ಬೆಂಗಳೂರು
ಇಟ್ಟಿಗೆ ಕ್ಯಾಂಟರ್ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪಕ್ಕದ ರಸ್ತೆಗೆ ಬಂದು ಎದುರಿನಿಂದ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದು ಸ್ಥಳದಲ್ಲಿ ಮೂವರು ಮೃತಪಟ್ಟು ಓರ್ವ ಗಂಭೀರ ಗಾಯವಾಗಿರುವ ದುರ್ಘಟನೆ ನಗರದ ಹೊರವಲಯದ ಸೂರ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ನಸುಕಿನಲ್ಲಿ ನಡೆದಿದೆ.
ಮೃತರನ್ನು ಒರಿಸ್ಸಾ ಮೂಲದ ಇಟ್ಟಿಗೆ ಗೂಡು ಕೂಲಿ ಕಾರ್ಮಿಕರಾದ ರತನ್(25)ಸೇತು(24)ಹಾಗೂ ಪರಮೇಶ್(25)ಎಂದು ಗುರುತಿಸಲಾಗಿದೆ ಗಾಯಗೊಂಡಿರುವ ಲಾರಿ ಚಾಲಕ ಗೋಪಿಗೆ ಕಾಲು ಮುರಿದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಗ್ರಾಮಾಂತರ ಎಸ್ಪಿ ಡಾ.ರಾಮ್ನಿವಾಸ್ ತಿಳಿಸಿದ್ದಾರೆ.
ಇಟ್ಟಿಗೆ ತುಂಬಿಕೊಂಡು ತಮಿಳುನಾಡು ಕಡೆಗೆ ಹೋಗುತ್ತಿದ್ದ ಕ್ಯಾಂಟರ್ ಮುಂಜಾನೆ 5.45ರ ವೇಳೆ ಆನೇಕಲ್ನ ರಾಷ್ಟ್ರೀಯ ಹೆದ್ದಾರಿ 7ರ ತಿರುಮಗೊಂಡನಹಳ್ಳಿ ಬಳಿ ಟೈರ್ ಸ್ಪೋಟಗೊಂಡು ರಸ್ತೆ ವಿಭಜಕ ದಾಟಿ ಎದುರಿನಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿ ಹೊಡೆದ ರಭಸಕ್ಕೆ ಕ್ಯಾಂಟರ್ನಲ್ಲಿದ್ದ 3 ಜನ ಸ್ಥಳದಲ್ಲೇ ಮೃತಪಟ್ಟಿದ್ದರೆ ಲಾರಿ ಚಾಲಕ ಗೋಪಿ ಗಾಯಗೊಂಡಿದ್ದಾರೆ, ಅಪಘಾತದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳ್ಳಂಬೆಳಗ್ಗೆ ಸಂಚಾರ ದಟ್ಟಣೆ ಉಂಟಾಗಿ ಮೂರು ನಾಲ್ಕು ಕಿ.ಮೀ ಉದ್ದ ವಾಹನಗಳು ಸಾಲುಗಟ್ಟಿ ನಿಂತಿದ್ದವು.
ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಸೂರ್ಯನಗರ ಪೊಲೀಸರು ಭೇಟಿ ನೀಡಿ ಅಪಘಾತಗೊಂಡ ವಾಹನಗಳನ್ನು ತೆರವುಗೊಳಿಸಿ ರಸ್ತೆ ಸಂಚಾರ ಸುಗಮಗೊಳಿಸಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಬಸ್ ಪಲ್ಟಿ
ಮದ್ಯಪಾನ ಮಾಡಿ ಖಾಸಗಿ ಬಸ್ ಚಲಾಯಿಸಿ ಚಾಲಕ ಪಲ್ಟಿ ಹೊಡೆಸಿದ್ದರಿಂದ 11 ಮಂದಿ ಗಾಯಗೊಂಡ ಘಟನೆ ಕನಕಪುರದ ಅಂಗರಹಳ್ಳಿ ಬಳಿ ನಡೆದಿದೆ.
ಅಂಗರಹಳ್ಳಿಯ ಸುಮಾರು 40 ಮಂದಿ ಬೀಗರ ಔತಣ ಕೂಟಕ್ಕೆ ಕನಕಪುರದ ದೊಡ್ಡಮುದವಾಡಿಗೆ ಹೋಗಿದ್ದರು. ಊಟ ಮುಗಿಸಿ ವಾಪಸ್ಸಾಗುತಿದ್ದ ಬಸ್ಸನ್ನು ಮದ್ಯಪಾನ ಮಾಡಿ ಚಾಲಕ ಬಸ್ ಚಲಾಯಿಸಿದ್ದಾನೆ.
ಈ ಖಾಸಗಿ ಬಸ್ಸಿನಲ್ಲಿ ಸುಮಾರು 40 ಕ್ಕೂ ಹೆಚ್ಚು ಪ್ರಯಾಣಿಕರಿದ್ದರು.ಈ ವೇಳೆ ಅಂಗರಹಳ್ಳಿ ಗ್ರಾಮದ ಬಳಿ ತಿರುವಿನಲ್ಲಿ ಬಸ್ ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿ ಹೊಡೆದಿದೆ. ಈ ಘಟನೆಯಲ್ಲಿ ಓರ್ವನಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ರಾಮನಗರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ 10 ಕ್ಕೂ ಹೆಚ್ಚು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ.ಈ ಘಟನೆ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಚಾಲಕನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.