚು
ಬೆಂಗಳೂರಲ್ಲಿನಲ್ಲಿಯೇ ಅತೀ ಹೆಚ್ಚು ಅಂದರೆ ಸುಮಾರು 72 ಅಂಬುಲೆನ್ಸ್ ವಾಹನಗಗಳು ಹಾಗೂ 19 ಬೈಕ್ ಅಂಬುಲೆನ್ಸ್ಗಳನ್ನ ನಿಯೋಜಿಸಲಾಗಿದೆ. ಹೆಚ್ಚಿನ ಸಂಖ್ಯೆಯ ಸಾವು-ನೋವುಗಳು, ಅನಾಹುತಗಳ ಮಾಹಿತಿಯು ಪೊಲೀಸ್, ಅಗ್ನಿಶಾಮಕ ಸೇವೆ ಮತ್ತು ಆರೋಗ್ಯ ಇಲಾಖೆಗಳೊಂದಿಗೆ ಹಂಚಿಕೊಳ್ಳಲಾಗುತ್ತಿದ್ದು, 108 ತುರ್ತು ಪ್ರತಿಸ್ಪಂದನ ಕೇಂದ್ರಕ್ಕೆ ಕರೆಗಳ ಸಂಖ್ಯೆ ಅತ್ಯಧಿಕವಾದಂತೆ ಹೆಚ್ಚುವರಿ ವೈದ್ಯರನ್ನು ತುರ್ತು ಪ್ರತಿಸ್ಪಂದನ ಕೇಂದ್ರಕ್ಕೆ ಒದಗಿಸುವುದು ಸೇರಿದಂತೆ ಹೆಚ್ಚುವರಿ ಸಂಪನ್ಮೂಲಗಳ ವ್ಯವಸ್ಥೆ ಮಾಡಲಾಗುವುದು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








