ಬೆಂಗಳೂರು
ಮಾರತ್ತಹಳ್ಳಿಯ ಅಶ್ವತ್ ನಗರದಲ್ಲಿ ಬೈಲಾವನ್ನು ಉಲ್ಲಂಘಿಸಿ ಕಟ್ಟಲಾಗಿದ್ದ 4 ಅಂತಸ್ತಿನ ಕಟ್ಟಡವೊಂದು ದಿಢೀರನೆ ವಾಲಿಕೊಂಡಿದ್ದರ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಕಟ್ಟಡವನ್ನು ತೆರವುಗೊಳಿಸಲಾಗಿದ್ದು ಕಟ್ಟಡದ ಮಾಲೀಕ ಶಿವಪ್ರಸಾದ್ ಮತ್ತು ಗುತ್ತಿಗೆದಾರ ವೆಂಕಟೇಶಪ್ಪ ಅವರನ್ನು ಹೆಚ್ಎಎಲ್ ಪೊಲೀಸರು ಬಂಧಿಸಿದ್ದಾರೆ.
ಬಿಬಿಎಂಪಿ ನಿಯಮದ ಪ್ರಕಾರ 1+2 ಸೇರಿದಂತೆ ಮೂರು ಅಂತಸ್ತಿನ ಕಟ್ಟಡವನ್ನು ನಿರ್ಮಿಸಲು ಮಾತ್ರ ಅವಕಾಶವಿದೆ. ಆದರೆ ಕಟ್ಟಡದ ಮಾಲೀಕರು ಮೂರು ತಿಂಗಳ ಹಿಂದೆ ನಿಯಮವನ್ನು ಉಲ್ಲಂಘಿಸಿ 4 ಅಂತಸ್ತಿನ ಕಟ್ಟಡ ನಿರ್ಮಿಸಿ, ಪಿಜಿ ನಡೆಸುತ್ತಿದ್ದರು. ಗುರುವಾರ ದಿಡೀರನೆ ಕಟ್ಟಡದ ಪಿಲ್ಲರ್ನಲ್ಲಿ ಬಿರುಕುಬಿಟ್ಟು ವಾಲಿಕೊಂಡು ಕುಸಿದು ಬೀಳುವ ಹಂತ ತಲುಪಿದ್ದು ಕೂಡಲೇ ಮುಂಜಾಗರೂಕತೆ ಕ್ರಮವಾಗಿ ಕಟ್ಟಡದಲ್ಲಿರುವ ನಿವಾಸಿಗಳು ಮತ್ತು ಅಕ್ಕ-ಪಕ್ಕದಲ್ಲಿರುವ ಮನೆಗಳ ನಿವಾಸಿಗಳನ್ನು ಸ್ಥಳಾಂತರಿಸಿ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಲಾಗಿತ್ತು
ವಾಲಿದ್ದ ಕಟ್ಟಡವನ್ನು ಶುಕ್ರವಾರ ಬೆಳಿಗ್ಗೆ ಕೆಡವಿ ಹಾಕುವ ಕಾರ್ಯಾಚರಣೆಗೆ ಚಾಲನೆ ನೀಡಲಾಗಿದೆ. ಇಂದಿನಿಂದ ಮೂರು ದಿನಗಳವರೆಗೆ ನೆಲಸಮ ಕಾರ್ಯಾಚರಣೆ ನಡೆಯಲಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
4 ಅಂತಸ್ತಿನ ಕಟ್ಟಡ ವಾಲಿರುವುದನ್ನು ನೋಡಲು ಸಾವಿರಾರು ಜನ ಜಮಾಯಿಸಿದ್ದರಿಂದ ಸಂಚಾರ ದಟ್ಟಣೆ ಉಂಟಾಗಿತ್ತು. ನೆಲಸಮ ಕಾರ್ಯಾಚರಣೆಗೆ ಅಡ್ಡಿಯಾಗುತ್ತದೆ ಎಂಬ ಕಾರಣಕ್ಕಾಗಿ ಜನರನ್ನು ಅಲ್ಲಿಂದ ಚದುರಿಸಲಾಯಿತು.ಹೆಚ್ ಎ ಎಲ್ ಪೊಲೀಸ್ ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








