ಚಿತ್ರದುರ್ಗ:
ಮೂರು ಕೋಟಿ ರೂ.ಗಳ ವೆಚ್ಚದಲ್ಲಿ ನಗರದಲ್ಲಿ ಐದು ಪಾರ್ಕ್ಗಳನ್ನು ಅಭಿವೃದ್ದಿಪಡಿಸಲಾಗುವುದು ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.
ಐ.ಯು.ಡಿ.ಪಿ.ಲೇಔಟ್ ಗಣಪತಿ ದೇವಸ್ಥಾನದ ಸಮೀಪ ಮಂಗಳವಾರ 77 ಲಕ್ಷ ರೂ.ವೆಚ್ಚದಲ್ಲಿ ಪಾರ್ಕ್ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಸಿ.ಕೆ.ಪುರ ಪಾರ್ಕ್ಗೆ ಐವತ್ತು ಲಕ್ಷ, ರಾಜೇಂದ್ರನಗರದ ಪಾರ್ಕ್ಗೆ ಐವತ್ತು ಲಕ್ಷ, ಯೂನಿಯನ್ ಪಾರ್ಕ್ಗೆ 73 ಲಕ್ಷ, ಐ.ಯು.ಡಿ.ಪಿ.ಪಾರ್ಕ್ಗೆ 73 ಲಕ್ಷ ರೂ.ಗಳನ್ನು ಬಿಡುಗಡೆಗೊಳಿಸಲಾಗಿದೆ. ಯೂನಿಯನ್ ಪಾರ್ಕ್ಗೆ ಭೇಟಿ ನೀಡಿದಾಗ ಕಾಂಪೌಂಡ್ ನಿರ್ಮಾಣ ಕಳಪೆಯಾಗಿರುವುದು ಕಂಡು ಬಂದಿದೆ. ಹಾಗಾಗಿ ಇಂಜಿನಿಯರ್ ಹಾಗೂ ಥರ್ಡ್ ಪಾರ್ಟಿ ಇನ್ಸ್ಪೆಕ್ಷನ್ ಮಾಡುವವರಿಗೆ ಎಚ್ಚರಿಕೆ ನೀಡಿ ಗುಣಮಟ್ಟದ ಕೆಲಸ ಮಾಡುವಂತೆ ಸೂಚಿಸಿದ್ದೇನೆ ಎಂದು ತಿಳಿಸಿದರು.
ಕಳೆದ ಐವತ್ತು ವರ್ಷಗಳ ಹಿಂದೆ ಯೂನಿಯನ್ ಪಾರ್ಕ್ ಯಾವ ರೀತಿಯಲ್ಲಿತ್ತೋ ಅದೇ ರೀತಿಯ ರೂಪ ಕೊಡುವುದಕ್ಕಾಗಿ ಬೆಂಗಳೂರಿನಿಂದ ಲ್ಯಾಂಸ್ಸ್ಕೇಪ್ ಮಾಡುವವರನ್ನು ಕರೆಸಿ ಹೇಳಿದ್ದೇನೆ. ಒಟ್ಟಾರೆ ಚಿತ್ರದುರ್ಗ ನಗರದ ಎಲ್ಲಾ ಪಾರ್ಕ್ಗಳನ್ನು ಮೂರು ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ದಿಪಡಿಸಿ ವಾಕಿಂಗ್ಪಾಥ್, ಲಾನ್, ಓಪನ್ಜಿಮ್, ಮಕ್ಕಳ ಆಟಿಕೆ ಸಾಮಾಗ್ರಿಗಳನ್ನು ಅಳವಡಿಸಿ ಹಸಿರು ಹೊದಿಕೆಯಿಂದ ಕಂಗೊಳಿಸುವಂತೆ ಮಾಡಿ ನೋಡುಗರಿಗೆ ಸ್ವಚ್ಚಂದವಾದ ಪರಿಸರ ನಿರ್ಮಿಸಲಾಗುವುದು ಎಂದರು.
ನರೇಂದ್ರಮೋದಿ ದೇಶದ ಪ್ರಧಾನಿಯಾದ ಮೇಲೆ ಅಮೃತಸಿಟಿ, ಸ್ಮಾರ್ಟ್ ಸಿಟಿಗೆ ಹೆಚ್ಚಿನ ಅನುದಾನ ಮಂಜೂರು ಮಾಡಿದ್ದಾರೆ. ಅದರಂತೆ ಚಿತ್ರದುರ್ಗ ಅಮೃತ್ಸಿಟಿಗೆ ಆಯ್ಕೆಯಾಗಿರುವುದರಿಂದ 140 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಿದ್ದಾರೆ. ಅದರಲ್ಲಿ ಶಾಂತಿಸಾಗರ ಮತ್ತು ಹಿರಿಯೂರಿನ ವಾಣಿವಿಲಾಸ ಸಾಗರದಿಂದ ನಗರಕ್ಕೆ ಎರಡನೆ ಹಂತದ ಕುಡಿಯುವ ನೀರು ಪೂರೈಕೆಗಾಗಿ 112 ಕೋಟಿ ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ. ಮಳೆ ನೀರು ತಗ್ಗು ಪ್ರದೇಶಗಳ ಮನೆಗಳಿಗೆ ನುಗ್ಗುವುದನ್ನು ತಡೆಯುವುದಕ್ಕಾಗಿ ಹದಿನೆಂಟು ಕೋಟಿ ರೂ.ಗಳನ್ನು ಖರ್ಚು ಮಾಡಲಾಗುವುದು ಎಂದು ತಿಳಿಸಿದರು.
ಯೂನಿಯನ್ ಪಾರ್ಕ್ನಲ್ಲಿ ಇಂದಿರಾ ಕ್ಯಾಂಟಿನ್ ತೆರೆಯಲಾಗಿದೆ. ಬಡವರಿಗೆ ಆಹಾರ ನೀಡುತ್ತಿರುವುದು ಒಳ್ಳೆಯ ಕೆಲಸ. ಆದರೆ ಪಾರ್ಕಿನ ಒಂದು ಭಾಗದಲ್ಲಿ ಬೀಡಾಡಿ ದನಗಳನ್ನು ಕೂಡಲು ದೊಡ್ಡಿ ಮಾಡಲಾಗಿದೆ. ಮತ್ತೊಂದು ಕಡೆ ಶೌಚಾಲಯ ನಿರ್ಮಿಸಿ ಇಡೀ ಪಾರ್ಕಿನ ವ್ಯವಸ್ಥೆಯನ್ನು ಹಾಳು ಮಾಡಿರುವುದು ದುರಂತ. ಎಂದು ಅಸಮಾಧಾನ ವ್ಯಕ್ತಪಡಿಸಿದ ಶಾಸಕರು ಪಾರ್ಕ್ಗಳ ಅಭಿವೃದ್ದಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದರು.
ನಗರಸಭೆ ಸದಸ್ಯರುಗಳಾದ ಭಾಸ್ಕರ್, ತಾರಕೇಶ್ವರಿ, ಮಂಜುಳ, ಸ್ವಾಮಿವಿವೇಕಾನಂದ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರು ಮತ್ತು ಪದಾದಿಕಾರಿಗಳು, ಇಂಜಿನಿಯರ್ ಕೃಷ್ಣಮೂರ್ತಿ ಈ ಸಂದರ್ಭದಲ್ಲಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ