ಕೊರೊನಾ ನಿಯಂತ್ರಣಕ್ಕೆ 20 ಕೋಟಿ ರೂ ಮೀಸಲು

ದಾವಣಗೆರೆ :

       ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಹಾಗೂ ಲಾಕ್‍ಡೌನ್‍ನಿಂದ ಸಮಸ್ಯೆಗೆ ಸಿಲುಕಿರುವ ಜನರಿಗೆ ಅಗತ್ಯ ವಸ್ತುಗಳನ್ನು ಕಲ್ಪಿಸಲು ಜಿಲ್ಲಾಡಳಿತದ ಬಳಿ 20 ಕೋಟಿ ಹಣ ಮೀಸಲಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದರು.

      ಇಲ್ಲಿನ ಕರೂರು ಕೈಗಾರಿಕಾ ಪ್ರದೇಶದಲ್ಲಿ ಶಾ ಟವರ್ಸ್‍ನಲ್ಲಿ ಕಾರ್ಯನಿರ್ವಹಿಸುತ್ತಿರುವ ಉತ್ತರ ಭಾರತದ 110 ಜನ ಕಾರ್ಮಿಕರಿಗೆ ಆಹಾರ ಪದಾರ್ಥಗಳ ಕಿಟ್ ವಿತರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾಡಳಿತದಿಂದ ನಿರ್ಗತಿಕರಿಗೆ, ಬಡವರಿಗೆ, ಅಲೆಮಾರಿ, ಸುಡುಗಾಡುಸಿದ್ದರಿಗೆ ಹೀಗೆ ಕಷ್ಟದಲ್ಲಿರುವ ಜನರಿಗೆ ಹಸಿವಿನಿಂದ ಇರಬಾರದು ಎಂಬ ಉದ್ದೇಶದಿಂದ ಅಗತ್ಯ ವಸ್ತುಗಳಿರುವ ಆಹಾರ ಪದಾರ್ಥಗಳ ವಿತರಿಸಲಾಗಿತ್ತಿದೆ. ಈ ಕಾರ್ಯಕ್ಕಾಗಿ ಮತ್ತು ಕೊರೊನಾ ಸೋಂಕು ನಿಯಂತ್ರಣಕ್ಕಾಗಿ 20 ಕೋಟಿ ರೂ. ಮೀಸಲಿದ್ದು, ಎಂಥ ಸಮಸ್ಯೆ ಬಂದರೂ ಜಿಲ್ಲಾಡಳಿತ ಎದುರಿಸಲು ಸಿದ್ಧವಿದೆ ಎಂದರು.

     ಈಗಾಗಲೇ ಬಹಳಷ್ಟು ದಾನಿಗಳು ಮುಂದೆ ಬಂದು ಆಹಾರದ ವಸ್ತುಗಳನ್ನು ನೀಡುತ್ತಿದ್ದಾರೆ. ಅದನ್ನು ಅಗತ್ಯವಿರುವವರಿಗೆ ವಿತರಣೆ ಮಾಡುತ್ತಿದ್ದೇವೆ. ಇಂದಿನಿಂದ ಜಿಲ್ಲೆಯಲ್ಲಿ ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಮತ್ತು ಗೋಧಿಯನ್ನು ವಿತರಿಸುವ ವ್ಯವಸ್ಥೆ ಆಹಾರ ಇಲಾಖೆ ಕೈಗೊಂಡಿದೆ ಎಂದರು.

     ಲಾಕ್‍ಡೌನ್ ಇರುವ ಕಾರಣದಿಂದ ಹೊರ ರಾಜ್ಯಗಳಿಂದ ಬಂದಿರುವ ಕಾರ್ಮಿಕರಿಗೆ ಇನ್ನಿತರೇ ಜನರು ಉಳಿಯಲು 16 ಕಲ್ಯಾಣ ಮಂಟಪಗಳನ್ನು ಅಧಿಗ್ರಹಣ ಮಾಡಲಾಗಿದ್ದು, ಆದರೆ, ಈ ಜನರು ಅಲ್ಲಿಗೆ ಬರಲು ಒಪ್ಪುತ್ತಿಲ್ಲ. ಹೀಗಾಗಿ, ಸರ್ಕಾರದಿಂದ ಅವರು ಇರುವ ಸ್ಥಳದಲ್ಲೇ ಫುಡ್ ಕಿಟ್ ವಿತರಣೆ ಮಾಡುತ್ತಿದ್ದೇವೆ ಎಂದರು.

    ಇದೇ ಸಂದರ್ಭದಲ್ಲಿ ಓರಿಸ್ಸಾ, ಬಿಹಾರ, ಪಶ್ಚಿಮ ಬಂಗಾಳದಿಂದ ಆಗಮಿಸಿ ನಗರದ ಷಾ ಟವರ್ಸ್‍ನಲ್ಲಿ ಕಾರ್ಯನಿರ್ವಹಿಸುತ್ತಿರುವ 110 ಜನ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯ ನೆರವಿನಿಂದ 865 ರೂ. ಮೊತ್ತದಲ್ಲಿ ತಯಾರಿಸಲಾಗಿದ್ದ ಆಹಾರ ಸಾಮಗ್ರಿಗಳ ಕಿಟ್ ಅನ್ನು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ವಿತರಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ದೂಡಾ ಆಯುಕ್ತ ಬಿ.ಟಿ.ಕುಮಾರಸ್ವಾಮಿ, ಕಾರ್ಮಿಕ ಇಲಾಖೆಯ ಸಹಾಯಕ ಆಯುಕ್ತ ಜಾಹೀರ್ ಅಖ್ತರ್, ಲೇಬರ್ ಇನ್ಸ್‍ಪೆಕ್ಟರ್ ಮಮ್ತಾಜ್ ಬೇಗಂ, ರಾಜಪ್ಪ ಮತ್ತಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link