ಬೆಂಗಳೂರು
ನೊಂದಣಿಯಾಗದ ವಿಕ್ರಮ್ ಇನ್ವೆಸ್ಟ್ಮೆಂಟ್ನಲ್ಲಿ ಖ್ಯಾತ ಕ್ರಿಕೆಟ್ ಆಟಗಾರ ಗೋಡೆ ಖ್ಯಾತಿಯ ರಾಹುಲ್ ದ್ರಾವಿಡ್ ಅವರು ಹೂಡಿಕೆ ಮಾಡಿದ್ದ ಎರಡು ಖಾತೆಗಳನ್ನು ಸಿಐಡಿ ಅಧಿಕಾರಿಗಳು ಸ್ಥಗಿತ(ಫ್ರೀಜ್)ಗೊಳಿಸಿದ್ದಾರೆ.
ವಿಕ್ರಮ್ ಇನ್ವೆಸ್ಟ್ಮೆಂಟ್ನಲ್ಲಿ ಹಣ ಹೂಡಿದ್ದ ರಾಹುಲ್ ದ್ರಾವಿಡ್ ಅವರು ಹೂಡಿಕೆಗಿಂತ ಮೂರು ಪಟ್ಟು ಹೆಚ್ಚು ಲಾಭ ಪಡೆರುವುದು ತನಿಖೆಯಲ್ಲಿ ಕಂಡುಬಂದಿದ್ದರಿಂದ ಅಧಿಕಾರಿಗಳು ದ್ರಾವಿಡ್ ಅವರ ಎರಡು ಖಾತೆಗಳನ್ನು ಸ್ಥಗಿತಗೊಳಿಸಿ ತನಿಖೆ ಕೈಗೊಂಡಿದ್ದಾರೆ.
ವಿಕ್ರಮ್ಇನ್ವೆಸ್ಟ್ಮೆಂಟ್ ಕಂಪನಿಯಿಂದ ಹೂಡಿಕೆದಾರರಿಗೆ ಲಾಭಾಂಶವೂ ಹಿಂದಿರುಗುವುದಿಲ್ಲ. ಹೀಗಾಗಿ ಉಳಿದ ಸಂತ್ರಸ್ತರಿಗೆ ಹಣವನ್ನು ನೀಡುವ ಸಲುವಾಗಿ ಅಕೌಂಟ್ ಫ್ರೀಜ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಿಂದೆ ಖ್ಯಾತ ಬಾಲಿವುಡ್ ನಟಿ ದೀಪಿಕಾ ಪಡುಕೋಣೆಯವರ ತಂದೆ ಪ್ರಕಾಶ್ ಪಡುಕೋಣೆಯವರ ಅಕೌಂಟ್ಗಳನ್ನು ಸಿಐಡಿ ಅಧಿಕಾರಿಗಳು ಫ್ರೀಜ್ ಮಾಡಿದ್ದರು. ಇದುವರೆಗೂ ಹೂಡಿಕೆಗಿಂತ ಮೂರು ಪಟ್ಟು ಲಾಭ ಪಡೆದ 280 ಖಾತೆಗಳನ್ನು ಸಿಐಡಿ ಸ್ಥಗಿತಗೊಳಿಸಿ ತನಿಖೆ ಮುಂದುವರೆಸಲಾಗಿದೆ.
ಸಿಐಡಿಗೆ ವರ್ಗಾವಣೆ
ಬನಶಂಕರಿ ಪೊಲೀಸ್ ಠಾಣೆಯಲ್ಲಿ ವಿಕ್ರಮ್ ಇನ್ವೆಸ್ಟ್ಮೆಂಟ್ ವಂಚನೆ ಪ್ರಕರಣದ ದೂರು ದಾಖಲಾಗಿತ್ತು. ಬಹುಕೋಟಿ ಹಗರಣದ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲಾಗಿತ್ತು. ಪ್ರಕರಣ ತನಿಖೆ ಕೈಗೊಂಡ ವಿಕ್ರಮ್ ಇನ್ವೆಸ್ಟ್ಮೆಂಟ್ ಹೆಸರಿನಲ್ಲಿ ಕೋಟ್ಯಾಂತರ ರೂ. ವ್ಯವಹಾರ ಮಾಡಿದ್ದರೂ ಸಹ ಕಂಪನಿ ನೊಂದಣಿ ಮಾಡಿಸದಿರುವುದು ಸಿಐಡಿ ಅಧಿಕಾರಿಗಳಿಗೆ ಅಚ್ಚರಿ ತಂದಿದೆ.
ಕಂಪನಿಯ ಮಾಲೀಕರಾದ ರಾಘವೇಂದ್ರ ಮತ್ತು ಶ್ರೀನಾಥ್ ವಿಕ್ರಮ್ ಹೆಸರಿನಲ್ಲಿ ಖಾತೆ ತೆರೆದು ಆದರ ಮೂಲಕವೇ ವ್ಯವಹಾರ ಮಾಡಿ ಹೂಡಿಕೆದಾರರಿಂದ ನೇರವಾಗಿ ತಮ್ಮ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದು ಇದರಲ್ಲಿ ಬರೋಬ್ಬರಿ 2,200ಕ್ಕೂ ಹೆಚ್ಚು ಮಂದಿ ಹೂಡಿಕೆ ಮಾಡಿದ್ದಾರೆ.
ಸುಮಾರು 417 ಕೋಟಿ ರೂಪಾಯಿಯನ್ನು ಸಾರ್ವಜನಿಕರು ಹೂಡಿಕೆ ಮಾಡಿದ್ದಾರೆ.ಅದರಲ್ಲಿ ಹೆಚ್ಚು ಮಂದಿ ಕ್ರಿಕೆಟ್ ಆಟಗಾರರು ಮತ್ತು ಕ್ರಿಡಾ ವಿಭಾಗದ ಮಂದಿಯೇ ಸೇರಿದ್ದಾರೆ. ಪ್ರಮುಖವಾಗಿ ನಗರದ ಹಿರಿಯ ಕಿರಿಯ ಕ್ರಿಕೆಟ್ ಆಟಗಾರರು ಹೂಡಿಕೆ ಮಾಡಿದ್ದಾರೆ.ಕಂಪನಿಯ ವಿರುದ್ಧ ಮೊದಲು ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಈಗ ಬೇರೆ ಬೇರೆ ಠಾಣೆಯಲ್ಲಿ ಬರೋಬ್ಬರಿ 26 ಎಫ್ಐಆರ್ ಗಳು ದಾಖಲಾಗಿವೆ.
ಆಸ್ತಿ ಮಟ್ಟುಗೋಲು
ಸಿಐಡಿ ಕೇಸ್ ಕೈಗೆತ್ತಿಕೊಂಡು ತನಿಖೆ ನಡೆಸಿದ ವೇಳೆ ಸದ್ಯ ಅರೋಪಿಗಳು ಸಂಗ್ರಹಿಸಿದ ಹಣದಲ್ಲಿ334 ಕೋಟಿ ಹಣವನ್ನು ಹಿಂದಿರುಗಿಸಿದ್ದು, ನೋಟು ಅಮಾನ್ಯೀಕರಣದ ಬಳಿಕ ಉಳಿದ 83 ಕೋಟಿಯನ್ನ ನೀಡಲಾಗದೆ ವಂಚಿಸಿದ್ದಾರೆ. ಇದರಿಂದ ಮೊದಲು ಹಣ ಪಡೆದವರು ಹಿಂದೆ ಹೂಡಿಕೆ ಮಾಡಿದವರ ಲಾಭವಾಗಿ ಪಡೆದಿದ್ದಾರೆಂದು ಸಿಐಡಿ ಅಕೌಂಟ್ ಫ್ರೀಜ್ ಮಾಡುವ ಮೊರೆ ಹೋಗಿದೆ.
ತನಿಖೆ ನಡೆಸುತ್ತಿರುವ ಸಿಐಡಿ ಸಂಸ್ಥೆಯು ಸೂತ್ರಂ ಸುರೇಶ್ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿರುವದಲ್ಲದೇ ಕಂಪನಿ ಮಾಲೀಕರಾದ ರಾಘವೇಂದ್ರ ಮತ್ತು ಶ್ರೀನಾಥ್ ಅವರ ನಾಲ್ಕು ಪ್ಲಾಟ್ಗಳು, ಒಂದು ಖಾತೆ ಮತ್ತದರಲ್ಲಿದ್ದ 75 ಲಕ್ಷ ನಗದು, ಎಲ್ಐಸಿ ಬಾಂಡ್ಗಳು, 6 ಕಾರು, 100 ಗ್ರಾಂ ಚಿನ್ನಾಭರಣ, 7 ಕೆಜಿ ಬೆಳ್ಳಿ ಸೇರಿ ಸಂಪೂರ್ಣ ಆಸ್ತಿ-ಪಾಸ್ತಿಯನ್ನು ಸಿಐಡಿ ವಶಪಡಿಸಿಕೊಂಡಿದೆ.
ಪ್ರಕರಣದಲ್ಲಿ 420 ಸೆಕ್ಷನ್ ಅಡಿಯಲ್ಲಿ ತನಿಖೆ ಮಾಡುತ್ತಿದ್ದ ಸಿಐಡಿ ಅಧಿಕಾರಿಗಳು ಕೆಪಿಐಡಿ ಕಾಯ್ದೆ ಸೇರ್ಪಡೆ ಮಾಡಿ ಸರ್ಕಾರಕ್ಕೆ ಪತ್ರ ಬರೆದು .ಕರ್ನಾಟಕ ಹೂಡಿಕೆ ಮತ್ತು ಠೇವಣಿದಾರರ ಸಂರಕ್ಷಣಾ ಕಾಯ್ದೆಯಡಿ ತನಿಖೆ ಮುಂದುವರೆಸಲಾಗಿದ್ದು ಈಕಾಯ್ದೆಯಡಿಯಲ್ಲಿ ಹೂಡಿಕೆ ಮಾಡಿ ಲಾಭ ಪಡೆದವರಿಂದ ವಸೂಲಿ ಮಾಡಿ ಉಳಿದ ಹಣವನ್ನು ನೊಂದವರಿಗೆ ನೀಡಲು ಚಿಂತನೆ ನಡೆಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2018/12/CBI_161215.gif)