ಕುಣಿಗಲ್
ರಾಜ್ಯ ಒಕ್ಕಲಿಗರ ಸಂಘದ ಜಿಲ್ಲಾ ಸದಸ್ಯರು 32 ಸಾವಿರಕ್ಕೂ ಹೆಚ್ಚಾಗಿದ್ದಾರೆ ಎಂದು ರಾಜ್ಯ ಒಕ್ಕಲಿಗರ ಸಂಘದ ಮಾಜಿ ಜಂಟಿ ಕಾರ್ಯದರ್ಶಿ ಆಡಿಟರ್ ನಾಗರಾಜು ತಿಳಿಸಿದರು.
ಪಟ್ಟಣದ ಒಕ್ಕಲಿಗರ ಸಂಘದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, 2013ರಲ್ಲಿ ಜಿಲ್ಲೆಯಲ್ಲಿ 2 ಸಾವಿರ ಇದ್ದ ಸದಸ್ಯರ ಸಂಖ್ಯೆಯು ಕಳೆದ 5 ವರ್ಷದ ಅವಧಿಯಲ್ಲಿ 32 ಸಾವಿರಕ್ಕೂ ಹೆಚ್ಚು ಸಂಘದ ಸದಸ್ಯರಾಗಿದ್ದು, ಇವರೆಲ್ಲರಿಗೂ ಗುರುತಿನ ಚೀಟಿಯನ್ನ ವಿತರಿಸುವಂತಹ ಕಾರ್ಯವನ್ನ ಕೈಗೊಂಡಿದ್ದು, ತುಮಕೂರಿನಲ್ಲಿ ಮಹಿಳಾ ವಿದ್ಯಾರ್ಥಿ ನಿಲಯದಲ್ಲಿ, ಪಾವಗಡದಲ್ಲಿ ಐಬಿಯಲ್ಲಿ ಉಳಿದಂತೆ ತಾಲ್ಲೂಕಿನ ಒಕ್ಕಲಿಗರ ಸಂಘದಲ್ಲಿ ಬರುವ ಜ.7, 8ರಂದು ವಿತರಿಸಲಾಗುವುದು ಎಂದರು.
ತಮ್ಮನ್ನ ಕಳೆದ 2 ಬಾರಿ ರಾಜ್ಯ ಒಕ್ಕಲಿಗರ ಸಂಘಕ್ಕೆ ಆಯ್ಕೆ ಮಾಡಿದ್ದು, ಈ ಸಂದರ್ಭದಲ್ಲಿ ಕಾನೂನು ರೀತಿ ಹೋರಾಟ ನಡೆಸಿ ಎಲ್ಲರಿಗೂ ಮುಕ್ತ ಸದಸ್ಯತ್ವ ನೀಡುವಂತೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಈ ಅವಕಾಶ ಲಭ್ಯವಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ಮಹಿಳಾ ವಿದ್ಯಾರ್ಥಿ ನಿಲಯವನ್ನ ಆರಂಭಿಸಿದ್ದು, ಹಳ್ಳಿಗಾಡಿನ ರೈತರ ಮಕ್ಕಳಿಗೆ ಕಡಿಮೆ ವೆಚ್ಚದಲ್ಲಿ ಆರೋಗ್ಯ ಶಿಬಿರಗಳನ್ನ ನಡೆಸಲಾಗುವುದು.
ತುಮಕೂರು ನಗರದಲ್ಲಿ ಕೆಂಪೇಗೌಡ ಆಸ್ಪತ್ರೆ ನಿರ್ಮಿಸಲು ಈಗಾಗಲೇ ನಿವೇಶನ ಕೇಳಿದ್ದು, ಕುಣಿಗಲ್ ತಾಲ್ಲೂಕಿನ ಮಾವಿನಕಟ್ಟೆ ಸರ್ಕಾರಿ ಜಾಗದಲ್ಲಿ ಡಿಪ್ಲೊಮಾ ಕಾಲೇಜು, ಹಾಸ್ಟೆಲ್ ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ರಾಜ್ಯ ಸಂಘದಲ್ಲಿ ಈಗಾಗಲೇ ಈ ಹಿಂದಿನ ಆಡಳಿತದ ಅವ್ಯವಹಾರದ ವಿರುದ್ಧ ತನಿಖೆ ನಡೆಯುತ್ತಿದ್ದು, ಹೈಕೋರ್ಟಿನಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿರುವುದರಿಂದ ಆ ಸದಸ್ಯರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮಾಜಿ ಜಿ.ಪಂ.ಸದಸ್ಯ ಗಂಗಶಾನಯ್ಯ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ