ಕೊರಟಗೆರೆ
ತಿಮ್ಮಾಲಪುರ ಅಭಯಾರಣ್ಯ ಸಮೀಪದ ನೇಗಲಾಲ ಗ್ರಾಮದ ಅರಣ್ಯ ಪ್ರದೇಶದಲ್ಲಿ ಮಂಗಳವಾರ ಮುಂಜಾನೆ ವನ್ಯಜೀವಿಗಳ ಕಳ್ಳಬೇಟೆಯಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಅರಣ್ಯ ಇಲಾಖೆ ವಲಯ ಅರಣ್ಯಾಧಿಕಾರಿ ಸತೀಶ್ಚಂದ್ರ ನೇತೃತ್ವದ ಅಧಿಕಾರಿವರ್ಗ ಬಂಧಿಸಿರುವ ಘಟನೆ ನಡೆದಿದೆ.
ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿ ಸಿದ್ದರಬೆಟ್ಟ ಗ್ರಾಪಂ ವ್ಯಾಪ್ತಿಯ ನೇಗಲಾಲ ಗ್ರಾಮದ ಸರ್ವೇ ನಂ. 61 ರ ಅರಣ್ಯ ಪ್ರದೇಶದಲ್ಲಿ ನೇಗಲಾಲ ಗ್ರಾಮದ ಸಿದ್ದಪ್ಪ ಮತ್ತು ಹನುಮಂತರಾಯಪ್ಪ ಎಂಬುವರು ವನ್ಯಪ್ರಾಣಿಗಳ ಕಳ್ಳಬೇಟೆಯಲ್ಲಿ ತೊಡಗಿದ್ದ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ.
ನೇಗಲಾಲ ಗ್ರಾಮದ ಬಂಧಿತ ಸಿದ್ದಪ್ಪ ಮತ್ತು ಹನುಮಂತರಾಯಪ್ಪ ಎಂಬ ಇಬ್ಬರು ಆರೋಪಿಗಳಿಂದ ಬೇಟೆಯಾಡಲು ಬಳಸುತ್ತಿದ್ದ ಬಂದೂಕು, ನಾಡಮದ್ದು, ಗುಂಡು, ತಂತಿ ಉರುಳು, ಮಚ್ಚು ಮತ್ತು ಎರಡು ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಮಂಗಳವಾರ ರಾತ್ರಿ ಅರಣ್ಯ ಇಲಾಖಾ ಸಿಬ್ಬಂದಿ ಗಸ್ತಿನಲ್ಲಿರುವ ವೇಳೆಯಲ್ಲಿ ಗುಂಡಿನ ಶಬ್ದವನ್ನು ಕೇಳಿ ದಾಳಿ ನಡೆಸಲಾಗಿದೆ.ತಿಮ್ಮಲಾಲಪುರ ಅಭಯಾರಣ್ಯ ಸುತ್ತಮುತ್ತಲು ವನ್ಯಜೀವಿಗಳ ಬೇಟೆ ಸಂಪೂರ್ಣ ನಿಷೇಧವಿದೆ
ಕಾಡಿನ ಸಮೀಪ ವಾಸವಿರುವ ಕುಟುಂಬದ ಆತ್ಮರಕ್ಷಣೆಗಾಗಿ ಪೊಲೀಸ್ ಇಲಾಖೆಯಿಂದ ಪಡೆದಿರುವ ಬಂದೂಕನ್ನು ವನ್ಯಜೀವಿಗಳ ಬೇಟೆಯಾಡಲು ಬಳಕೆ ಮಾಡುತ್ತಿರುವುದು ಅಪರಾಧವಾಗಿದೆ. ಬಹಿರಂಗವಾಗಿ ಬಂದೂಕನ್ನು ಹೊರಗಡೆ ತರುವುದನ್ನು ಸಹ ಸರಕಾರ ನಿಷೇಧ ಮಾಡಿದೆ.
ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಉಪವಲಯ ಅರಣ್ಯಾಧಿಕಾರಿ ನಾಗರಾಜು, ನರಸಿಂಹಯ್ಯ, ಬಾಬು, ಮಂಜುನಾಥ, ನಂದೀಶ್ ಸೇರಿದಂತೆ ಇತರರು ಇದ್ದರು. ಆರೋಪಿಗಳ ವಿರುದ್ದ ವನ್ಯಜೀವಿ ಸಂರಕ್ಷಣಾ ಕಾಯಿದೆಯಡಿ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/04/28-apirl-koratagere-crime-photo.gif)