ಚೀಟಿ ಹಣ ಪಡೆದು ನಾಪತ್ತೆಯಾಗಿದ್ದ ಪ್ರಕರಣ:4 ಜನರ ಬಂಧನ

ತುಮಕೂರು:

     ಗೋಲ್ಡ್ ಬೆನಿಫಿಟ್ ಸ್ಕೀಂ ಆರಂಭಿಸಿ ಜನರಿಂದ ಚೀಟಿ ಹಣ ಪಡೆದು ನಾಪತ್ತೆಯಾಗಿದ್ದ ತುರುವೇಕೆರೆ ಪ್ರಕರಣದಲ್ಲಿ ಪೊಲೀಸರು ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

     ತುರುವೇಕೆರೆ ತಾಲ್ಲೂಕು ಟಿ.ಬಿ.ಕ್ರಾಸ್ ಬಳಿ ಆರೋಪಿಗಳಾದ ಮಂಜುನಾಥ ಮತ್ತು ಭರತ್ ಅವರನ್ನು ಜೂ.17 ರಂದು ವಶಕ್ಕೆ ಪಡೆದು, ಅವರ ಮಾಹಿತಿಯಿಂದ ಮತ್ತಿಬ್ಬರು ಆರೋಪಿಗಳಾದ ಗಂಗಾಧರ ಮತ್ತು ಶರತ್ ಅವರನ್ನು ಬಾಣಸಂದ್ರ ರೈಲ್ವೆ ಸ್ಟೇಷನ್ ಬಳಿ ತುರುವೇಕೆರೆ ಪೊಲೀಸರು ಬಂಧಿಸಿರುತ್ತಾರೆ.

ಪ್ರಕರಣದ ವಿವರ:

     2009 ರಲ್ಲಿ ತುರುವೇಕೆರೆ ಪಟ್ಟಣದಲ್ಲಿ ಮಂಜುನಾಥ್ ಮತ್ತು ಗಂಗಾಧರ್ ಎಂಬುವರು ತಳ್ಳುವ ಗಾಡಿಯಲ್ಲಿ ಸಿ.ಡಿಗಳನ್ನು ಮಾರಾಟ ಮಾಡುತ್ತಾ ಜೀವನ ಪ್ರಾರಂಭಿಸಿದ್ದರು. ನಂತರ ವೈ.ಟಿ.ರಸ್ತೆಯ ಕಟ್ಟಡ ಒಂದರಲ್ಲಿ ವೆರೈಟಿ ಸ್ಟೋರ್ ತೆಗೆದು ವ್ಯಾಪಾರ ಆರಂಭಿಸಿದರು. ಪಕ್ಕದಲ್ಲಿಯೇ ಬಟ್ಟೆ ಅಂಗಡಿ ಮತ್ತು ಜ್ಯೂಯಲರಿ ಅಂಗಡಿಯನ್ನು ತೆರೆದರು. ಸಾರ್ವಜನಿಕರಿಗೆ ನಂಬಿಕೆ ಬರುವಂತೆ ಮಾಡಿ ಗೋಲ್ಡ್ ಬೆನಿಫಿಟ್ ಸ್ಕೀಂ ಮತ್ತು ಚೀಟಿ ವ್ಯವಹಾರ ಪ್ರಾರಂಭಿಸಿದರು. ಇದರಿಂದ ಉತ್ತಮ ಆಕರ್ಷಣೆ ವ್ಯಕ್ತವಾಯಿತು.

      ಹೆಚ್ಚಿನ ವ್ಯಾಪಾರ ಮಾಡುವ ಉದ್ದೇಶದಿಂದ 2017 ರಲ್ಲಿ ತಾಲ್ಲೂಕು ಕಚೇರಿ ರಸ್ತೆಯಲ್ಲಿ ಶೇಷಾನಂದ ಎಂಬುವರ ಎರಡು ಮಹಡಿ ಅಂಗಡಿಯನ್ನು ಬಾಡಿಗೆ ಪಡೆದು ನೆಲಮಹಡಿಯಲ್ಲಿ ಬಟ್ಟೆ ಅಂಗಡಿ, ಒಂದನೇ ಮಹಡಿಯಲ್ಲಿ ಚಿನ್ನ, ಬೆಳ್ಳಿ ಅಂಗಡಿ, ಎರಡನೇ ಮಹಡಿಯಲ್ಲಿ ದಾಸ್ತಾನು ಮಳಿಗೆ ಮಾಡಿಕೊಂಡು ವ್ಯವಹಾರ ಆರಂಭಿಸಿದರು. ಅಂಗಡಿಯಲ್ಲಿ ಮಂಜುನಾಥ ತಮ್ಮ ಗಂಗಾಧರ ಇವರ ಅಣ್ಣ ಶಿವಕುಮಾರನ ಮಕ್ಕಳಾದ ಶರತ್ ಮತ್ತು ಭರತ್ ಸೇರಿಕೊಂಡು ವ್ಯಾಪಾರ ಮಾಡುತ್ತಾ ಐಷಾರಾಮಿ ಜೀವನ ನಡೆಸುತ್ತಿದ್ದರು.

      ವ್ಯಾಪಾರ ಚೆನ್ನಾಗಿ ಆಗುತ್ತಿದ್ದುದರಿಂದ ಗೋಲ್ಡ್ ಬೆನಿಫಿಟ್ ಸ್ಕೀಂಗೆ 350 ರಿಂದ 400 ಜನರು ಸದಸ್ಯರಾದರು. ತಿಂಗಳಿಗೆ 500 ರೂ.ಗಳಿಂದ 2000ರೂ.ಗಳ ವರೆಗೆ ವಿವಿಧ ಬೆಲೆಯ ಗೋಲ್ಡ್ ಸ್ಕೀಂ ಮಾಡಿ ಪ್ರತಿ ತಿಂಗಳು ಡ್ರಾ ಮಾಡಿ ವಿಜೇತರಿಗೆ ಬಹುಮಾನ ನೀಡಿ ಉಳಿದವರಿಗೆ ಕೊನೆಯಲ್ಲಿ ಕೊಡುವುದಾಗಿ ನಂಬಿಸಿದ್ದರು.

        ಚಿನ್ನದ ಅಂಗಡಿಗೆ ಬರುತ್ತಿದ್ದ ಗಿರಾಕಿಗಳಿಗೆ ನಿಮ್ಮ ಹಳೆಯ ಚಿನ್ನವನ್ನು ಕೊಟ್ಟರೆ ನಾಲ್ಕು ತಿಂಗಳ ನಂತರ ಯಾವುದೇ ವೇಸ್ಟೇಜ್ ಇಲ್ಲದೆ 916 ಮಾದರಿಯ ಅಷ್ಟೇ ತೂಕದ ಚಿನ್ನವನ್ನು ಮಾಡಿಕೊಡುವುದಾಗಿ 50-60 ಜನರಿಂದ ಸುಮಾರು 2 ಕೆ.ಜಿ. ಚಿನ್ನವನ್ನು ಪಡೆದು ಮಾರಾಟ ಮಾಡಿ ಜನರಿಗೆ ಕೊಡದೆ ವಂಚನೆ ಮಾಡಿರುತ್ತಾರೆ. ಅಲ್ಲದೆ, ಚೀಟಿಗಳ ಹಣವನ್ನೂ ಕೊಡದೆ ಸುಮಾರು 50 ಲಕ್ಷ ರೂ. ಹಣ ಮೋಸ ಮಾಡಿರುತ್ತಾರೆ.

       ನಾಗರಿಕರಿಗೆ ಹೆಚ್ಚಿನ ಬಡ್ಡಿ ಕೊಡುತ್ತೇವೆಂದು ಸುಮಾರು 50 ಲಕ್ಷ ರೂ.ಗಳನ್ನು ವಂಚನೆ ಮಾಡುವ ಉದ್ದೇಶದಿಂದ ಮೇ 27 ರಂದು ಅಂಗಡಿಗೆ ಬೀಗ ಹಾಕಿಕೊಂಡು ಊರು ಬಿಟ್ಟು ತಲೆಮರೆಸಿಕೊಂಡಿದ್ದರು. ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಜೂ.15 ರಂದು ಐಪಿಸಿ ಕಲಂ 406 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕುಣಿಗಲ್ ಡಿಎಸ್ಪಿ ರಾಮಲಿಂಗೇಗೌಡ ನೇತೃತ್ವದಲ್ಲಿ ತಂಡ ರಚಿಸಿದ್ದರು.

       ಅವರ ಜೊತೆ ಸಿಪಿಐ ಮಹಮದ್ ಸಲೀಂ, ಪಿಎಸ್‍ಐ ಜಿ.ಪಿ.ರಾಜು ಮತ್ತು ತಂಡ ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಿದ್ದಾರೆ. ಎಸ್.ಎಸ್.ಐ. ಶಿವಲಿಂಗಪ್ಪ ಸಿಬ್ಬಂದಿಗಳಾದ ರಾಜಕುಮಾರ, ಉಮೇಶ್, ಮಂಜುನಾಥ್, ಮಧುಸೂದನ, ಶಶಿಧರ, ಮುತ್ತಣ್ಣ, ನಾಗರಾಜ ಕಮ್ಮತ್ತರ್, ಸಂಜುವಾಡ, ಶಿವರಾಜ್ ಕುಮಾರ್, ಸುಪ್ರೀತ್, ಸಾಯಬಣ್ಣ, ನಂದರಗಿ ಪಾರ್ವತಮ್ಮ ಅವರುಗಳನ್ನು ಪೊಲೀಸ್ ವರಿಷ್ಠರಾದ ಡಾ.ವಂಶಿಕೃಷ್ಣ ಪ್ರಶಂಸಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link