ಹುಳಿಯಾರು
ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಮಳೆ ಮುಂದುವರಿದಿದ್ದು ಸೋಮವಾರ ರಾತ್ರಿ ಸುರಿದ ಭಾರಿ ಮಳೆಗೆ ಹಂದನಕೆರೆ ಹೋಬಳಿಯ ನಿರುವಗಲ್ಲಿನ 3 ವಾಸದ ಮನೆಗಳು ಕುಸಿದಿದೆ.ನಿರುವಗಲ್ಲಿನ ಕೃಷಿಕ ಅನಂತಯ್ಯ ಅವರ ಮನೆ ಬಾಗಶಃ ಸಂಪೂರ್ಣ ಕುಸಿದಿದ್ದು ಮನೆಯಲ್ಲಿದ್ದ ಟಿವಿ, ಪಾತ್ರೆ, ದಿನಸಿ ಸೇರಿದಂತೆ ಅಪಾರ ನಷ್ಟವಾಗಿದೆ. ಮೊದಲೇ ಶಿಥಿಲವಾಗಿದ್ದ ಮನೆ ಕುಸಿಯುವ ಮುನ್ಸೂಚನೆ ಅರಿತು ಮನೆಯಲ್ಲಿದ್ದವರೆಲ್ಲರೂ ಹೊರ ಬಂದ ಪರಿಣಾಮ ಯಾವುದೇ ಪ್ರಾಣಾಪಾಯಗಳಾಗಿಲ್ಲ.
ಇನ್ನು ನಿರುವಗಲ್ಲು ಗೊಲ್ಲರಹಟ್ಟಿಯಲ್ಲಿ ಲೋಕೇಶ್ ಹಾಗೂ ಶಿವಮ್ಮ ಅವರಿಗೆ ಸೇರಿದ ವಾಸದ ಮನೆಗಳ ಗೋಡೆಗಳು ಬಿದ್ದಿದೆ. ಎರಡೂ ಮನೆಯ ಹಿಂಭಾಗದ ಗೋಟೆ ಬಿದ್ದಿದ್ದು ಲೋಕೇಶ್ ಅವರ ಮನೆಯ ಮೇಲ್ಚಾವಣಿಯ ತೀರುಗಳು ಸಹ ಧರೆಗುರುಳಿವೆ. ಶಿವಮ್ಮ ಅವರ ಮನೆಯ ಹೆಂಚುಗಳು ಕೆಳಗೆ ಬಿದ್ದು ನಷ್ಟವಾಗಿದೆ.
ಮಳೆಯಿಂದ 3 ಮನೆಗಳು ಬಿದ್ದ ತಕ್ಷಣ ಪಂಚಾಯತ್ ರಾಜ್ ಇಲಾಖೆ ಹಾಗೂ ಕಂದಾಯ ಇಲಾಖೆಯವರಿಗೆ ದೂರವಾಣಿ ಮೂಲಕ ಮಾಹಿತಿ ತಿಳಿಸಿದ್ದರೂ ಸಹ ಮೀಟಿಂಗ್ ಕಾರಣವೊಡ್ಡಿ ಯಾವೊಬ್ಬ ಅಧಿಕಾರಿಗಳೂ ಸಹ ಸ್ಥಳ ವೀಕ್ಷಣೆಗೆ ಬಂದಿಲ್ಲ ಎಂದು ಮನೆ ಕಳೆದುಕೊಂಡವರು ದೂರಿದ್ದಾರೆ.
ನಿರುಗಲ್ಲು ಅನಂತಯ್ಯ ಅವರು ಮನೆಯಿಲ್ಲದೆ ಸದ್ಯಕ್ಕೆ ಪಕ್ಕದ ಮನೆಯಲ್ಲಿ ಆಶ್ರಯ ಪಡೆದಿದ್ದು ಇವರಿಗೆ ತುರ್ತಾಗಿ ಮನೆ ನಿರ್ಮಾಣದ ಅಗತ್ಯವಿದೆ. ಹಾಗಾಗಿ ತಕ್ಷಣ ಮೇಲಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಮಳೆಯಿಂದ ನಷ್ಟ ಅನುಭವಿಸಿರುವ ಮೂವರಿಗೆ ಪರಿಹಾರ ಕೊಡುವಂತೆ ಅವರು ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ